
ಹಿರಿಯೂರು: ಪ್ಲಾಸ್ಟಿಕ್ ಬಳಸದಂತೆ ಹಲವು ಬಾರಿ ವರ್ತಕರಿಗೆ ಜಾಗೃತಿ ಮೂಡಿಸಿ, ದಂಡ ವಿಧಿಸಿದ್ದರೂ ಪ್ಲಾಸ್ಟಿಕ್ ಬಳಕೆ ನಿಲ್ಲದಿರುವುದು ಬೇಸರ ತರಿಸಿದೆ ಎಂದು ನಗರಸಭೆ ಪೌರಾಯುಕ್ತ ಎ.ವಾಸೀಂ ಹೇಳಿದರು.
ನಗರದ ನಗರಸಭೆಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವದ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ಕಲ್ಯಾಣ ಮಂಟಪಗಳು, ಹೋಟೆಲ್ ಮಾಲೀಕರ ಸಭೆಯಲ್ಲಿ ಅವರು ಮಾತನಾಡಿದರು.
‘ವರ್ತಕರು ಸಾಮಾಜಿಕ ಜವಾಬ್ದಾರಿ ಅರಿತು ನಡೆದುಕೊಳ್ಳಬೇಕು. ಪರಿಸರ ಸಂರಕ್ಷಣೆ ಎಲ್ಲರ ಹೊಣೆಯಾಗಿದ್ದು, ಪ್ಲಾಸ್ಟಿಕ್ ಅತ್ಯಂತ ಅಪಾಯಕಾರಿ ಎಂಬುದರ ಅರಿವು ಗ್ರಾಹಕರಿಗೆ, ಮಾರಾಟಗಾರರಿಗೆ ಇದ್ದರೆ ಒಳಿತು’ ಎಂದು ಅವರು ಎಚ್ಚರಿಸಿದರು.
‘ಹೋಟೆಲ್ಗಳಲ್ಲಿ, ಕಲ್ಯಾಣ ಮಂಟಪಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಆಹಾರಕ್ಕೆ ಬಣ್ಣ ಹಾಗೂ ಟೇಸ್ಟಿ ಪೌಡರ್ ಸೇರಿಸಬಾರದು. ಪ್ಲಾಸ್ಟಿಕ್ ಮುಕ್ತ ಮಾಡಲು ಸಮುದಾಯದ ಸಹಭಾಗಿತ್ವ ಅಗತ್ಯ’ ಎಂದು ರೈನ್ ಟ್ರಸ್ಟ್ ಅಧ್ಯಕ್ಷ ಕಸವನಹಳ್ಳಿ ರಮೇಶ್ ತಿಳಿಸಿದರು.
ತಹಶೀಲ್ದಾರ್ ಸಿದ್ದೇಶ್ ಮಾತನಾಡಿ, ‘ರೆಡ್ಯೂಸ್, ರಿಯೂಸ್, ರಿಸೈಕಲ್ ಮಾದರಿಯನ್ನು ಇಟ್ಟುಕೊಂಡು ಕೆಲಸ ಮಾಡಿದಲ್ಲಿ ಸ್ವಚ್ಛತೆ ಕಾಪಾಡಬಹುದು’ ಎಂದು ಅಭಿಪ್ರಾಯಪಟ್ಟರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷ ಬಾಲಕೃಷ್ಣ, ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಲು ಅಧಿಕಾರಿಗಳು, ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತಾ, ವಿಠ್ಠಲ್, ಎಂ.ಡಿ. ಸಣ್ಣಪ್ಪ, ಮಾತನಾಡಿದರು. ನಗರಸಭೆ ಸದಸ್ಯ ಶಿವಕುಮಾರ್, ಕೆ.ಜಿ. ಹನುಮಂತರಾಯ, ನಗರಸಭೆ ಆರೋಗ್ಯ ನಿರೀಕ್ಷಕರಾದ ಮಹಾಲಿಂಗರಾಜು, ಅಶೋಕ್, ಸಂಧ್ಯಾ, ಸುನಿಲ್, ನಯಾಜ್, ಮೇಲ್ವಿಚಾರಕ ದುರ್ಗೇಶ್, ಮಹಮದ್ ನಾಜಿಮ್, ಸೈಯದ್ ನಯೀಮುದ್ದೀನ್, ವ್ಯಾಪಾರಿ ಸೈಯದ್ ಅಸ್ಲಾಂ, ಪಾರಿಜಾತ ಕಲ್ಯಾಣ ಮಂಟಪದ ತಿಪ್ಪೇಸ್ವಾಮಿ ಹಾಗೂ ಅಂಗಡಿ ಮಾಲೀಕರು, ಹೋಟೆಲ್ ಮತ್ತು ಬೀದಿ ಬದಿ ವ್ಯಾಪಾರಿಗಳು ಭಾಗವಹಿಸಿದ್ದರು.
ಕೊನೆಯಲ್ಲಿ ನಗರಸಭೆ ಪೌರಾಯುಕ್ತ ವಾಸಿಮ್ ಪ್ಲಾಸ್ಟಿಕ್ ಬಳಸುವುದಿಲ್ಲ ಎಂಬ ಪ್ರಮಾಣ ವಚನ ಬೋಧಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.