ಚಿಕ್ಕಜಾಜೂರು: ಸೋಮವಾರ ಮುಂಜಾನೆಯಿಂದ ಸುರಿದ ಮಳೆಯಿಂದಾಗಿ ಹೋಬಳಿಯ ಬಹುತೇಕ ಕಡೆಗಳಲ್ಲಿ ಜಮೀನು, ತೋಟಗಳು ಜಲಾವೃತಗೊಂಡಿವೆ. ಹಳ್ಳಗಳು ತುಂಬಿ ಹರಿದಿವೆ.
ಚಿಕ್ಕಜಾಜೂರಿನಲ್ಲಿ 8.6 ಮಿ.ಮೀ., ಬಿ. ದುರ್ಗದಲ್ಲಿ 46.2 ಮಿ.ಮೀ. ಮಳೆಯಾಗಿದೆ. ತರಳಬಾಳು ನಗರದ ಹಳ್ಳದಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಚೆಕ್ಡ್ಯಾಂ ಧುಮ್ಮುಕ್ಕುತ್ತಿದ್ದ ನೀರು ಕಿರು ಜಲಪಾತ ಸೃಷ್ಟಿಸಿತು.
ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಅಧಿಕ ಮಳೆಯಿಂದಾಗಿ ಸಂಪೂರ್ಣವಾಗಿ ನಷ್ಟವಾಗಿದ್ದರಿಂದ ಹೋಬಳಿಯ ಅನೇಕ ರೈತರು ಮೆಕ್ಕೆಜೋಳವನ್ನು ಅಳಿಸಿ, ಮತ್ತೆ ಮೆಕ್ಕೆಜೋಳ, ರಾಗಿ, ಹುರುಳಿ ಮತ್ತಿತರ ಅಲ್ಪ ಕಾಲಾವಧಿಯ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ವಾರದಿಂದ ಮಳೆ ಬಿಡುವು ನೀಡಿದ್ದರಿಂದ, ಹೊಸದಾಗಿ ಬಿತ್ತನೆ ಮಾಡಿದ್ದ ಸಸಿಗಳಿಗೆ ಮಳೆ ಅಗತ್ಯವಿತ್ತು.
ಆದರೆ ಕೆಲ ರೈತರ ಜಮೀನಿನಲ್ಲಿ ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಅಧಿಕ ಮಳೆಯಿಂದಾಗಿ ಹಾಳಾಗಿದ್ದು, ಅಲ್ಪಸ್ವಲ್ಪ ಇದ್ದ ಮೆಕ್ಕೆಜೋಳವನ್ನು ಮೇವಿಗೆ ತೆಗೆದುಕೊಂಡು ಹೋಗುತ್ತಿದ್ದುದು ಕಂಡುಬಂತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.