ಚಿತ್ರದುರ್ಗ: ಮುಂಗಾರು ಪೂರ್ವ, ಮುಂಗಾರು ಮಳೆ ಉತ್ತಮವಾಗಿರುವ ಪರಿಣಾಮ ಈ ಬಾರಿ ಜಿಲ್ಲೆಯಾದ್ಯಂತ ರೈತರು ನಿಗದಿತ ಅವಧಿಯಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದಾರೆ. ಈಗಾಗಲೇ 20,000 ಹೆಕ್ಟೇರ್ಗೂ ಹೆಚ್ಚು ಈರುಳ್ಳಿ ಬಿತ್ತನೆಯಾಗಿರುವುದು ವಿಶೇಷವಾಗಿದೆ.
ಮೇ ತಿಂಗಳ ಆರಂಭದಿಂದಲೂ ಉತ್ತಮ ಮಳೆಯಾಗಿರುವ ಕಾರಣ ಜಿಲ್ಲೆಯಲ್ಲಿ ಈಗಾಗಲೇ ಶೇ 85ರಷ್ಟು ರೈತರು ಈರುಳ್ಳಿ ಬಿತ್ತನೆ ಪೂರ್ಣಗೊಳಿಸಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 60ರಷ್ಟು ಬಿತ್ತನೆ ಆಗಿರಲಿಲ್ಲ. ಈ ವರ್ಷ ಹಂಗಾಮು ಆರಂಭವಾಗುವ ಹೊತ್ತಿಗೆ ಧಾರಾಕಾರ ಮಳೆ ಸುರಿದ ಪರಿಣಾಮ ಬಿತ್ತನೆಗೆ ಯಾವುದೇ ಅಡೆ–ತಡೆಯಾಗಲಿಲ್ಲ. ಬಿತ್ತನೆಬೀಜವೂ ಸಮರ್ಪಕವಾಗಿ ದೊರೆಯುತ್ತಿದ್ದು ಬಿತ್ತನೆ ಕಾರ್ಯ ಅಂತಿಮ ಹಂತಕ್ಕೆ ಬಂದಿದೆ.
ಕಳೆದ ಹಂಗಾಮಿನಲ್ಲಿ ಜಿಲ್ಲೆಯ ರೈತರಿಗೆ ಉತ್ತಮ ಬೆಲೆ ಸಿಕ್ಕಿದೆ. ‘ಚಿತ್ರದುರ್ಗ ಈರುಳ್ಳಿ’ ಮಾರುಕಟ್ಟೆಗೆ ಬರುವ ಹೊತ್ತಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಇತ್ತು. ಪ್ರತಿ ಕ್ವಿಂಟಲ್ ಈರುಳ್ಳಿ ₹ 6,900ರವರೆಗೂ ಮಾರಾಟವಾಯಿತು. ರೈತರು ಉತ್ತಮ ಲಾಭವನ್ನೂ ನೋಡಿದರು. ಇದೇ ಕಾರಣಕ್ಕೆ ಈ ಬಾರಿ ಈರುಳ್ಳಿ ಬಿತ್ತನೆ ಪ್ರಮಾಣ ಹೆಚ್ಚಾಗಿದೆ ಎಂದು ರೈತರು ಹೇಳುತ್ತಾರೆ.
ಕಳೆದ ವರ್ಷ ಜಿಲ್ಲೆಯ 18,000 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿತ್ತು. ಈ ವರ್ಷ ಅದರ ಪ್ರಮಾಣ ಈಗಾಗಲೇ 20,000 ಹೆಕ್ಟೇರ್ ದಾಟಿದ್ದು ಹಂಗಾಮು ಪೂರ್ಣಗೊಳ್ಳುವ ಹೊತ್ತಿಗೆ 25,000 ಹೆಕ್ಟೇರ್ ದಾಟಲಿದೆ ಎಂದು ನಿರೀಕ್ಷಿಸಲಾಗಿದೆ. ಚಿತ್ರದುರ್ಗ ತಾಲ್ಲೂಕಿನ ಕಸಬಾ, ತುರುವನೂರು ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚಿನ ರೈತರು ಈರುಳ್ಳಿ ಬಿತ್ತನೆ ಮಾಡುತ್ತಿದ್ದಾರೆ.
