ADVERTISEMENT

ಸರ್ಕಾರಿ ಕಡತ ರಕ್ಷಿಸಲು ತಾಡಪಾಲೇ ಗತಿ

ಪರಶುರಾಂಪುರ ನಾಡಕಚೇರಿ: ಶಿಥಿಲ ಕಟ್ಟಡ; ಕೊರತೆಗಳ ಕೂಪ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 2:28 IST
Last Updated 17 ಆಗಸ್ಟ್ 2021, 2:28 IST
ಪರಶುರಾಂಪುರ ನಾಡಕಚೇರಿ (ಎಡಚಿತ್ರ). ದಾಖಲೆಗಳು ತೋಯ್ದು ಹೋಗದಂತೆ ರಕ್ಷಿಸಲು ತಾಡಪಾಲು ಹಾಕಿರುವುದು.
ಪರಶುರಾಂಪುರ ನಾಡಕಚೇರಿ (ಎಡಚಿತ್ರ). ದಾಖಲೆಗಳು ತೋಯ್ದು ಹೋಗದಂತೆ ರಕ್ಷಿಸಲು ತಾಡಪಾಲು ಹಾಕಿರುವುದು.   

ಪರಶುರಾಂಪುರ: ಜಿಲ್ಲೆಯಲ್ಲಿಯೇ ಅತಿ ದೊಡ್ಡ ಹೋಬಳಿ ಕೇಂದ್ರವಾದ ಪರಶುರಾಂಪುರವು 52ಕ್ಕೂ ಹೆಚ್ಚು ಹಳ್ಳಿಗಳು 19 ಪಿರ್ಕಾಗಳನ್ನು ಒಳಗೊಂಡಿವೆ. ಆದರೆ, ನಾಡಕಚೇರಿ ಮಾತ್ರ ಶಿಥಿಲವಾಗಿದೆ. ಇಲ್ಲಿನ ಕಡತ ರಕ್ಷಿಸಲು ಸಿಬ್ಬಂದಿ ತಾಡಪಾಲು ಮೊರೆ ಹೋಗಿರುವುದು ಮೂಲಸೌಲಭ್ಯ ಕೊರತೆಯನ್ನು ಎತ್ತಿ ತೋರಿಸುತ್ತಿದೆ.

ಪ್ರತಿದಿನ ಸಾವಿರಾರು ಜನರು ಇಲ್ಲಿನ ನಾಡಕಚೇರಿಗೆ ಒಂದಲ್ಲ ಒಂದು ಕೆಲಸಕ್ಕೆ ಬರುತ್ತಾರೆ. ಹಲವು ದಾಖಲೆಗಳು ಇಲ್ಲಿ ಇರುತ್ತವೆ. ಆದರೆ, ಈ ಅಮೂಲ್ಯ ದಾಖಲೆಗಳು ಮಳೆ ಬಂದರೆ ತೋಯ್ದ ಹೋಗುತ್ತವೆ ಎಂಬ ಭೀತಿ ಇಲ್ಲಿಯ ಸಿಬ್ಬಂದಿಯನ್ನು ಕಾಡುತ್ತಿದೆ. ಇಲ್ಲಿಯ ಶಿಥಿಲ ಕಟ್ಟಡದಿಂದ ಮುಕ್ತಿ ಎಂದು? ಸುಸಜ್ಜಿತ ಕಟ್ಟಡಕ್ಕೆ ಹೋಗುವುದು ಯಾವಾಗ ಎಂದು ಅವರು ಎದುರು ನೋಡುತ್ತಿದ್ದಾರೆ.

ಹೋಬಳಿಗೆ ಸೇರಿದ ಸಾವಿರಾರು ವಿದ್ಯಾರ್ಥಿಗಳು ಜಾತಿ, ಆದಾಯ ಪ್ರಮಾಣ ಪತ್ರ ಮಾಡಿಸಲು ಇಲ್ಲಿಗೆ ದಾಖಲೆ ನೀಡುತ್ತಾರೆ. ಹಿಂದಿನ ಕಾಲದ ಕೈಬರಹದ ಪಾಣಿ, ಪಟ್ಟ, ಜಮೀನಿಗೆ ಸಂಬಧಿಸಿದ ದಾಖಲೆಗಳು ಇಲ್ಲಿದ್ದು, ಅವುಗಳನ್ನು ರಕ್ಷಿಸಬೇಕಿದೆ. ಇಲ್ಲಿಯ ಸಿಬ್ಬಂದಿಯೇ ತಾತ್ಕಾಲಿಕವಾಗಿ ತಾಡಪಾಲು ವ್ಯವಸ್ಥೆಯನ್ನು ಕಲ್ಪಿಸಿಕೊಂಡಿದ್ದಾರೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಶೀಘ್ರದಲ್ಲಿ ನೂತನ ಕಟ್ಟಡವನ್ನು ಕಲ್ಪಿಸಬೇಕು ಎಂದು ಸ್ಥಳೀಯರಾದ ಸುರೇಶ, ನವೀನ, ಅನಿಲ, ಮೌನೇಶ, ರಾಜಣ್ಣ, ನಾಗರಾಜ ಒತ್ತಾಯಿಸಿದ್ದಾರೆ.

