ಹೊಸದುರ್ಗ: ಕೊಳೆರೋಗ, ಪಾತಾಳಕ್ಕಿಳಿದ ದರ ಕುಸಿತದಿಂದ ತಾಲ್ಲೂಕಿನ ಈರುಳ್ಳಿ ಬೆಳೆಗಾರರ ಬದುಕು ಮೂರಾಬಟ್ಟೆಯಾಗಿದೆ.
ಕಳೆದ ವರ್ಷ ಮಾರುಕಟ್ಟೆಯಲ್ಲಿ ಉತ್ತಮ ದರ ಸಿಕ್ಕಿದ್ದರಿಂದ ಕೆಲವು ಬೆಳೆಗಾರರು ಬೆಳೆಗಾರರು ಸಂತಸಗೊಂಡಿದ್ದರು. ಈ ಬಾರಿಯೂ ಬೆಲೆ ಏರಿಕೆ ಆಗಬಹುದು ಎಂಬ ನಿರೀಕ್ಷೆಯಿಂದ ಬಾಗೂರು, ನಾಗೇನಹಳ್ಳಿ, ಲಕ್ಕಿಹಳ್ಳಿ, ಶ್ರೀರಂಗಾಪುರ, ಎಂ.ಜಿ. ದಿಬ್ಬ, ಮಳಲಿ, ಅರಳಿಹಳ್ಳಿ, ಹೊನ್ನೇಕೆರೆ ತಾಲ್ಲೂಕಿನ ಹಲವೆಡೆ ಎರೆ (ಕಪ್ಪು) ಹಾಗೂ ಕೆಂಪು ಭೂಮಿಯ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದರು.
ಆಗಾಗ ಮಳೆಯಾಗಿದ್ದರಿಂದ ಕೆಲವೆಡೆ ಬೆಳೆ ಉತ್ತಮವಾಗಿ ಬಂದಿತ್ತು. ಹೆಚ್ಚಿನ ಇಳುವರಿಯ ನಿರೀಕ್ಷೆಯಲ್ಲಿದ್ದ ಬೆಳೆಗಾರರು ಬಿತ್ತನೆ ಬೀಜ, ಗೊಬ್ಬರ, ಕಳೆ ತೆಗೆಸುವುದು ಹಾಗೂ ಔಷಧ ಸಿಂಪಡಣೆ ಸೇರಿ ಒಂದು ಎಕರೆಗೆ ₹ 40,000ಕ್ಕೂ ಅಧಿಕ ಖರ್ಚು ಮಾಡಿದ್ದಾರೆ. ಆದರೆ, 3 ತಿಂಗಳ ಬೆಳೆಗೆ ಕೊಳೆರೋಗ ಹೆಚ್ಚಾಗಿದ್ದು, ಈರುಳ್ಳಿ ತೊಂಡೆ ಒಣಗುತ್ತಿದೆ. ಬೇರು ಹಾಗೂ ಗೆಡ್ಡೆಯೂ ಕೊಳೆಯುತ್ತದೆ. ಕಟಾವಿಗೆ ಬಂದಿರುವ ಬೆಳೆ ಕಿತ್ತು ಮಾರಾಟ ಮಾಡಲು ಮಾರುಕಟ್ಟೆಯಲ್ಲಿ ದರ ಕುಸಿತವಾಗಿದೆ. ಇದರಿಂದಾಗಿ ಬೆಳೆಗಾರರಿಗೆ ದಿಕ್ಕು ತೋಚದಂತಾಗಿದೆ.