ಹಿರಿಯೂರು ತಾಲ್ಲೂಕಿನ ಐಮಂಗಲ, ಕಸಬಾ ಹೋಬಳಿ, ಚಳ್ಳಕೆರೆ ತಾಲ್ಲೂಕಿನ ಬಹುತೇಕ ಎಲ್ಲಾ ಹೋಬಳಿ ವ್ಯಾಪ್ತಿಯಲ್ಲಿ ರೈತರು ವ್ಯಾಪಕವಾಗಿ ಈರುಳ್ಳಿ ಬಿತ್ತನೆ ಮಾಡಿದ್ದಾರೆ. ಮುಂಗಾರು ಮಳೆಯೂ ಉತ್ತಮ ರೀತಿಯಲ್ಲೇ ಆರಂಭವಾಗಿರುವ ಕಾರಣ ರೈತರು ಹೆಚ್ಚು ಇಳುವರಿ ಹಾಗೂ ಹೆಚ್ಚು ಲಾಭದ ನಿರೀಕ್ಷೆಯಲ್ಲಿದ್ದಾರೆ.
ನಿಗದಿತ ಅವಧಿಯಲ್ಲಿ ಈರುಳ್ಳಿ ಬಿತ್ತನೆ ಬೀಜ ದೊರೆಯುತ್ತಿದೆ ಯಾವ ಭಾಗದಲ್ಲೂ ಕೊರತೆಯಾಗಿಲ್ಲ. ಜೊತೆಗೆ ಉತ್ತಮ ಮಳೆಯಾಗುತ್ತಿರುವ ಕಾರಣ ಈ ಬಾರಿ ಹೆಚ್ಚು ರೈತರು ಈರುಳ್ಳಿ ಬಿತ್ತನೆಗೆ ಮುಂದಾಗಿದ್ದಾರೆ.–ಎಸ್.ಎಸ್.ಭೋಗಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ
ಜಿಲ್ಲೆಯಲ್ಲಿ ಪಂಚಗಂಗ ಬಿತ್ತನೆಬೀಜವನ್ನು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಿದ್ದಾರೆ. ಇದು ಉತ್ತಮಗಾತ್ರ ಹಾಗೂ ಹೆಚ್ಚು ಇಳುವರಿ ಬರುವ ಕಾರಣ ರೈತರು ಇದನ್ನೇ ಹೆಚ್ಚಾಗಿ ಬಿತ್ತನೆ ಮಾಡುತ್ತಿದ್ದಾರೆ. ಜೊತೆಗೆ ರೂಬಿ, ಅರ್ಕ ಕಲ್ಯಾಣ ತಳಿಯನ್ನೂ ಬಿತ್ತನೆ ಮಾಡುತ್ತಿದ್ದಾರೆ.
ಸೆಪ್ಟೆಂಬರ್ಗೆ ಕಟಾವು: ದುರ್ಗದ ಈರುಳ್ಳಿ ಪ್ರತೀ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಕಟಾವಿಗೆ ಬರುತ್ತದೆ. ಸಾಮಾನ್ಯವಾಗಿ ಆ ವೇಳೆ ಈರುಳ್ಳಿಗೆ ಹೆಚ್ಚು ಬೆಲೆ ಸಿಗುತ್ತದೆ. ರೈತರು ನವೆಂಬರ್ ಅಂತ್ಯದವರೆಗೂ ಮಾರಾಟ ಮಾಡುತ್ತಾರೆ. ನವೆಂಬರ್ ನಂತರ ಉತ್ತರ ಕರ್ನಾಟಕ ಭಾಗದ ಬಾಗಲಕೋಟೆ, ವಿಜಯಪುರ, ಗದಗ ಭಾಗದ ಈರುಳ್ಳಿ ಮಾರುಕಟ್ಟೆಗೆ ಬರುತ್ತದೆ.
