
ಹಿರಿಯೂರು: ತಾಲ್ಲೂಕಿನ ಹೊಸಯಳನಾಡು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಮಳೆ ನೀರು ಸಂಗ್ರಹ ತಜ್ಞ ದೇವರಾಜರೆಡ್ಡಿ ನೇತೃತ್ವದಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಲಾಯಿತು.
‘ನಮ್ಮ ಅಗತ್ಯಗಳಿಗೆ ಲೆಕ್ಕವಿಲ್ಲದಷ್ಟು ಕೊಳವೆಬಾವಿಗಳನ್ನು ಕೊರೆಯಿಸುತ್ತ ಹೋದಲ್ಲಿ ಒಂದಲ್ಲ ಒಂದು ದಿನ ಭೂಮಿ ತಾಯಿಯ ಒಡಲು ಬರಿದಾಗಲಿದೆ. ಆದ್ದರಿಂದ ರೈತರು ನೀರಿನ ವಿಚಾರದಲ್ಲಿ ಪರ್ಯಾಯ ಚಿಂತನೆಗಳತ್ತ ಗಂಭೀರವಾಗಿ ಗಮನ ಹರಿಸಬೇಕು. ವ್ಯರ್ಥವಾಗಿ ಹರಿದು ಹೋಗುವ ಮಳೆಯ ನೀರನ್ನು ಭೂಮಿಯಲ್ಲಿ ಇಂಗಿಸುವ ಮೂಲಕ ಅಂತರ್ಜಲ ವೃದ್ಧಿಸುವಂತೆ ಮಾಡಬೇಕು’ ಎಂದು ಶಾಲೆಯ ಮಹಾಪೋಷಕ ನಾ.ತಿಪ್ಪೇಸ್ವಾಮಿ ಹೇಳಿದರು.
‘ಶಾಲೆಯಲ್ಲಿ ಕಲಿಯುತ್ತಿರುವ ನೂರಾರು ವಿದ್ಯಾರ್ಥಿಗಳಿಗೆ ಸಾಕಾಗುವಷ್ಟು ನೀರನ್ನು ಗ್ರಾಮ ಪಂಚಾಯಿತಿ ಕೊಡಲು ಸಾಧ್ಯವಿಲ್ಲ. ಕೊಳವೆ ಬಾವಿ ಕೊರೆಯಿಸಿದರೆ ನೀರು ಶಾಶ್ವತವಾಗಿ ಸಿಗುವ ಭರವಸೆ ಇಲ್ಲ. ಹೀಗಾಗಿ ಇರುವ ಕೊಳವೆ ಬಾವಿಗೆ ಶಾಲಾ ಆವರಣದಲ್ಲಿ ಬೀಳುವ ಮಳೆಯ ನೀರನ್ನು ಇಂಗಿಸುವ ಕೆಲಸಕ್ಕೆ ಮುಂದಾಗಿದ್ದೇವೆ’ ಎಂದು ಹೇಳಿದರು.
‘ಆರೇಳು ದಶಕಗಳ ಕಾಲ ಕೊಳವೆ ಬಾವಿ ಕೊರೆಯಿಸುವವರಿಗೆ ಪಾಯಿಂಟ್ ತೋರಿಸಿಕೊಡುತ್ತಿದ್ದೆ. ಈಗ ಪಾಯಿಂಟ್ ಬದಲಿಗೆ ಹಿಂದೆ ಕೊರೆಯಿಸಿ ಬತ್ತಿ ಹೋಗಿರುವ ಕೊಳವೆ ಬಾವಿಗಳಿಗೆ ಜಲಮರುಪೂರಣ ಮಾಡಿಸುತ್ತಿದ್ದೇನೆ. ವಾಸದ ಮನೆಗಳಲ್ಲೂ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಿಕೊಂಡಲ್ಲಿ ಇಡೀ ವರ್ಷಕ್ಕೆ ಸಾಕೆನಿಸುವಷ್ಟು ಶುದ್ಧವಾದ ಕುಡಿಯುವ ನೀರು ಪಡೆಯಬಹುದು’ ಎಂದು ದೇವರಾಜರೆಡ್ಡಿ ಹೇಳಿದರು.
‘ಶಾಲೆ – ಕಾಲೇಜುಗಳಲ್ಲಿ ಬತ್ತಿ ಹೋಗಿರುವ ಕೊಳವೆ ಬಾವಿಗಳಿಗೆ ಜಲಮರುಪೂರಣ ವ್ಯವಸ್ಥೆ ಮಾಡಿಕೊಂಡರೆ ವಿದ್ಯಾರ್ಥಿಗಳಿಗೆ, ಕೈತೋಟಕ್ಕೆ ಅಗತ್ಯ ಇರುವಷ್ಟು ನೀರು ದೊರೆಯಲಿದೆ. ಹರಿದು ವ್ಯರ್ಥವಾಗುವ ಮಳೆಯ ನೀರನ್ನು ಅಲ್ಲಲ್ಲಿಯೇ ಹಿಡಿದಿಡುವ ವ್ಯವಸ್ಥೆ ಮಾಡಿದಲ್ಲಿ ಅಂತರ್ಜಲ ಕುಸಿತ ತಪ್ಪಿಸಬಹುದು’ ಎಂದು ತಿಳಿಸಿದರು.
ಬೆಂಗಳೂರಿನ ಸೇಫ್ ಫೌಂಡೇಷನ್ ಹಾಗೂ ದಾನಿಗಳ ನೆರವಿನಿಂದ ₹ 30 ಲಕ್ಷ ಮೌಲ್ಯದ ಶಾಲಾ ಬಸ್ ಅನ್ನು ಶಾಲೆಗೆ ಕೊಡುಗೆ ನೀಡಲಾಯಿತು. ಕೊಳವೆ ಬಾವಿಗೆ ನಿರ್ಮಿಸಿದ ಇಂಗುಗುಂಡಿಗೆ ‘ಶ್ರೀರಾಮತೀರ್ಥ’ ಎಂದು ನಾಮಕರಣ ಮಾಡಲಾಯಿತು.
ಎಸ್ಡಿಎಂಸಿ ಅಧ್ಯಕ್ಷ ಎನ್. ತಿಮ್ಮಶೆಟ್ರು, ಸದಸ್ಯರು, ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.