ADVERTISEMENT

ತೊಗರಿ ಬೆಳೆಗಾರರಿಗೆ ಜಿಲ್ಲಾಡಳಿತ ಅನ್ಯಾಯ: ಮಧ್ಯಂತರ ಬೆಳೆ ಪರಿಹಾರವೂ ಬಾರದಂತೆ ತಡೆ

ಅವೈಜ್ಞಾನಿಕ ವರದಿ ರದ್ದತಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 5:33 IST
Last Updated 18 ಡಿಸೆಂಬರ್ 2025, 5:33 IST
ರೈತರು ಹಾಳಾದ ತೊಗರಿ ಬೆಳೆಯನ್ನು ಪ್ರದರ್ಶನ ಮಾಡಿದರು
ರೈತರು ಹಾಳಾದ ತೊಗರಿ ಬೆಳೆಯನ್ನು ಪ್ರದರ್ಶನ ಮಾಡಿದರು   

ಚಿತ್ರದುರ್ಗ: ‘ಮುಂಗಾರು ಹಂಗಾಮಿನಲ್ಲಿ ತೊಗರಿ ಬೆಳೆ ಹಾಳಾದ ಸಮೀಕ್ಷಾ ವರದಿ ಸಲ್ಲಿಕೆಯಾದರೂ ವಿಮಾ ಕಂಪನಿಯಿಂದ ಮಧ್ಯಂತರ ಪರಿಹಾರ ಕೊಡಸಲು ಜಿಲ್ಲಾಡಳಿತ ವಿಫಲವಾಗಿದೆ. ಆ ಮೂಲಕ ಸಾವಿರಾರು ರೈತರಿಗೆ ಅನ್ಯಾಯ ಮಾಡಿದೆ’ ಎಂದು ಚಳ್ಳಕೆರೆ ತಾಲ್ಲೂಕು ಶೇಂಗಾ ಮತ್ತು ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಸಿ.ಶಿವಲಿಂಗಪ್ಪ ಆರೋಪಿಸಿದರು.

‘ಜಿಲ್ಲೆಯಾದ್ಯಂತ 4,926 ಬೆಳೆಗಾರರು ಬೆಳೆ ವಿಮೆ ಪಾವತಿ ಮಾಡಿದ್ದಾರೆ. ಜೂನ್‌, ಜುಲೈ ತಿಂಗಳಲ್ಲಿ ತೊಗರಿ ಬಿತ್ತನೆಯಾದ ನಂತರ ನಾಲ್ಕೈದು ವಾರ ಮಳೆ ಕೊರತೆಯಾಗಿ ಬೆಳೆ ಹಾಳಾಯಿತು. ಈ ವೇಳೆ ಬೆಳೆ ಸಮೀಕ್ಷೆ ಮಾಡಲು ವಿಮಾ ಕಂಪನಿ ಅಧಿಕಾರಿಗಳು ಸಹಕಾರ ನೀಡಿಲ್ಲ. ಅಧಿಕಾರಿಗಳು ಸಲ್ಲಿಸಿದ ಸಮೀಕ್ಷಾ ವರದಿಗೆ ಕಂಪನಿ ಅಧಿಕಾರಿಗಳು ಸಹಿ ಮಾಡಿಲ್ಲ. ಜಿಲ್ಲಾಧಿಕಾರಿ ಸಹಿ ಮಾಡಿಸಲು ವಿಫಲರಾದ ಕಾರಣ ರೈತರಿಗೆ ಬೆಳೆ ನಷ್ಟ ಪರಿಹಾರ ಬಂದಿಲ್ಲ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು. 

‘ಸಮೀಕ್ಷಾ ವರದಿಯಲ್ಲಿ ಶೇ 55ರಿಂದ ಶೇ60ರಷ್ಟು ಇಳುವರಿ ಕುಸಿದಿದೆ ಎಂದು ಅಧಿಕಾರಿಗಳು ವರದಿ ನೀಡಿದ್ದರು. ಮಧ್ಯಂತರ ಪರಿಹಾರ ಪಡೆಯಲು ರೈತರು ನಡೆಸಿದ ಹೋರಾಟವನ್ನೂ ಅಧಿಕಾರಿಗಳು ವಿಫಲಗೊಳಿಸಿದ್ದಾರೆ. ಈಗ ಕಟಾವು ಹಂತದಲ್ಲಿ ಮತ್ತೆ ಸಮೀಕ್ಷೆ ನಡೆಸಿದ್ದು ಶೇ 80ರಷ್ಟು ಬೆಳೆ ಚೆನ್ನಾಗಿದೆ. ಪರಿಹಾರ ನೀಡುವ ಅವಶ್ಯಕತೆ ಇಲ್ಲ ಎಂಬ ಅರ್ಥದಲ್ಲಿ ವರದಿ ಸಿದ್ಧಪಡಿಸಿದ್ದಾರೆ. ಒಂದು ತಿಂಗಳ ಅಂತರದಲ್ಲಿ ಬೆಳೆಯ ಇಳುವರಿ ಹೆಚ್ಚಾಗಲು ಹೇಗೆ ಸಾಧ್ಯ’ ಎಂದು ಅವರು ಪ್ರಶ್ನಿಸಿದರು.