ADVERTISEMENT

‘60 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಈ ಕಟ್ಟಡವು ಮೊದಲು ಆರೋಗ್ಯ ಕೇಂದ್ರದ ಸಿಬ್ಬಂದಿಯ ವಸತಿಗೃಹವಾಗಿತ್ತು. 1989ರಲ್ಲಿ ನಾಡ ಕಚೇರಿ ಆರಂಭವಾದಾಗ ಈಗಿರುವ ಕಟ್ಟಡವನ್ನು ನಾಡ ಕಚೇರಿಗೆ ಬಿಟ್ಟು ಕೊಡಲಾಯಿತು. ಅಲ್ಲಿಂದ ಇಲ್ಲಿಯವರೆಗೂ ಅದೇ ಕಟ್ಟಡದಲ್ಲಿದೆ. ಇಲ್ಲಿ ಸಾರ್ವಜನಿಕರಿಗೆ ಶೌಚಾಲಯದ ವ್ಯವಸ್ಥೆಯಿಲ್ಲ. ಕುಡಿಯುವ ನೀರಿನ ಸೌಲಭ್ಯವಿಲ್ಲ. ಜೊತೆಗೆ 19 ಪಿರ್ಕಾ (ವೃತ್ತ)ಗಳಿದ್ದು ಅದರಲ್ಲಿ ಕೇವಲ 9 ಮಂದಿ ಮಾತ್ರ ವಿ.ಎ.ಗಳು ಕೆಲಸ ಮಾಡುತ್ತಿದ್ದಾರೆ. 10 ವೃತ್ತಗಳ ವಿ.ಎ ಹುದ್ದೆಗಳು ಖಾಲಿ ಇವೆ. ಇಲ್ಲಿ ಕೆಲಸಗಳು ಸಹ ಬೇಗ ಆಗುವುದಿಲ್ಲ’ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

‘ತಾಲ್ಲೂಕು ಬೋರ್ಡ್ ಹೆಸರಿನಲ್ಲಿ 6 ಎಕರೆ ಜಮೀನು ಇದ್ದು ಅಲ್ಲಿ ಹೊಸ ಕಟ್ಟಡ ಕಟ್ಟಿದರೆ ಮುಂದೆ ತಾಲ್ಲೂಕು ಕೇಂದ್ರವಾಗುವ ಹೋಬಳಿ ಆಗಿರುವುದರಿಂದ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನ ಹರಿಸಬೇಕು’ ಎಂಬುದು ಹೋಬಳಿಯ ಜನರ
ಒತ್ತಾಯವಾಗಿದೆ.

....

ನಾಡಕಚೇರಿ ಕಟ್ಟಡ ಶಿಥಿಲವಾಗಿದ್ದು ಮಳೆ ಬಂದರೆ ಚಾವಣಿ ಸೋರುತ್ತಿದೆ. ದಾಖಲೆಗಳು ಹಾಳಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾರೊಬ್ಬರೂ ಇದರ ಬಗ್ಗೆ ಗಮನಹರಿಸುತ್ತಿಲ್ಲ. ಪ್ರಸನ್ನಕುಮಾರ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ

.....

ಈಗಾಗಲೇ ಲೋಕೋಪಯೋಗಿ ಇಲಾಖೆಯವರು ಬಂದು ಹೊಸ ಕಟ್ಟಡ ನಿರ್ಮಾಣ ಮಾಡಲು ಯೋಜನೆ ತಯಾರಿಸುವುದಾಗಿ ಹೇಳಿದ್ದಾರೆ. ಅನುದಾನ ಬಂದ ಕೂಡಲೇ ನೂತನ ಕಟ್ಟಡ ನಿರ್ಮಾಣ ಮಾಡಲಾಗುವುದು. – ವಸಂತಕುಮಾರ, ಉಪ ತಹಶೀಲ್ದಾರ್, ಪರಶುರಾಂಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.