‘ಜನವರಿಯಿಂದ ಆಗಸ್ಟ್ವರೆಗೂ ಸ್ಥಳೀಯ ಈರುಳ್ಳಿ ಮಾರುಕಟ್ಟೆಯಲ್ಲಿ ಇರುವುದಿಲ್ಲ. ಆಗ ಮಹಾರಾಷ್ಟ್ರ ಸೇರಿದಂತೆ ಹೊರರಾಜ್ಯಗಳ ಈರುಳ್ಳಿ ಅಪಾರ ಪ್ರಮಾಣದಲ್ಲಿ ಹರಿದು ಬರುತ್ತದೆ. ಆಗ ಬೆಲೆ ಕುಸಿತವಿರುವ ಕಾರಣ ಸ್ಥಳೀಯರು ಈರುಳ್ಳಿ ಮಾರಾಟ ಮಾಡುವುದಿಲ್ಲ. ಸೆಪ್ಟೆಂಬರ್ ಆರಂಭಕ್ಕೆ ಕಟಾವಿಗೆ ಬರುವ ರೀತಿಯಲ್ಲೇ ನಾವು ಬಿತ್ತನೆ ಮಾಡುತ್ತೇವೆ’ ಎಂದು ತುರುವನೂರು ಗ್ರಾಮದ ಈರುಳ್ಳಿ ಬೆಳೆಗಾರ ಸಿ.ಪರಮೇಶ್ವರಪ್ಪ ಹೇಳಿದರು.
ಮೆಕ್ಕೆಜೋಳ ಬಿತ್ತನೆಗೆ ಉತ್ಸಾಹ
ವಾರದಿಂದೀಚೆಗೆ ಜಿಲ್ಲೆಯಾದ್ಯಂತ ರೈತರು ಮೆಕ್ಕೆಜೋಳ ಬಿತ್ತನೆಗೆ ಹೆಚ್ಚು ಉತ್ಸಾಹ ತೋರಿಸುತ್ತಿದ್ದಾರೆ. ಈ ಬಾರಿ 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡುವ ಗುರಿ ಇದೆ. ಈಗಾಗಲೇ 30000 ಹೆಕ್ಟೇರ್ ಪ್ರದೇಶದಲ್ಲಿ ರೈತರು ಬಿತ್ತನೆ ಮಾಡಿದ್ದಾರೆ. ಮಳೆಯಾಶ್ರಿತವಾಗಿ ಚಿತ್ರದುರ್ಗ ಹೊಳಲ್ಕೆರೆ ಹೊಸದುರ್ಗ ತಾಲ್ಲೂಕುಗಳಲ್ಲಿ ಹೆಚ್ಚಿನ ರೈತರು ಮೆಕ್ಕೆಜೋಳ ಬಿತ್ತನೆ ಮಾಡುತ್ತಿದ್ದಾರೆ. ನೀರಾವರಿ ಆಶ್ರಿತ ಚಳ್ಳಕೆರೆ ಮೊಳಕಾಲ್ಮುರು ತಾಲ್ಲೂಕು ಭಾಗದಲ್ಲಿ ಮೆಕ್ಕೆಜೋಳ ಬಿತ್ತನೆಯಾಗುತ್ತಿದೆ. ‘ಹತ್ತಾರು ಖಾಸಗಿ ಕಂಪನಿಗಳು ಮೆಕ್ಕೆಜೋಳ ಬಿತ್ತನೆಬೀಜ ಮಾರಾಟ ಮಾಡುತ್ತಿವೆ. ಯಾವ ತಾಲ್ಲೂಕಿನಲ್ಲೂ ಬಿತ್ತನೆ ಬೀಜಕ್ಕೆ ಕೊರತೆಯಾಗಿಲ್ಲ’ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.