ADVERTISEMENT

ಶಿಕ್ಷಕನ ರಂಗಪ್ರೀತಿಗೆ ರಾಜ್ಯೋತ್ಸವ ಗರಿ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2023, 12:42 IST
Last Updated 31 ಅಕ್ಟೋಬರ್ 2023, 12:42 IST
   

ಚಿತ್ರದುರ್ಗ: ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ಕಾಟಮಲಿಂಗೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಪಿ.ತಿಪ್ಪೇಸ್ವಾಮಿ ಅವರ ರಂಗಪ್ರೀತಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ.

ತಿಪ್ಪೇಸ್ವಾಮಿ ಅವರು ವೃತ್ತಿಯ ಜೊತೆಗೆ ಸಾಹಿತ್ಯ, ಸಂಗೀತ ಹಾಗೂ ರಂಗಭೂಮಿಯಲ್ಲಿ ಕೆಲಸ ಮಾಡಿದ್ದಾರೆ. ರಕ್ತರಾತ್ರಿ, ಭಕ್ತಸುಧನ್ವ, ಕುರುಕ್ಷೇತ್ರ, ದೇವಿ ಮಹಾತ್ಮೆ, ದಾನಶೂರವೀರ ಕರ್ಣ, ವೀರಾಭಿಮಾನ್ಯು ಸೇರಿ ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳನ್ನು ರಂಗದ ಮೇಲೆ ತಂದಿದ್ದಾರೆ. ನಾಟಕ ನಿರ್ದೇಶನ ಮಾಡಿ ಸಂಗೀತ ನೀಡಿದ ಹೆಗ್ಗಳಿಗೆ ಇವರದು.

ಇವರ ನಿರ್ದೇಶನ ಹಾಗೂ ಸಂಗೀತದಲ್ಲಿ ಮೂಡಿಬಂದ ‘ರಾಜವೀರ ಮದಕರಿನಾಯಕ’ ನಾಟಕದ ದೆಹಲಿಯಲ್ಲಿ ಪ್ರದರ್ಶನ ಕಂಡು ದೇಶದ ಗಮನ ಸೆಳೆದಿದೆ. ಮ್ಯಾಸಬೇಡ ಬುಡಕಟ್ಟು ಸಮುದಾಯದ ಸಾಂಸ್ಕೃತಿಕ ವೀರರಾದ ಗಾದರಿ ಪಾಲನಾಯಕ ಮತ್ತು ಜಗಲೂರು ಪಾಪ ನಾಯಕರ ಕಥೆಗಳನ್ನು ರಂಗ ಪ್ರಯೋಗಕ್ಕೆ ತಂದವರು ತಿಪ್ಪೇಸ್ವಾಮಿ.

ADVERTISEMENT

1997 ರಲ್ಲಿ ಕಾಟಮಲಿಂಗೇಶ್ವರ ನಾಟಕ ಸಂಘ ಸ್ಥಾಪಿಸಿದ ತಿಪ್ಪೇಸ್ವಾಮಿ, ಹವ್ಯಾಸಿ ಗ್ರಾಮೀಣ ಕಲಾವಿದರ ಒಕ್ಕೂಟ ಹಾಗೂ ಜಾನಪದ ರಂಗಭೂಮಿಯ ಮೇಳಗಾರರ ಸಂಘದ ಏಳಿಗೆಗೆ ಶ್ರಮಿಸಿದರು. ಗ್ರಾಮೀಣ ರಂಗಭೂಮಿ ಸೇವೆಗೆ 2001 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಇವರಿಗೆ ಲಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.