
ಮೊಳಕಾಲ್ಮುರು: ‘ಸರ್ಕಾರದಿಂದ ಮಂಜೂರಾಗಿರುವ ಅನುದಾನವನ್ನು ಆದ್ಯತೆ ಹಾಗೂ ಅವಶ್ಯಕತೆ ಆಧಾರದಲ್ಲಿ ನ್ಯಾಯ ಸಮ್ಮತವಾಗಿ ಹಂಚಿಕೆ ಮಾಡಲಾಗುತ್ತಿದೆ’ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಹೇಳಿದರು.
ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
‘ಶಿಕ್ಷಣ ಕ್ಷೇತ್ರಕ್ಕೆ ₹6 ಕೋಟಿ ಅನುದಾನ ನೀಡಲಾಗಿದ್ದು ಶಾಲಾ ಕೊಠಡಿಗಳ ದುರಸ್ತಿ, ಹೊಸ ಕಟ್ಟಡ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ನೂತನವಾಗಿ ಕೋನಸಾಗರ- ಗೌರಸಮುದ್ರ ರಸ್ತೆಗೆ ₹ 1.50 ಕೋಟಿ, ಗೌರಸಮುದ್ರ- ತುಮಲು ರಸ್ತೆಗೆ ₹1 ಕೋಟಿ, ಬಿ.ಜಿ.ಕೆರೆ ಕ್ರಾಸ್ನಿಂದ ಹನುಮಂತನಹಳ್ಳಿ ಸಂಪರ್ಕ ರಸ್ತೆಗೆ ₹1.50 ಕೋಟಿ, ಬಿ.ಜಿ.ಕೆರೆ- ರಾವಲಕುಂಟೆ ರಸ್ತೆಗೆ ₹75 ಲಕ್ಷ, ಊಡೇವು- ಬಿಳಿನೀರು ಚಿಲುಮೆ ರಸ್ತೆಗೆ ₹1.50 ಕೋಟಿ ಅನುದಾನ ಮಂಜೂರಾಗಿದ್ದು ಶೀಘ್ರ ಶಂಕುಸ್ಥಾಪನೆ ಮಾಡಿ ಕಾಮಗಾರಿ ಆರಂಭಿಸಲಾಗುವುದು’ ಎಂದರು.
ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ರಾಂಪುರದಲ್ಲಿ ಪ್ರಾಥಮಿಕ ಶಾಲಾ ಕೊಠಡಿ, ನಾಗಸಮುದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಕೊಠಡಿ, ಕೊಂಡ್ಲಹಳ್ಳಿಯ ಪ್ರಾಥಮಿಕ ಶಾಲೆಯಲ್ಲಿ ಒಂದು ಕೊಠಡಿ, ಅದೇ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಹಾಗೂ ನೂತನ ಪಶು ಆಸ್ಪತ್ರೆ ಉದ್ಘಾಟನೆ, ಮೊಳಕಾಲ್ಮುರಿನ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದು ಕೊಠಡಿಯನ್ನು ಉದ್ಘಾಟನೆ ಮಾಡಲಾಯಿತು.
ತಾಲ್ಲೂಕು ಪಂಚಾಯಿತಿ ಇಒ ಎಂ. ಹನುಮಂತಪ್ಪ, ಜಿಲ್ಲಾ ಪಂಚಾಯಿತಿ ಎಇಇ ಲಿಂಗರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ನಿರ್ಮಲಾದೇವಿ, ಕೊಂಡ್ಲಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಪವಿತ್ರಾ ಪ್ರದೀಪ್, ಪಿಡಿಒ ಪಾಲಯ್ಯ, ಮುಖಂಡರಾದ ಎಸ್.ಕೆ. ಗುರುಲಿಂಗಪ್ಪ, ಟಿ. ತಿಪ್ಪೇಸ್ವಾಮಿ, ಕೆ.ಸಿ. ಮಂಜುನಾಥ್, ಸುಧರ್ಮಾ, ಬಿ.ಎನ್. ಬೀರಲಿಂಗಪ್ಪ, ಟಿ. ಸಿದ್ದಲಿಂಗಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.