
ಹಿರಿಯೂರು: ತಾಲ್ಲೂಕಿನ 80 ಪಡಿತರ ವಿತರಣಾ ಕೇಂದ್ರಗಳಲ್ಲಿ ನೆಟ್ವರ್ಕ್ ಸಮಸ್ಯೆಯ ಕಾರಣಕ್ಕೆ ಸಾವಿರಾರು ಫಲಾನುಭವಿಗಳು ಭಾನುವಾರ ಪರದಾಡಬೇಕಾಯಿತು. ಸಾಲುಗಟ್ಟಿ ಕಾಯುತ್ತಿದ್ದ ಜನರು, ಪಡಿತರ ಸಿಗದಿದ್ದರಿಂದ ಸಹಕಾರ ಸಂಘದವರಿಗೆ ಹಿಡಿಶಾಪ ಹಾಕಿ ಮರಳಿದರು.
‘ಮೂರು ದಿನಗಳಿಂದ ಬೆಳ್ಳಂಬೆಳಿಗ್ಗೆ ಚಳಿಯನ್ನೂ ಲೆಕ್ಕಿಸದೆ ಸೊಸೈಟಿಗೆ ಬಂದರೆ, ಇಲ್ಲಿ ಸರ್ವರ್ ಸಮಸ್ಯೆ ಇದೆ. ಸ್ವಲ್ಪ ಕಾಯಬೇಕು ಎಂದು ನಮ್ಮನ್ನು ಕಾಯಿಸುತ್ತಲೇ ಇದ್ದಾರೆ. ಇವರು ಕೊಡುವ ಹತ್ತು ಕೆ.ಜಿ. ಅಕ್ಕಿಗೆ ಮೂರು ದಿನ ಕೂಲಿ ಬಿಟ್ಟಿದ್ದೇನೆ. ಇವರು ಹೇಳುವ ಸರ್ವರ್ ಅದ್ಯಾವಾಗ ಸರಿ ಹೋಗುತ್ತೋ, ನಮಗೆ ಅಕ್ಕಿ ಯಾವಾಗ್ ಸಿಗುತ್ತೋ ತಿಳಿಯುತ್ತಿಲ್ಲ. ಮನೆಯಿಂದ ಕ್ಷಣಕ್ಕೊಮ್ಮೆ ಕರೆ ಮಾಡಿ, ಇನ್ನೂ ಅಕ್ಕಿ ಕೊಟ್ಟಿಲ್ಲವೇ ಎಂದು ಕೇಳುತ್ತಾರೆ. ನಮಗಂತೂ ಪಡಿತರ ಪಡೆಯುವುದು ದೊಡ್ಡ ಸಾಹಸ ಎನಿಸಿದೆ’ ಎಂದು ವಾಣಿವಿಲಾಸಪುರದ ಷರೀಫಾಬಿ ಎಂಬವರು ಸುದ್ದಿಗಾರರ ಮುಂದೆ ಬೇಸರ ಹೊರಹಾಕಿದರು.
‘ಪಡಿತರ ತರಲು ಹೋಗಿ ಅಂದರೆ ಮನೆಯಲ್ಲಿ ಯಾರೂ ತಯಾರಿರುವುದಿಲ್ಲ. ಸೊಸೈಟಿ ಮುಂದೆ ಚಳಿ–ಬಿಸಿಲಿನಲ್ಲಿ ನಿಂತು ಕಾಯಬೇಕು. ಕೂರಲು ಎಲ್ಲೂ ಜಾಗ ಇರುವುದಿಲ್ಲ. ಗಂಡಸರು–ಹೆಂಗಸರು ಎನ್ನದೆ ಒಂದೇ ಸಾಲಿನಲ್ಲಿ ನಿಂತಿರುತ್ತೇವೆ. ಅದರಲ್ಲಿಯೇ ಕೆಲವರು ಬೀಡಿ ಹಚ್ಚಿಕೊಳ್ಳುತ್ತಾರೆ, ಕೇಳಿದರೆ ಚಳಿ ಎನ್ನುತ್ತಾರೆ. ಆಕಡೆ ಹೋಗಿ ಎಂದರೆ ಸರದಿ ತಪ್ಪುತ್ತದೆ ಎಂದು ಸಬೂಬು ಹೇಳುತ್ತಾರೆ. ಕೆಲವರಂತೂ ಅಕ್ಕಿಯೂ ಸಿಗದೆ, ಅತ್ತ ಕೂಲಿಗೂ ಹೋಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ನಮ್ಮ ಮನೆಯಲ್ಲಿ ಗಂಡ ಕೆಲಸಕ್ಕೆ ಹೋಗುತ್ತಾರೆ. ಮಕ್ಕಳು ಶಾಲೆಗೆ ಹೋಗುತ್ತವೆ. ಅವರಿಗೆಲ್ಲ ಬೆಳಿಗ್ಗೆ 6 ಗಂಟೆಗೇ ಅಡುಗೆ ತಯಾರಿಸಿಟ್ಟು ಬರಬೇಕು. ಈ ಪಡಿತರದ ಸಹವಾಸವೇ ಬೇಡ ಎಂಬಂತಾಗಿದೆ’ ಎಂದು ಬಬ್ಬೂರಿನ ಜಯಮ್ಮ ಹತಾಶೆ ವ್ಯಕ್ತಪಡಿಸಿದರು.
