ADVERTISEMENT

ಭರಮಸಾಗರ: ದರ ಕುಸಿತದಿಂದ ₹ 1ಕ್ಕೆ ಕೆ.ಜಿ ಈರುಳ್ಳಿ ಮಾರಿದ ರೈತ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 3:45 IST
Last Updated 15 ಸೆಪ್ಟೆಂಬರ್ 2021, 3:45 IST
ಜಗಳೂರು ಗಡಿ ಭಾಗದ ರೈತ ಉದಯಕುಮಾರ್‌ ಅವರು ಮಂಗಳವಾರ ಭರಮಸಾಗರಕ್ಕೆ ಬಂದು ₹ 1 ಕ್ಕೆ ಕೆ.ಜಿಯಂತೆ ಈರುಳ್ಳಿ ಮಾರಾಟ ಮಾಡಿದರು.
ಜಗಳೂರು ಗಡಿ ಭಾಗದ ರೈತ ಉದಯಕುಮಾರ್‌ ಅವರು ಮಂಗಳವಾರ ಭರಮಸಾಗರಕ್ಕೆ ಬಂದು ₹ 1 ಕ್ಕೆ ಕೆ.ಜಿಯಂತೆ ಈರುಳ್ಳಿ ಮಾರಾಟ ಮಾಡಿದರು.   

ಭರಮಸಾಗರ: ಹೋಬಳಿಯಾದ್ಯಂತ ಹಾಗೂ ಜಗಳೂರು ತಾಲ್ಲೂಕಿನ ಕೆಲ ಭಾಗಗಳಲ್ಲಿ ರೈತರು ಬಿತ್ತಿದ್ದ ಈರುಳ್ಳಿ ಬೆಳೆಗೆ ದರ ಸಿಗದ ಕಾರಣ ರೈತರು ಸಿಕ್ಕಷ್ಟು ಬೆಲೆಗೆ ಈರುಳ್ಳಿ ಮಾರಾಟ ಮಾಡುತ್ತಿದ್ದಾರೆ. ಕೆಲವರು ತಿಪ್ಪೆಗೆ ಎಸೆಯುತ್ತಿದ್ದಾರೆ.

ಜಗಳೂರು ಗಡಿ ಭಾಗದ ರೈತ ಉದಯಕುಮಾರ್ ಅವರು ಮಂಗಳವಾರ ₹ 1 ಕ್ಕೆ ಕೆ.ಜಿ.ಯಂತೆ ಮನೆಮನೆಗೆ ಬಂದು ಈರುಳ್ಳಿ ಮಾರಾಟ ಮಾಡಿದರು. ವಾಹನದಲ್ಲಿ 50 ಚೀಲಗಳನ್ನು ಹೇರಿಕೊಂಡು ಬಂದಿದ್ದ ಅವರು ಮನೆಗಳ ಮುಂದೆ ತಂದು ಒಂದು ಚೀಲಕ್ಕೆ ₹ 60ರಿಂದ ₹ 100ರಂತೆ ನೀಡಿದರು. ಮಹಿಳೆಯರು ಮುಗಿ ಬಿದ್ದು ಖರೀದಿಸಿದರು.

‘ಹೋಬಳಿಯಾದ್ಯಂತ ಈರುಳ್ಳಿ ದರ ಕುಸಿದಿರುವುದರಿಂದ ಖರೀದಿದಾರರು ಈರುಳ್ಳಿ ಖರೀದಿಸಲು ಮುಂದೆ ಬರುತ್ತಿಲ್ಲ. ಈ ಬಾರಿ ಉತ್ತಮ ದರ ಸಿಗಬಹುದೆಂದು ಬಿತ್ತನೆ ಮಾಡಿದ್ದೆವು. ಆದರೆ ಬೆಳೆ ಬೆಳೆಯಲು ಮಾಡಿದ ಖರ್ಚು ಸಹ ಬರುತ್ತಿಲ್ಲ. ಕಾರಣ ಬೇಸತ್ತು ನಾವೇ ವಾಹನ ಮಾಡಿಕೊಂಡು ಬಂದಷ್ಟು ಬರಲಿ ಎಂದು ಬೀದಿ ಬೀದಿ ತಿರುಗಿ ಮಾರಾಟ ಮಾಡುತ್ತಿದ್ದೇವೆ. ಒಂದು ಚೀಲಕ್ಕೆ ₹ 60ರಿಂದ ₹ 100ರವರೆಗೆ ಮಾರಾಟ ಮಾಡುತ್ತಿದ್ದೇವೆ. ಇಷ್ಟು ಕಡಿಮೆ ಕೊಟ್ಟರೂ ಜನ ಇನ್ನೂ ಚೌಕಾಸಿ ಮಾಡುತ್ತಿದ್ದಾರೆ. ಈರುಳ್ಳಿಗೆ ವೆಚ್ಚ ಮಾಡಿದ ಖರ್ಚು ನೆನೆಸಿಕೊಂಡರೆ ಕಣ್ಣೀರು ಬರುತ್ತದೆ. ಏಕಾದರೂ ಬಿತ್ತಿದೆವೋ ಎನ್ನಿಸುತ್ತದೆ. ಎಷ್ಟು ಸಾಧ್ಯವೋ ಅಷ್ಟನ್ನು ಮಾರಾಟ ಮಾಡಿ ಉಳಿದಿದ್ದನ್ನು ತಿಪ್ಪೆಗೆ ಹಾಕುತ್ತಿದ್ದೇವೆ. ಒಂದಿಷ್ಟು ಜಮೀನಿನಲ್ಲಿಯೇ ಕೊಳೆಯಲು ಬಿಟ್ಟಿದ್ದೇವೆ’ ಎಂದು ಉದಯಕುಮಾರ್ ಬೇಸರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.