
ಹಿರಿಯೂರು: ವಿದ್ಯಾರ್ಥಿ ದೆಸೆಯಲ್ಲಿಯೇ ಅಡುಗೆ ತಯಾರಿಕೆ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವ ಜೊತೆಗೆ ವ್ಯವಹಾರ ಜ್ಞಾನವೂ ಬೆಳೆಯಲಿ ಎಂಬ ಕಾರಣಕ್ಕೆ ಫುಡ್ ಫೆಸ್ಟಿವಲ್ ಆಯೋಜಿಸಲಾಗಿದೆ ಎಂದು ವಾಣಿವಿಲಾಸ ವಿದ್ಯಾಸಂಸ್ಥೆ ಕಾರ್ಯದರ್ಶಿ ಆಲೂರು ಹನುಮಂತರಾಯಪ್ಪ ಹೇಳಿದರು.
ನಗರದ ನೆಹರು ಮೈದಾನದಲ್ಲಿರುವ ವಿದ್ಯಾಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಆಹಾರ ಹಬ್ಬ ಉದ್ಘಾಟಿಸಿ ಮಾತನಾಡಿದರು.
ಅಡುಗೆ ಕಲೆ ಗೊತ್ತಿದ್ದರೆ ಕನಿಷ್ಟ ಕುಟುಂಬದ ಹೊಟ್ಟೆ ತುಂಬಿಸಬಹುದು. ಅದನ್ನೇ ಉದ್ಯಮ ಮಾಡಿಕೊಳ್ಳಬೇಕು ಎನಿಸಿದರೆ ಹೋಟೆಲ್ ಆರಂಭಿಸಬಹುದು. ತಯಾರಿಸುವ ಅಡುಗೆ ಶುಚಿ–ರುಚಿಯಾಗಿದ್ದರೆ ಹೋಟೆಲ್ ಎಷ್ಟು ದೂರವಿದ್ದರೂ ಗ್ರಾಹಕರು ಹುಡುಕಿ ಬರುತ್ತಾರೆ. ಇಂದು ಹೋಟೆಲ್ ಉದ್ಯಮ ಅತ್ಯಂತ ಲಾಭದಾಯಕವಾಗಿದ್ದು, ವಿದ್ಯಾರ್ಥಿಗಳು ಭವಿಷ್ಯದಲ್ಲಿ ಇದರಿಂದಲೂ ಬದುಕು ಕಟ್ಟಿಕೊಳ್ಳಬಹುದು ಎಂದು ತಿಳಿಸಿದರು
ಕಡಿಮೆ ದರದಲ್ಲಿ ಗುಣಮಟ್ಟದ ಉಪಹಾರ ದೊರೆಯುವ ಸ್ಥಳವನ್ನು ಹುಡುಕಿ ಹೋಗುವ ದೊಡ್ಡ ಗ್ರಾಹಕ ವರ್ಗವಿದೆ. ಬೇಕರಿ, ಪಾನಿಪೂರಿ ಅಂಗಡಿ, ಕಾಫಿ ಕೆಫೆಗಳು ಇಂದು ಜನಪ್ರಿಯವಾಗಿ ಎಂದು ಹನುಮಂತರಾಯಪ್ಪ ಹೇಳಿದರು.
ಆಹಾರ ಹಬ್ಬದಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಪಾನಿಪೂರಿ, ಬೇಬಿಕಾರ್ನ್, ಪಾವ್ ಬಾಜಿ, ನಿಪ್ಪಟ್ಟುಮಸಾಲ, ಫ್ರೂಟ್ ಸಲಾಡ್, ಚುರುಮುರಿ, ಹಣ್ಣಿನ ಜ್ಯೂಸ್, ಜಾಮೂನ್, ರಸಗುಲ್ಲ, ಫ್ರೆಂಚ್ ಫ್ರೈ, ಮಸಾಲ ವಡೆ–ಚಟ್ನಿ, ಸಮೋಸ, ಸ್ಯಾಂಡ್ ವಿಚ್ ಮೊದಲಾದ ಆಹಾರ ಪದಾರ್ಥಗಳನ್ನು ಮಾರುವ ಮೂಲಕ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಸೌಮ್ಯಾ, ವ್ಯವಸ್ಥಾಪಕಿ ವಸಂತಾ, ಆಡಳಿತಾಧಿಕಾರಿ ಹೇಮಲತಾ, ಕೋಆರ್ಡಿನೇಟರ್ ರಚನಾ ಹಾಗೂ ಸಹಶಿಕ್ಷಕಿಯರು, ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.