ADVERTISEMENT

5 ಸಾವಿರ ಜನರಿಗೆ ಸ್ವನಿಧಿ ನೆರವು: ಸಚಿವ ಎ.ನಾರಾಯಣಸ್ವಾಮಿ

ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಭರವಸೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2023, 6:29 IST
Last Updated 5 ಅಕ್ಟೋಬರ್ 2023, 6:29 IST
ಎ.ನಾರಾಯಣಸ್ವಾಮಿ
ಎ.ನಾರಾಯಣಸ್ವಾಮಿ   

ಚಿತ್ರದುರ್ಗ: ಜಿಲ್ಲೆಯ ಐದು ಸಾವಿರ ಬೀದಿ ಬದಿ ವ್ಯಾಪಾರಸ್ಥರಿಗೆ ‘ಪಿಎಂ ಸ್ವನಿಧಿ’ ಯೋಜನೆಯಡಿ ಆರ್ಥಿಕ ನೆರವು ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಆವರಣದ ಸಂಸದರ ಕಚೇರಿ ಆವರಣದಲ್ಲಿ ಬುಧವಾರ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಬೀದಿ ಬದಿ ವ್ಯಾಪಾರಿಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡಲಿದೆ. ₹ 10,000ದಿಂದ ₹ 50,000ದವರೆಗೆ ನೆರವು ಪಡೆಯಲು ಅವಕಾಶವಿದೆ. ಎಳನೀರು ಮಾರಾಟಗಾರರು, ಕ್ಯಾಟರಿಂಗ್‌, ಫಾಸ್ಟ್‌ಫುಡ್‌ ತಯಾರಕರು, ಹಾಲು ಮಾರಾಟಗಾರರು ಸೇರಿ ಇತರರು ಇದರ ಪ್ರಯೋಜನ ಪಡೆಯಬಹುದು’ ಎಂದು ಹೇಳಿದರು.

ADVERTISEMENT

‘ಸ್ಟಾರ್ಟ್‌ಅಪ್‌ ಸೇರಿ ಇತರ ಯೋಜನೆಗಳು ಈಗಾಗಲೇ ಜಾರಿಯಲ್ಲಿವೆ. ಮುದ್ರಾ ಯೋಜನೆಯಡಿ ₹ 10 ಲಕ್ಷ ಸಾಲ ನೀಡುವ ಯೋಜನೆ ಅನೇಕರ ಕೈಹಿಡಿದಿದೆ. ಸ್ವನಿಧಿ ಯೋಜನೆಯ ಬಗ್ಗೆ ಬೀದಿಬದಿ ವ್ಯಾಪಾರಸ್ಥರಿಗೆ ಮಾಹಿತಿ ನೀಡಲಾಗುವುದು. ತಿಂಗಳ ಅಂತ್ಯದ ವೇಳೆಗೆ 5,000 ಜನರಿಗೆ ಸೌಲಭ್ಯ ತಲುಪಿಸಲಾಗುವುದು’ ಎಂದರು.

ವಿಧಾನಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌.ಜೆ.ಸೋಮಶೇಖರ್‌, ಮುಖ್ಯ ಯೋಜನಾಧಿಕಾರಿ ಸತೀಶ್‌ ರೆಡ್ಡಿ ಇದ್ದರು.

‘ಪಿಎಂ ಸ್ವನಿಧಿ’ ಯೋಜನೆಗೆ ಜಿಲ್ಲೆಯಲ್ಲಿ ವ್ಯಾಪಕ ಪ್ರಚಾರ ಸಿಕ್ಕಿಲ್ಲ. ಫಲಾನುಭವಿಗಳನ್ನು ಗುರುತಿಸುವ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ನಡೆದಿಲ್ಲ.

-ಎ.ನಾರಾಯಣಸ್ವಾಮಿ ಕೇಂದ್ರ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.