ಚಿತ್ರದುರ್ಗ: ಮಹಿಳೆಯರ ಕುರಿತು ಅಗೌರವ ತೋರಿರುವ ಹಾಗೂ ಅತ್ಯಾಚಾರ ಪ್ರಕರಣಗಳ ಸಂಬಂಧ ಮಾಜಿ ಸಭಾಪತಿ, ಕಾಂಗ್ರೆಸ್ ಶಾಸಕ ರಮೇಶ್ಕುಮಾರ್ ಹಾಸ್ಯಸ್ಪದ ಹೇಳಿಕೆ ನೀಡಿರುವುದನ್ನು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ತೀವ್ರವಾಗಿ ಖಂಡಿಸಿದೆ.
‘ರಾಜ್ಯದಲ್ಲಿ ಕಾನೂನು, ನೀತಿ–ನಿಯಮ ರೂಪಿಸುವ ಪ್ರಜಾಪ್ರಭುತ್ವದ ಪವಿತ್ರ ಸ್ಥಾನವೆಂದು ಪರಿಗಣಿಸಲಾದ ವಿಧಾನಸಭೆ ಅಧಿವೇಶನದಲ್ಲಿ ಗಂಭೀರ ಚರ್ಚೆಯ ವೇಳೆಯೇ ಅತ್ಯಾಚಾರದ ವಿಷಯ ಹಗುರಗೊಳಿಸುವ ಹೇಳಿಕೆ ನೀಡಿ ಮಹಿಳಾ ಕುಲವನ್ನು ಅಪಚಾರ ಮಾಡಿದ್ದಾರೆ’ ಎಂದು ಎಸ್ಯುಸಿಐ (ಸಿ) ರಾಜ್ಯ ಕಾರ್ಯದರ್ಶಿ ಕೆ.ಉಮಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ರಮೇಶ್ಕುಮಾರ್ ಮಾತುಗಳಿಗೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ನಕ್ಕಿದ್ದಾರೆ. ಉಳಿದ ಶಾಸಕರು ಸುಮ್ಮನೆ ಕುಳಿತಿದ್ದಾರೆ. ಇವೆಲ್ಲವೂ ಜನಪ್ರತಿನಿಧಿಗಳಲ್ಲಿ ಆಳವಾಗಿ ಬೇರೂರಿರುವ ಪುರುಷ ಪ್ರಧಾನ ಧೋರಣೆ ಮತ್ತು ಅಸೂಕ್ಷ್ಮತೆ ಎತ್ತಿ ತೋರಿಸುತ್ತಿದೆ’ ಎಂದು ದೂರಿದ್ದಾರೆ.
ಮಹಿಳೆಯರ ಪರ ಎಂದು ಬಿಂಬಿಸಿಕೊಳ್ಳುವ ಬಂಡವಾಳಶಾಹಿ ರಾಜಕೀಯ ಪಕ್ಷಗಳ ಮುಖಂಡರ ನೈಜ ಬಣ್ಣವನ್ನು ಇದು ಬಯಲು ಮಾಡಿದಂತಿದೆ. ಸಮಾಜದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಹೆಚ್ಚುತ್ತಿರುವ ದುಃಸ್ಥಿತಿಯಲ್ಲಿ ಸಮಾಜವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿರುವ ಜನಪ್ರತಿನಿಧಿಗಳ ಬೇಜವಾಬ್ದಾರಿ ಮಾತುಗಳು ನಾಗರಿಕ ಸಮಾಜಕ್ಕೆ ಶೋಭೆ ತರುವಂತದ್ದಲ್ಲ ಎಂದು ಎಸ್ಯುಸಿಐ (ಸಿ) ರವಿಕುಮಾರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.