ಚಿತ್ರದುರ್ಗ: ಕೊರೊನಾ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ನಾಯಕನಹಟ್ಟಿಯ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಯನ್ನು ಜಿಲ್ಲಾಡಳಿತ ನಿಷೇಧಿಸಿದೆ.
ಮಾರ್ಚ್ 22ರಿಂದ ಏಪ್ರಿಲ್ 5ರವರೆಗೆ ಜಾತ್ರೆ ನಡೆಯಬೇಕಿತ್ತು. ಜಾತ್ರೆಗೆ ಅಗತ್ಯ ಸಿದ್ಧತೆಗಳು ಭರದಿಂದ ಸಾಗುತ್ತಿದ್ದವು.ಜಾತ್ರಾ ಮಹೋತ್ಸವಕ್ಕೆ ಹೊರಗಿನಿಂದ ಬರುವವರಿಗೆ ಜಿಲ್ಲಾಡಳಿತ ಸಂಪೂರ್ಣ ನಿರ್ಬಂಧ ವಿಧಿಸಿದೆ. ಮಾರ್ಚ್ 22ರಿಂದ ನಾಯಕನಹಟ್ಟಿ ಪ್ರವೇಶಕ್ಕೆ ಹೊರಗಿನವರಿಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ.
ಜಾತ್ರೆ ರದ್ದಾಗಿರುವುದರಿಂದ ಅನ್ನ ದಾಸೋಹ ಇರುವುದಿಲ್ಲ. ಅಂಗಡಿ ತೆರೆಯಲು ಅವಕಾಶವಿಲ್ಲ. ಜಾತ್ರಾ ಸಾಮಾಗ್ರಿ ಮಾರಾಟಕ್ಕೆ ವಾಣಿಜ್ಯ ಮಳಿಗೆಗೆ ಅನುಮತಿ ನೀಡಿಲ್ಲ. ಪಟ್ಟಣದ ಸುತ್ತಲಿನ ಜಮೀನು, ಕಪಿಲೆ ಮನೆಗಳಲ್ಲಿ ಹರಕೆಯ ಪರವು ಮಾಡುವುದನ್ನು ನಿಷೇಧಿಸಿದೆ. ಭಕ್ತರಿಗೆ ನೀರು, ಶೌಚಾಲಯ ಒಳಗೊಂಡಂತೆ ಇನ್ನಿತರೆ ಮೂಲಸೌಲಭ್ಯಗಳು ಇರುವುದಿಲ್ಲ ಎಂದು ತಿಳಿಸಿದೆ.
ನಾಯಕನಹಟ್ಟಿ ಸುತ್ತಲಿನ ಹತ್ತು ಕಿ.ಮೀ. ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಹಾಗೂ ಪ್ರಾಣಿ ಬಲಿ ನಿಷೇಧಿಸಲಾಗಿದೆ. ಹೊರಗಡೆಯಿಂದ ಬರುವ ಎತ್ತಿನ ಬಂಡಿ ಹಾಗೂ ವಾಹನಗಳಿಗೆ ಪ್ರವೇಶ ನೀಡುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.