ADVERTISEMENT

‘ಕಟಾವು ಹಂತದಲ್ಲಿ ನಡೆಸಿರುವ ‘ಸಿಪ್ಪೆ ಸಹಿತ ತೊಗರಿ ಬೆಳೆ ಪ್ರಯೋಗ’ ಅವೈಜ್ಞಾನಿಕವಾದುದು. ಹಾಳಾದ ಬೆಳೆ ತರಿದು ಸಿಪ್ಪೆ ಸಹಿತವಾಗಿ ತೂಕ ಮಾಡಿದಾಗ 5 ಕೆ.ಜಿ ತೂಕ ಬಂದಿದೆ. ಆದರೆ ಬೆಳೆಯನ್ನು ಸಿಪ್ಪೆ ಸುಲಿದು ತೂಗಿದಾಗ ಕೇವಲ 2 ಕೆ.ಜಿಯಷ್ಟೇ ಬರುತ್ತದೆ. ರೈತರಿಗೆ ಅನ್ಯಾಯ ಮಾಡುವ ಉದ್ದೇಶದಿಂದಲೇ ನಡೆಸಿರುವ ಬೆಳೆ ಪ್ರಯೋಗ ಮರಣಶಾಸನವಾಗಿದೆ. ಅಧಿಕಾರಿಗಳು ವಿಮಾ ಕಂಪನಿ ಜೊತೆ ಶಾಮೀಲಾಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರ ಮಧ್ಯಪ್ರವೇಶ ಮಾಡಿ ಜಿಲ್ಲೆಯ ತೊಗರಿ ಬೆಳೆಗಾರರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು. ಈ ಮೊದಲೇ ಸಿದ್ಧಪಡಿಸಿದ್ದ ಸಮೀಕ್ಷಾ ವರದಿ ಅನುಸಾರ ಮಧ್ಯಂತರ ಪರಿಹಾರ ಬಿಡುಗಡೆ ಮಾಡಬೇಕು. ಈಗ ಸಿದ್ಧಪಡಿಸಿರುವ ಅವೈಜ್ಞಾನಿಕ ವರದಿಯನ್ನು ರದ್ದುಗೊಳಿಸಬೇಕು. ಇನ್ನೊಂದು ವಾರದಲ್ಲಿ ಕಟಾವು ಮುಗಿಯಲಿದ್ದು ಅಷ್ಟೊರೊಳಗೆ ತೊಗರಿ ಹೊಲಗಳಿಗೆ ಬಂದು ವಸ್ತುಸ್ಥಿತಿ ವರದಿ ಸಿದ್ಧಪಡಿಸಬೇಕು’ ಎಂದು ಒತ್ತಾಯಿಸಿದರು.

‘ವಿಮಾ ಕಂಪನಿ, ಜಿಲ್ಲಾಡಳಿತದ ಕ್ರಮವನ್ನು ನಾವು ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆಯಲ್ಲೂ ಪ್ರಶ್ನಿಸಿದ್ದೆವು. ಅಲ್ಲೂ ನಮಗೆ ಪರಿಹಾರ ಸಿಕ್ಕಿಲ್ಲ. ಹೀಗಾಗಿ ರೈತರಿಗೆ ಆಗಿರುವ ಅನ್ಯಾಯವನ್ನು ಶೀಘ್ರ ಸರಿಪಡಿಸಬೇಕು. ಇಲ್ಲದಿದ್ದರೆ ಜಿಲ್ಲೆಯಾದ್ಯಂತ ಹೋರಾಟ ರೂಪಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ರೈತಮುಖಂಡ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ‘ಅಧಿಕಾರಿಗಳೇ ಸಿದ್ಧಪಡಿಸಿದ್ದ ವರದಿಯನ್ನು ಮುಚ್ಚಿಹಾಕಿ ಈಗ ಮತ್ತೊಂದು ಸುಳ್ಳು ವರದಿ ಸೃಷ್ಟಿಸಿದ್ದಾರೆ. ಆ ಮೂಲಕ ಮಧ್ಯಂತರ ಪರಿಹಾರವೂ ಬಾರದಂತೆ ತಡೆಯಲಾಗಿದೆ. ಕೃಷಿ ಜಂಟಿ ನಿರ್ದೇಶಕರಿಗೆ ಇಚ್ಛಾಶಕ್ತಿ ಇಲ್ಲದ ಕಾರಣ ರೈತರಿಗೆ ಮೋಸವಾಗಿದೆ ಅಧಿಕಾರಿಗಳ ಈ ಮನೋಭಾವದಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಮುಖಂಡರಾದ ಮಲ್ಲಿಕಾರ್ಜುನಪ್ಪ, ಜೆ.ಯಾದವರೆಡ್ಡಿ, ಆರ್‌.ಎ.ದಯಾನಂದಮೂರ್ತಿ, ಹಿರೇಹಳ್ಳಿ ಯರ್ರಿಸ್ವಾಮಿ, ಎಸ್‌.ಪ್ರಕಾಶ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.