ADVERTISEMENT

ನಾಯಕನಹಟ್ಟಿ | ಶಾಲೆ ಉಳಿಸಲು ಹಳೆ ವಿದ್ಯಾರ್ಥಿಗಳ ಪಣ

100 ವರ್ಷ ಪೂರೈಸಿರುವ ತುರುವನೂರು ಸರ್ಕಾರಿ ಪ್ರಾಥಮಿಕ ಶಾಲೆ

ವಿ.ಧನಂಜಯ
Published 16 ಜೂನ್ 2025, 8:08 IST
Last Updated 16 ಜೂನ್ 2025, 8:08 IST
ತುರುವನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್.ಕೆ.ಜಿ. ತರಗತಿ ಆರಂಭಿಸಿರುವುದು
ತುರುವನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್.ಕೆ.ಜಿ. ತರಗತಿ ಆರಂಭಿಸಿರುವುದು   

ತುರುವನೂರು (ನಾಯಕನಹಟ್ಟಿ): ಗ್ರಾಮದ ಹಳೆಯ ವಿದ್ಯಾರ್ಥಿಗಳು ಸೇರಿ ರಚಿಸಿಕೊಂಡಿರುವ ಸಮಿತಿಯು, ಶತಮಾನ ಪೂರೈಸಿರುವ ತಮ್ಮೂರಿನ ಸರ್ಕಾರಿ ಶಾಲೆ ಉಳಿಸಲು ಯೋಜನೆಗಳನ್ನು ರೂಪಿಸಿದ್ದು, ಮಾದರಿಯಾಗಿ ನಿರ್ಮಿಸಲು ಸಜ್ಜಾಗಿದೆ. 

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ಎಸ್.ಜಿ.ರಾಮಕೃಷ್ಣರೆಡ್ಡಿ, ಅಧ್ಯಕ್ಷ ವಿವೇಕಾನಂದಪ್ಪ, ಉಪಾಧ್ಯಕ್ಷ ಬಿ.ನಾಗರಾಜಪ್ಪ, ಕಾರ್ಯದರ್ಶಿ ಆರ್.ಮಂಜುನಾಥ, ಖಜಾಂಚಿ ಇ.ಶೇಷಾದ್ರಿರೆಡ್ಡಿ, ಸಹಕಾರ್ಯದರ್ಶಿ ಕೆ.ಎಚ್.ಶಂಕರಮೂರ್ತಿ, ಸಂಘಟನಾ ಕಾರ್ಯದರ್ಶಿ ಡಿ.ಆರ್.ಮಂಜುನಾಥ್, ಸಹಸಂಘಟನಾ ಕಾರ್ಯದರ್ಶಿ ಕಾಕಿಹನುಮಂತರೆಡ್ಡಿ, ಆರ್.ಎಸ್.ನಾಗರಾಜ್, ಬಂಡಿರುದ್ರಯ್ಯ, ಪಿ.ಸಿ.ರವಿಕುಮಾರ್ ಸೇರಿದಂತೆ ಗ್ರಾಮಸ್ಥರು ಈ ಅಭೂತಪೂರ್ವ ಕಾರ್ಯಕ್ಕೆ ಮುಂದಾಗಿದ್ದಾರೆ.

ತುರುವನೂರು ಸ್ವಾತಂತ್ರ್ಯ ಹೋರಾಟಗಾರರ ನೆಲ. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಇಲ್ಲಿನ ಯುವಕರು ಈಚಲುಮರ ಕಡಿದು ಬ್ರಿಟಿಷ್ ಸರ್ಕಾರದ ನೀತಿಗಳ ವಿರುದ್ಧ ಹೋರಾಡಿದ ಹೆಗ್ಗಳಿಕೆ ಇದೆ. ಇಂತಹ ದೇಶಾಭಿಮಾನ, ಸ್ವಾತಂತ್ರ್ಯ ಹೋರಾಟದ ಮನೋಭಾವ ಮತ್ತು ಜಾಗೃತಿಗೆ ಕಾರಣವಾಗಿದ್ದೇ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.

ADVERTISEMENT

ಶಾಲೆಯ ಇತಿಹಾಸ: 1919ರಲ್ಲಿ ಆರಂಭವಾದ ಈ ಶಾಲೆ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕು ನೀಡಿದೆ. ಸ್ವಾತಂತ್ರ್ಯಪೂರ್ವದಲ್ಲಿ ಶಿಕ್ಷಣ ಪಡೆದ ಯುವಪಡೆ ಹೋರಾಟದಲ್ಲಿ ಭಾಗವಹಿಸಿ ಗ್ರಾಮಕ್ಕೆ ಕೀರ್ತಿ ತಂದಿತ್ತು. ಸುತ್ತಲಿನ 20ಕ್ಕೂ ಹೆಚ್ಚು ಗ್ರಾಮಗಳ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಶಿಕ್ಷಣ ಪಡೆದು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. 

