ಚಿತ್ರದುರ್ಗ: ಮುರುಘಾಮಠದ ಅನುಭವ ಮಂಟಪದಲ್ಲಿ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಶನಿವಾರ ನಡೆದ ‘ಸಹಜ ಶಿವಯೋಗ’ದಲ್ಲಿ ನೂರಾರು ಜನ ಭಕ್ತಿಯಲ್ಲಿ ಮಿಂದೆದ್ದರು.
ಅಂತರ ಕಾಯ್ದುಕೊಳ್ಳುವ ಮೂಲಕ ಬಸವ ಭಕ್ತರು, ಶ್ರೀಮಠದ ಅನುಯಾಯಿಗಳು ಶಿವಯೋಗ ಕೈಗೊಂಡರು.
ಅಧ್ಯಕ್ಷತೆ ವಹಿಸಿದ್ದ ಶಿವಮೂರ್ತಿ ಮುರುಘಾ ಶರಣರು, ‘ದೇಶದಲ್ಲಿ ಅನೇಕರು ಪಂಚಾಂಗ ನೋಡಿ ಜೀವನ ನಡೆಸುತ್ತಾರೆ. ಆದರೆ, ಪ್ರಜ್ಞೆ ಮೂಲಕ ಬದುಕು ಮುನ್ನಡೆಸುವುದೇ ಉತ್ತಮ’ ಎಂದು ಹೇಳಿದರು.
‘ಪ್ರತಿಯೊಂದಕ್ಕೂ ಶುಭಕಾಲ ನೋಡಿ ಹೆಜ್ಜೆ ಇಡುವವರು ಸಾಕಷ್ಟು ಜನರಿದ್ದಾರೆ. ಪ್ರತಿ ಕ್ಷಣವೂ ಅಮೂಲ್ಯವಾಗಿದ್ದು, ಅದನ್ನು ಸದ್ಬಳಕೆ ಮಾಡಿಕೊಂಡವರಿಗೆ ಒಳಿತಾಗಲಿದೆ’ ಎಂದು ಸಲಹೆ ನೀಡಿದರು.
ಉತ್ಸವ ಸಮಿತಿ ಗೌರವಾಧ್ಯಕ್ಷ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಕಲಬುರ್ಗಿ ಬಸವಕೇಂದ್ರದ ಶರಣು ಅಪ್ಪ, ಮಹಾಂತ ರುದ್ರೇಶ್ವರ ಸ್ವಾಮೀಜಿ, ಮೋಕ್ಷಪತಿ ಸ್ವಾಮೀಜಿ, ಮಡಿವಾಳೇಶ್ವರ ಸ್ವಾಮೀಜಿ, ಶಿವಮೊಗ್ಗ ಬಸವಕೇಂದ್ರದ ಜಿ.ಬೆನಕಪ್ಪ, ಅಖಿಲ ಭಾರತೀಯ ವೀರಶೈವ ಸಭಾ ಅಧ್ಯಕ್ಷ ಎಸ್.ಗುರುಸ್ವಾಮಿ, ಪ್ರತಾಪ್ ಜೋಗಿ, ಎನ್.ತಿಪ್ಪೇಸ್ವಾಮಿ, ನರಸಿಂಹಪ್ಪ, ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಎನ್.ಜಯಣ್ಣ ಇದ್ದರು.
ಬಸವತತ್ವ ಧ್ವಜಾರೋಹಣ: ಉತ್ಸವದ ಅಂಗವಾಗಿ ಗಿರಿಜಮ್ಮ ಡಿ.ಎಂ. ರುದ್ರಯ್ಯ ಶನಿವಾರ ಬಸವತತ್ವ ಧ್ವಜಾರೋಹಣ ನೆರವೇರಿಸಿದರು. ಅನ್ನದಾನ ಭಾರತಿ ಅಪ್ಪಣ್ಣ ಸ್ವಾಮೀಜಿ ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.