ಎರಡು ಬಾರಿ ಬೆರಳಚ್ಚು: ಫಲಾನುಭವಿಯೊಬ್ಬರಿಗೆ ಕೇಂದ್ರ ಸರ್ಕಾರ ನೀಡುವ 5 ಕೆ.ಜಿ., ರಾಜ್ಯ ಸರ್ಕಾರ ನೀಡುವ 5 ಕೆ.ಜಿ. ಅಕ್ಕಿ ಸಿಗುತ್ತದೆ. ಹೀಗಾಗಿ ಎರಡೆರಡು ಬಾರಿ ಬೆರಳಚ್ಚು ಕೊಡಬೇಕು. ಸರ್ವರ್ ಸರಿ ಇಲ್ಲದಿದ್ದರೆ ಬೆರಳಚ್ಚನ್ನು ಸ್ವೀಕರಿಸುವುದಿಲ್ಲ.
‘ಮೊದಲೆಲ್ಲಾ ಕಾರ್ಡ್ನಲ್ಲಿ ನಮೂದಿಸಿ ಕೆಲವೇ ನಿಮಿಷಗಳಲ್ಲಿ ಪಡಿತರ ವಿತರಿಸುತ್ತಿದ್ದರು. ಆಗಿನ ವ್ಯವಸ್ಥೆಯೇ ಸರಿ ಇತ್ತು. ಈಗ ದಿನಕ್ಕೆ ಹೆಚ್ಚೆಂದರೆ 20–25 ಜನರ ಬೆರಳಚ್ಚು ಕೊಡುವುದು ಕಷ್ಟವಾಗಿದೆ. ಒಂದು ಸಾವಿರ ಕಾರ್ಡ್ದಾರರು ಇದ್ದರೆ ಇಡೀ ತಿಂಗಳು ಪಡಿತರ ವಿತರಿಸಬೇಕಾಗುತ್ತದೆ. ನಮಗೆ ಯಾವತ್ತು ಪಡಿತರ ಸಿಗುತ್ತದೆ ಎಂದು ತಿಳಿಯವುದು ಹೇಗೆ?’ ಎಂದು ಷರೀಫಾಬಿ ಪ್ರಶ್ನಿಸುತ್ತಾರೆ.
ಸರ್ವರ್ ಸರಿ ಇದ್ದಾಗ ಈಗಿನ ಪದ್ಧತಿ ಅನುಸರಿಸಲಿ. ಸರ್ವರ್ ಸರಿ ಇಲ್ಲದ ಸಮಯದಲ್ಲಿ ಹಳೆಯ ಪದ್ಧತಿಯಂತೆ ಪಡಿತರ ವಿತರಿಸಲಿ. ಉಚಿತ ಅಕ್ಕಿ ಕೊಡುತ್ತೇವೆ ಎಂಬ ಕಾರಣಕ್ಕೆ ಜನರನ್ನು ಪೀಡಿಸುವ ಪದ್ಧತಿ ನಿಲ್ಲಲಿಜಯಮ್ಮ ಸ್ಥಳೀಯರು
‘ಬಾಯಿಗೆ ಬಂದಂತೆ ನಿಂದನೆ’
ಭಾನುವಾರ ಬೆಳಿಗ್ಗೆಯಿಂದ ಸರ್ವರ್ ಸಮಸ್ಯೆ ಕಾಣಿಸಿಕೊಂಡಿದೆ. ಸರ್ವರ್ ಸರಿ ಇದ್ದರೆ ನಿತ್ಯ 200–250 ಜನರಿಗೆ ಪಡಿತರ ಕೊಡುತ್ತೇವೆ. ಈಗ 40–50 ಜನರಿಗೆ ಕೊಡುವುದೂ ಕಷ್ಟವಾಗಿದೆ ಎಂದು ವಾಣಿವಿಲಾಸಪುರ ಸೊಸೈಟಿ ಕಾರ್ಯದರ್ಶಿ ಎಸ್.ಎಸ್. ರಂಗಪ್ಪ ಹೇಳಿದರು. ‘ಪಡಿತರ ಪಡೆಯಲು ಬಂದವರು ನಮ್ಮನ್ನು ಬಾಯಿಗೆ ಬಂದಂತೆ ನಿಂದಿಸುತ್ತಾರೆ. ಇದರಲ್ಲಿ ನಮ್ಮ ಪಾತ್ರವೇ ಇಲ್ಲ. ಇಡೀ ತಾಲ್ಲೂಕಿನಲ್ಲಿ ಸರ್ವರ್ ಸಮಸ್ಯೆ ಕಾಣಿಸಿಕೊಂಡಿದ್ದು ನಾವು ಬಾಗಿಲು ತೆರೆದು ಸರ್ವರ್ ಸರಿಯಾಗಲಿ ಎಂದು ಬೇಡಿಕೊಂಡು ಕೂತಿದ್ದೇವೆ’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.