ಐತಿಹಾಸಿಕ ಹಿನ್ನೆಲೆಯ ಶಾಲೆಯು 2019ಕ್ಕೆ 100 ವರ್ಷ ಪೂರೈಸಿದೆ. ಗ್ರಾಮಸ್ಥರು ಮತ್ತು ಹಳೆಯ ವಿದ್ಯಾರ್ಥಿಗಳು ಸಮಿತಿ ರಚಿಸಿಕೊಂಡು ಶಾಲಾ ಶತಮಾನೋತ್ಸವ ಆಚರಿಸಲು ಸಿದ್ಧತೆ ನಡೆಸಿದ್ದರು. ಆದರೆ ಕೋವಿಡ್‌ನಿಂದಾಗಿ ಕಾರ್ಯಕ್ರಮ ಮುಂದೂಡಲಾಗಿತ್ತು. ಈ ವೇಳೆಗಾಗಲೇ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿ ಮುಚ್ಚುವ ಹಂತಕ್ಕೆ ತಲುಪಿತ್ತು. ಶಾಸಕ ಟಿ.ರಘುಮೂರ್ತಿ ಅವರ ಸಹಕಾರದೊಂದಿಗೆ ಶಾಲೆಯನ್ನು ಉಳಿಸಲು ಗ್ರಾಮದವರೆಲ್ಲ ಪಣತೊಟ್ಟರು.

ಎರಡು ಶಾಲೆಗಳ ವಿಲೀನ: ಗ್ರಾಮದಲ್ಲಿ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ಮತ್ತು ಬಾಲಕರ ಹಿರಿಯ ಪ್ರಾಥಮಿಕ ಶಾಲೆಗಳು ಇವೆ. ಬಾಲಕಿಯರ ಶಾಲೆಯಲ್ಲಿ 112, ಬಾಲಕರ ಶಾಲೆಯಲ್ಲಿ 121 ವಿದ್ಯಾರ್ಥಿಗಳಿದ್ದಾರೆ. ಈ ಎರಡೂ ಶಾಲೆಗಳ ಕಟ್ಟಡಗಳು ಹಳೆಯದಾಗಿದ್ದು, ಅವುಗಳನ್ನು ವಿಲೀನಗೊಳಿಸಿ ಒಂದೇ ಸೂರಿನಡಿ ಕಲಿಕೆ ಒದಗಿಸಲು ಶಾಸಕ ಟಿ.ರಘುಮೂರ್ತಿ ಯೋಜನೆ ರೂಪಿಸಿದರು. ಅದಕ್ಕಾಗಿ ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆ ₹2 ಕೋಟಿ ಅನುದಾನ ಒದಗಿಸಿದರು. ಶಾಲೆಗಳ ವಿಲೀನದಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. 

ಡಿಸೆಂಬರ್‌ನಲ್ಲಿ ಶತಮಾನೋತ್ಸವ ಆಚರಣೆ ಶಾಲೆ ‘ಶತಕ’ ಬಾರಿಸಿರುವ ಸವಿನೆನಪಿಗಾಗಿ ಶಾಸಕ ಟಿ.ರಘುಮೂರ್ತಿ ನೇತೃತ್ವದಲ್ಲಿ ಡಿಸೆಂಬರ್ 12ರಿಂದ 14ರವರೆಗೆ ಶತಮಾನೋತ್ಸವ ಕಾರ್ಯಕ್ರಮ ಆಚರಿಸಲು ಸಿದ್ಧತೆ ನಡೆಯುತ್ತಿದೆ. ಮೈಸೂರಿನ ಮಾನಸ ಗಂಗೋತ್ರಿ ಕಾಲೇಜು ಮಾದರಿ ಹೋಲುವ ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆ ಭರದ ಸಿದ್ಧತೆ ನಡೆಯುತ್ತಿದೆ.

ಶಾಲೆಯ ಉಳಿವಿಗೆ ಎಲ್.ಕೆ.ಜಿ.ಆರಂಭ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕುಸಿಯಬಾರದು ಎಂಬ ಕಾರಣಕ್ಕೆ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮದ ಜತೆಗೆ ಎಲ್.ಕೆ.ಜಿ. ಆರಂಭಿಸಲು ಸರ್ಕಾರದಿಂದ ತಾಂತ್ರಿಕ ಅನುಮೋದನೆ ಪಡೆಯಲಾಗಿದೆ. ಹಳೆ ವಿದ್ಯಾರ್ಥಿಗಳು ಸ್ವಂತ ಖರ್ಚಿನಲ್ಲಿ ನುರಿತ ಶಿಕ್ಷಕರು ಮತ್ತು ಸಿಬ್ಬಂದಿಯನ್ನು ಆಯ್ಕೆಮಾಡಿ ಎಲ್.ಕೆ.ಜಿ.ತರಗತಿ ಆರಂಭಿಸಿದ್ದಾರೆ. 49 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಈ ವಿದ್ಯಾರ್ಥಿಗಳಿಗಾಗಿ ಕೊಠಡಿಯನ್ನು ಅಲಂಕರಿಸಿ ಪೀಠೋಪಕರಣ ಒದಗಿಸಲಾಗಿದೆ. ಪ್ರತಿ ಮಗುವಿಗೂ ಶುಲ್ಕ ರಹಿತ ಪ್ರವೇಶ ಕಲ್ಪಿಸಿ ಕಲಿಕಾ ಸಾಮಗ್ರಿ ಸಮವಸ್ತ್ರ ಲಘು ಉಪಹಾರವನ್ನು ಉಚಿತವಾಗಿ ಒದಗಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.