ADVERTISEMENT

ತಾಳಿ ಕಟ್ಟುವ ವೇಳೆ ಮದುವೆ ನಿರಾಕರಿಸಿದ ವಧು; ಮುರಿದುಬಿದ್ದ ವಿವಾಹ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2023, 6:47 IST
Last Updated 8 ಡಿಸೆಂಬರ್ 2023, 6:47 IST
   

ಹೊಸದುರ್ಗ (ಚಿತ್ರದುರ್ಗ): ಶಾಸ್ತ್ರೋಕ್ತವಾಗಿ ಮದುವೆ ನಡೆಸಲು ನಿಶ್ಚಿಯವಾಗಿತ್ತು. ವಧು-ವರ, ಬಂಧು, ಬಾಂಧವರು ಸೇರಿ ಅದ್ದೂರಿಯಾಗಿ ಮದುವೆ ಆಯೋಜನೆ ಮಾಡಲಾಗಿತ್ತು. ಹಲವು ಶಾಸ್ತ್ರಗಳು ನಡೆದು ಇನ್ನೇನು ತಾಳಿ ಕಟ್ಟುವ ಸಂದರ್ಭದಲ್ಲಿ ವಧು ಮದುವೆ ನಿರಾಕರಿಸಿರುವ ಘಟನೆ ತಾಲ್ಲೂಕಿನ ಚಿಕ್ಕಬ್ಯಾಲದಕೆರೆಯಲ್ಲಿ ಗುರುವಾರ ನಡೆದಿದೆ.

ಚಳ್ಳಕೆರೆಯ ಯಮುನಾ ಜಿ.ಎಂ ಹಾಗೂ ಚಿಕ್ಕಬ್ಯಾಲದಕೆರೆ ಮಂಜುನಾಥ್ ಅವರೊಂದಿಗೆ ಗುರುವಾರ ಚಿಕ್ಕಬ್ಯಾಲದಕೆರೆಯಲ್ಲಿ ಮದುವೆ ನಿಶ್ಚಯಿಸಲಾಗಿತ್ತು‌. ಒಂದು ವರ್ಷದಿಂದ ವಧು ಹಾಗೂ ವರನ ನಡುವೆ ಉತ್ತಮ ಒಡನಾಟವಿತ್ತು. ಯಮುನಾ ಓದುವ ಕಾರಣವೊಡ್ಡಿ ಮದುವೆಯನ್ನು ಒಂದು ವರ್ಷ ಮುಂದೂಡಿದ್ದರು. ನಂತರ ಎಲ್ಲರ ಒಪ್ಪಿಗೆಯಂತೆ ಬುಧವಾರ ಆರತಕ್ಷತೆ ಅದ್ದೂರಿಯಾಗಿ ನಡೆದಿತ್ತು. ಗುರುವಾರ ಬೆಳ್ಳಿಗ್ಗೆ 9.30 ಕ್ಕೆ ತಾಳಿ ಕಟ್ಟುವ ಸಮಯದಲ್ಲಿ ವಧು ತಾಳಿ ತಳ್ಳಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹಿರಿಯರು, ಸಂಬಂಧಿಕರು ಎಷ್ಟೇ ಮನವೊಲಿಸಿದರು ವಧು ಮಾತ್ರ ತಾಳಿ ಕಟ್ಟಿಸಿಕೊಳ್ಳಲು ಒಪ್ಪಿಕೊಳ್ಳಲಿಲ್ಲ. ಪ್ರಕರಣ ಶ್ರೀರಾಂಪುರ ಪೋಲಿಸ್ ಠಾಣೆ ಮೆಟ್ಟಿಲೇರಿತು. ಮದುವೆ ವೆಚ್ಚವನ್ನು ವಧುವಿನ ಕಡೆಯವರು ಭರಿಸಬೇಕು ಎಂಬ ರಾಜಿಯೊಂದಿಗೆ ಪ್ರಕರಣ ಇತ್ಯರ್ಥ ಮಾಡಿಕೊಳ್ಳಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.