ADVERTISEMENT

ಲಸಿಕೆ ನಿರಾಕರಿಸಿ ಚಾವಣಿ ಏರಿದ ಯುವಕ: ಆರೋಗ್ಯ ಸಿಬ್ಬಂದಿಯೊಂದಿಗೆ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 24 ಜನವರಿ 2022, 12:46 IST
Last Updated 24 ಜನವರಿ 2022, 12:46 IST
ಲಸಿಕೆ ನಿರಾಕರಿಸಿ ಚಾವಣಿ ಏರಿರುವ ಯುವಕ ಮಂಜುನಾಥ್‌ (ಪ್ರಜಾವಾಣಿ ಚಿತ್ರ)
ಲಸಿಕೆ ನಿರಾಕರಿಸಿ ಚಾವಣಿ ಏರಿರುವ ಯುವಕ ಮಂಜುನಾಥ್‌ (ಪ್ರಜಾವಾಣಿ ಚಿತ್ರ)   

ನಾಯಕನಹಟ್ಟಿ (ಚಿತ್ರದುರ್ಗ): ಸಮೀಪದ ಎನ್.ದೇವರಹಳ್ಳಿಯಲ್ಲಿ ಕೋವಿಡ್ ಲಸಿಕೆ ನಿರಾಕರಿಸಿ ಯುವಕನೊಬ್ಬ ಆರೋಗ್ಯ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆಸಿ ಮನೆಯ ಚಾವಣಿ ಏರಿದ್ದಾರೆ.

ಗ್ರಾಮದಲ್ಲಿ ಪೆಟ್ಟಿಗೆ ಅಂಗಡಿ ಹಾಕಿಕೊಂಡು ಸ್ವಯಂ ಉದ್ಯೋಗ ಕಂಡುಕೊಂಡಿದ್ದ ಮಂಜುನಾಥ್ ಇಲ್ಲಿಯವರೆಗೂ ಒಂದೂ ಡೋಸ್ ಲಸಿಕೆ ಪಡೆದಿಲ್ಲ. ಅಲ್ಲದೇ ಗ್ರಾಮದ ಇತರರಿಗೂ ಲಸಿಕೆ ಪಡೆಯಬೇಡಿ ಎಂದು ಅಪಪ್ರಚಾರ ಮಾಡುತ್ತಿದ್ದರು. ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಲಸಿಕೆ ಹಾಕಲು ಹಲವು ಬಾರಿ ಹೋದಾಗ ಅವರ ಜೊತೆ ಜಗಳಕ್ಕೆ ಇಳಿದಿದ್ದಾರೆ. ಇದರಿಂದ ರೋಸಿ ಹೋಗಿದ್ದ ಆರೋಗ್ಯ ಸಿಬ್ಬಂದಿ ವಿಷಯವನ್ನು ತಹಶೀಲ್ದಾರ್ ಎನ್. ರಘುಮೂರ್ತಿ ಅವರ ಗಮನಕ್ಕೆ ತಂದಿದ್ದರು.

ತಹಶೀಲ್ದಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಸೋಮವಾರ ಬೆಳಿಗ್ಗೆ ಗ್ರಾಮದಲ್ಲಿ ಸಭೆ ನಡೆಸಿ ಕೋವಿಡ್ ಲಸಿಕೆ ತೆಗೆದುಕೊಂಡರೆ ಸೋಂಕು ಹರಡುವುದನ್ನು ತಡೆಗಟ್ಟಲು ಸಾಧ್ಯ. ಇತರರಿಗೂ ಸೋಂಕು ಹರಡುವುದನ್ನು ತಡೆಯಬಹುದು ಎಂದು ಮನವರಿಕೆ ಮಾಡಿಕೊಟ್ಟರು.

ADVERTISEMENT

ಗ್ರಾಮದ ಎಲ್ಲ ಬೀದಿಗಳಲ್ಲಿ ಸಂಚರಿಸಿ ಮೊದಲ ಹಾಗೂ ಎರಡನೇ ಡೋಸ್‌ ಲಸಿಕೆ ಹಾಕಿಸಿದರು. ಇಷ್ಟೆಲ್ಲಾ ನೋಡಿಯೂ ಮಂಜುನಾಥ ಲಸಿಕೆ ಪಡೆಯಲು ಒಪ್ಪಲಿಲ್ಲ. ಮೊಂಡುತನ ಪ್ರದರ್ಶಿಸಿ ಜನರ ನಡುವೆ ನುಸುಳಿಕೊಂಡು ಮನೆಯ ಚಾವಣಿ ಏರಿ ಕುಳಿತುಕೊಂಡಿದ್ದರು.

ಮಂಜುನಾಥ ಅವರ ತಾಯಿ ಸರ್ಕಾರಿ ಶಾಲೆಯಲ್ಲಿ ಅಡುಗೆ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ನಿಮ್ಮ ತಾಯಿ ಅಡುಗೆ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿಮಗೆ ಸೋಂಕು ತಗುಲಿ ನಿಮ್ಮಂದ ತಾಯಿಗೆ, ಶಾಲೆಯ ಮಕ್ಕಳಿಗೆ ಕೊರೊನಾ ಹರಡಿದರೆ ನಿನ್ನ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು. ಉದ್ಯೋಗ ಕಳೆದುಕೊಳ್ಳುವ ಆತಂಕಕ್ಕೆ ಒಳಗಾದ ತಾಯಿ ಮಗನಿಗೆ ಬುದ್ಧಿವಾದ ಹೇಳಿದರು. ಒಂದು ಗಂಟೆಯ ಪ್ರಹಸನ ನಡೆದು ಕೊನೆಗೂ ಆರೋಗ್ಯ ಇಲಾಖೆ ಸಿಬ್ಬಂದಿ ಲಸಿಕೆ ಹಾಕುವಲ್ಲಿ ಯಶಸ್ವಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.