3 ಎಕರೆ ಕೆಂಪು ಜಮೀನಿನಲ್ಲಿ ಈ ಬಾರಿ ಈರುಳ್ಳಿ ಬೆಳೆಯಲು ₹ 1.20 ಲಕ್ಷ ಖರ್ಚು ಮಾಡಿದ್ದೆವು. ಸುಮಾರು 350 ಪ್ಯಾಕೆಟ್ ಈರುಳ್ಳಿ ಆಗಬೇಕಿತ್ತು. ಆದರೆ, ಕೊಳೆರೋಗದಿಂದ ಶೇ 75ರಷ್ಟು ಗೆಡ್ಡೆ ಕೊಳೆತು ಹೋಗಿದೆ. ಉಳಿದಿರುವ ಈರುಳ್ಳಿ ಕಿತ್ತು ಮಾರಾಟ ಮಾಡೋಣ ಎಂದರೆ ಕೊಳೆರೋಗಕ್ಕೆ ತುತ್ತಾಗಿರುವ 60 ಕೆ.ಜಿ. ಈರುಳ್ಳಿ ಪ್ಯಾಕೆಟ್ ₹ 60ಕ್ಕೂ ತೆಗೆದುಕೊಳ್ಳುವುದಿಲ್ಲ. ಮತ್ತೆ ಕೊಯ್ಲಿಗೆ ಬಂದಿರುವ ಈರುಳ್ಳಿ ಕಿತ್ತು ಮಾರುಕಟ್ಟೆಗೆ ಸಾಗಿಸಲು ಈರುಳ್ಳಿ ಚೀಲ ತರುವುದು, ಕೊಯ್ಯುವ ಕಾರ್ಮಿಕರ ಕೂಲಿ, ವಾಹನ ಬಾಡಿಗೆ ಸೇರಿ 1 ಪಾಕೆಟ್ಗೆ ₹ 200 ಖರ್ಚಾಗುತ್ತದೆ.
‘ಹೀಗಾಗಿ ಕಷ್ಟುಪಟ್ಟು ಬೆಳೆದಿರುವ ಈರುಳ್ಳಿ ಕಿತ್ತು ಮಾರಾಟಕ್ಕೆ ಮುಂದಾದರೆ ಮತ್ತೆ ಸಾವಿರಾರು ರೂಪಾಯಿ ನಷ್ಟ ಉಂಟಾಗುತ್ತದೆ. ಇದರಿಂದಾಗಿ ಕಟಾವಿಗೆ ಬಂದಿರುವ ಈರುಳ್ಳಿ ಕೀಳದೇ ಜಮೀನಿನಲ್ಲಿಯೇ ಬಿಟ್ಟಿದ್ದೇವೆ. ಈರುಳ್ಳಿ ಬೆಳೆಯಲು ಸಾಲ ಮಾಡಿರುವುದನ್ನು ಹೇಗೆ ತೀರಿಸಬೇಕು ಎಂಬ ಚಿಂತೆ ಕಾಡುತ್ತದೆ. ಇನ್ನು ಮುಂದೆ ಈರುಳ್ಳಿ ಬೆಳೆಯುವುದೇ ಬೇಡವೇನೋ ಎನ್ನುವಷ್ಟು ಬೇಸರ ಉಂಟಾಗಿದೆ’ ಎಂದು ಲಕ್ಕಿಹಳ್ಳಿ ಗ್ರಾಮದ ಬೆಳೆಗಾರ ಮರಿಯಪ್ಪ ತಮ್ಮ ಅಳಲು ತೋಡಿಕೊಂಡರು.
....
13 ವರ್ಷಗಳಿಂದಲೂ ಈರುಳ್ಳಿ ಬೆಳೆಯುತ್ತಿದ್ದೇವೆ. ಆದರೆ, ಈ ಬಾರಿ ಆದಷ್ಟು ನಷ್ಟ ಯಾವಾಗಲೂ ಆಗಿರಲಿಲ್ಲ. ಬೆಳೆಗಾರರ ಹಿತ ಕಾಪಾಡಲು ಬೆಂಬಲ ಬೆಲೆ ನಿಗದಿ ಮಾಡಬೇಕು.
-ಮರಿಯಪ್ಪ, ಈರುಳ್ಳಿ ಬೆಳೆಗಾರ, ಲಕ್ಕಿಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.