ಚಿತ್ರದುರ್ಗ: ‘ರಾಜ್ಯ ಸ್ವಕುಳಸಾಳಿ (ನೇಕಾರ) ಸಮುದಾಯದ ಮೊಟ್ಟಮೊದಲ ಗುರುವಾಗಿ ಸ್ವೀಕರಿಸಿರುವ ಜಿಹ್ವೇಶ್ವರಾನಂದ ಭಾರತಿ ಸ್ವಾಮೀಜಿ ಅವರ ಪಟ್ಟಾಭಿಷೇಕ ಮಹೋತ್ಸವ ಫೆ. 1ರಂದು ಹಮ್ಮಿಕೊಳ್ಳಲಾಗಿದೆ’ ಎಂದು ಸಮುದಾಯದ ರಾಜ್ಯ ಘಟಕದ ಅಧ್ಯಕ್ಷ ಚಂದ್ರಕಾಂತ್ ಎನ್. ಭಂಡಾರೆ ತಿಳಿಸಿದರು.
‘ಸಮುದಾಯಕ್ಕೆ ಒಬ್ಬರು ಸ್ವಾಮೀಜಿ ಅಗತ್ಯವಿದ್ದು, ಅದಕ್ಕಾಗಿ ಅನೇಕ ದಶಕಗಳಿಂದ ಪ್ರಯತ್ನ ಪಟ್ಟಿದ್ದೇವೆ. ಕೊನೆಗೂ ಸ್ವಾಮೀಜಿ ಸಿಕ್ಕಿದ್ದಾರೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಮೊಳಕಾಲ್ಮುರಿನ ಹಾನಗಲ್-ರಾಯದುರ್ಗ ರಸ್ತೆ ಮಾರ್ಗದ ಸ್ವಾಕುಳಿಸಾಳಿ ಗುರುಪೀಠದಲ್ಲಿ ಅಂದು ಬೆಳಿಗ್ಗೆ 10.45ಕ್ಕೆ ಧಾರ್ಮಿಕ ಕಾರ್ಯಕ್ರಮ ಆರಂಭವಾಗಲಿದೆ. ಹರಿದ್ವಾರದ ಪತಂಜಲಿ ಯೋಗ ಪೀಠದ ಬಾಬಾ ರಾಮದೇವ್, ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು, ಬಾಳೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವ ವಹಿಸುವರು’ ಎಂದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಪೀಠಾರೋಹಣ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ಸಚಿವರಾದ ಬಿ. ಶ್ರೀರಾಮುಲು, ವಿ. ಸೋಮಣ್ಣ ಭಾಗವಹಿಸುವರು. ಮಧ್ಯಾಹ್ನ 3ಕ್ಕೆ ಗುರುಪೀಠದಲ್ಲಿ ಪೀಠಾರೋಹಣ ನೆರವೇರಲಿದೆ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.