
ಹಿರಿಯೂರು: ‘ಇದುವರೆಗೂ ತಮ್ಮದೇ ಆಸ್ತಿಯ ಇ–ಸ್ವತ್ತು ಪಡೆಯಲು ಆಸ್ತಿ ಮಾಲೀಕರು ಪರದಾಡುತ್ತಿದ್ದುದನ್ನು ನಮ್ಮ ಸರ್ಕಾರ ತಪ್ಪಿಸಿದ್ದು, ಸರ್ಕಾರದ ಹೊಸ ಯೋಜನೆಯಿಂದ ಆಸ್ತಿ ಮಾಲೀಕರು ಮನೆಯಲ್ಲಿಯೇ ಕುಳಿತು ಇ–ಖಾತಾ ಪಡೆಯಬಹುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.
ನಗರಸಭೆ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಗರಸಭಾ ವ್ಯಾಪ್ತಿಯ ಆಸ್ತಿ ಮಾಲೀಕರಿಗೆ ‘ಮನೆಯಲ್ಲೇ ಕುಳಿತು ಇ– ಖಾತಾ ಪಡೆದುಕೊಳ್ಳಿ ಅಭಿಯಾನ ಕಾರ್ಯಕ್ರಮ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಇ–ಸ್ವತ್ತು ಇಲ್ಲದಿದ್ದರೆ ಕಷ್ಟದ ಸಂದರ್ಭದಲ್ಲಿ ಆಸ್ತಿ ಮಾರಾಟ ಮಾಡಲು ಆಗುತ್ತಿರಲಿಲ್ಲ. ಆಸ್ತಿ ಮಾಲೀಕರು ಸೂಕ್ತ ದಾಖಲೆಗಳನ್ನು ಒದಗಿಸದಿದ್ದರೆ ಕಂಪ್ಯೂಟರ್ ಸ್ವೀಕರಿಸುತ್ತಿರಲಿಲ್ಲ. ಕೆಲವೊಮ್ಮೆ ಸರ್ವರ್ ಸಮಸ್ಯೆ ಕಂಡು ಬರುತ್ತಿತ್ತು. ಇದಕ್ಕೆಲ್ಲ ಕಡಿವಾಣ ಹಾಕಬೇಕೆಂದು ಸರ್ಕಾರ ನೂತನ ತಂತ್ರಾಂಶ ರೂಪಿಸಿ ಮನೆಯಲ್ಲಿಯೇ ಇ–ಖಾತಾ ಪಡೆಯುವಂತೆ ಮಾಡಿದ್ದು, ಕಚೇರಿಗೆ ತಿಂಗಳುಗಟ್ಟಲೆ ಅಲೆಯುತ್ತಿದ್ದ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ’ ಎಂದು ಸಚಿವರು ತಿಳಿಸಿದರು.
ಪೌರಾಯುಕ್ತ ಎ.ವಾಸೀಂ, ಕಂದಾಯ ಅಧಿಕಾರಿ ಜಬೀವುಲ್ಲಾ, ಕಂದಾಯ ನಿರೀಕ್ಷಕರಾದ ವಿಜಯಕುಮಾರ್, ಜುನೇದ್ ಸಿರಾಜ್, ಕಂದಾಯ ಸಿಬ್ಬಂದಿ ಸುರೇಶ್, ವಿನಯ್, ಮಲ್ಲಿಕಾರ್ಜುನ, ಮಹಾಂತೇಶ್, ಶ್ರೀನಿವಾಸ್, ಪಾಂಡುರಂಗಪ್ಪ ಹಾಗೂ ಪೌರ ನೌಕರರ ಸಂಘದ ಅಧ್ಯಕ್ಷ ಹನುಮಂತರಾಜ್, ಪ್ರಧಾನ ಕಾರ್ಯದರ್ಶಿ ಕೆ.ರಮೇಶ್, ಮುಖಂಡರಾದ ಖಾದಿ ರಮೇಶ್, ಸಣ್ಣಪ್ಪ, ಪುರುಷೋತ್ತಮ, ಕೆ.ಓಂಕಾರಪ್ಪ, ಅಂಬಿಕಾ ಆರಾಧ್ಯ ಉಪಸ್ಥಿತರಿದ್ದರು.
ಸುರಕ್ಷಾ ವಸ್ತ್ರ ವಿತರಣೆ: ನಗರಸಭೆಯಲ್ಲಿ ನಡೆದ ಮತ್ತೊಂದು ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರು ಪೌರಕಾರ್ಮಿಕರಿಗೆ ಸುರಕ್ಷಾ ವಸ್ತ್ರಗಳನ್ನು ವಿತರಿಸಿದರು.
ನಗರದಲ್ಲಿ ಸ್ವಚ್ಛತಾ ಕಾರ್ಯ ನಡೆಸುವಾಗ ಕಡ್ಡಾಯವಾಗಿ ಸುರಕ್ಷಾ ವಸ್ತ್ರಗಳನ್ನು ಧರಿಸುವಂತೆ ಸಲಹೆ ನೀಡಿದ ಸಚಿವರು, ಕೆಲಸದ ಜೊತೆಗೆ ಆರೋಗ್ಯದ ಕಡೆಗೂ ಗಮನ ಕೊಡಬೇಕು ಎಂದು ತಾಕೀತು ಮಾಡಿದರು.
ಆರೋಗ್ಯ ನಿರೀಕ್ಷಕರಾದ ಸುನೀಲ್ ಕುಮಾರ್, ಮಹಲಿಂಗರಾಜು, ಅಶೋಕ್ ಕುಮಾರ್, ನಯಾಜ್ ಷರೀಫ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.