ADVERTISEMENT

ಜಾತಿಗಣತಿ ಸಮೀಕ್ಷೆಯಲ್ಲಿ ರೆಡ್ಡಿ ಎಂದು ನಮೂದಿಸಿ: ವೇಮನಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 6:33 IST
Last Updated 5 ಸೆಪ್ಟೆಂಬರ್ 2025, 6:33 IST
ವೇಮನಾನಂದ ಸ್ವಾಮೀಜಿ
ವೇಮನಾನಂದ ಸ್ವಾಮೀಜಿ   

ಚಿತ್ರದುರ್ಗ: ‘ಪರಿಸರಕ್ಕೆ ಅನುಗುಣವಾಗಿ ಮೂಲ ರೆಡ್ಡಿ ಸಮಾಜ ಪಂಗಡಗಳಾಗಿ ವಿಭಜನೆಯಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಸೆ.22ರಿಂದ ನಡೆಸುವ ಜಾತಿಗಣತಿ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ರೆಡ್ಡಿ ಎಂದು ನಮೂದಿಸಬೇಕು’ ಎಂದು ಎರೆಹೊಸಹಳ್ಳಿ ರೆಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ ಮನವಿ ಮಾಡಿದರು.

‘ನಮ್ಮವರು ಆರಂಭದಿಂದಲೂ ಮೀಸಲಾತಿ ಸೌಲಭ್ಯಗಳಿಂದ ವಂಚಿತರಾಗುತ್ತಾ ಬಂದಿದ್ದಾರೆ. ತಮ್ಮೆಲ್ಲ ಒಳ ಪಂಗಡಗಳನ್ನು ಮರೆತು ಜಾತಿ ಗಣತಿಯ 1105 ಕೋಡ್‌ಗೆ ತಮ್ಮ ಜಾತಿ, ಧರ್ಮ ನಮೂದಿಸಬೇಕು’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರೆಡ್ಡಿಗಳು ತಮ್ಮ ಒಳ ಪಂಗಡಗಳನ್ನು ಮರೆತು ಒಗ್ಗಟ್ಟಾಗಬೇಕು. ಮುಂಬೈ ಕರ್ನಾಟಕ, ಹೈದರಾಬಾದ್‌ ಕರ್ನಾಟಕ, ಹಳೆ ಮೈಸೂರು ಭಾಗದಲ್ಲಿ ಒಂದೊಂದು ರೀತಿಯಲ್ಲಿ ಸಮಾಜದವರು ಇದ್ದಾರೆ. ಎಲ್ಲ ರೆಡ್ಡಿಗಳು ಒಗ್ಗಟ್ಟಾಗಿರಬೇಕು ಎಂಬ ಉದ್ದೇಶದಿಂದ ಅಭಿಯಾನ ನಡೆಸಲಾಗುತ್ತಿದೆ’ ಎಂದರು.

ADVERTISEMENT

‘ಬೆಂಗಳೂರಿನಲ್ಲಿ ಕರ್ನಾಟಕ ರೆಡ್ಡಿಜನ ಸಂಘ ಪ್ರಾರಂಭವಾಗಿ 100 ವರ್ಷಗಳಾಗಿವೆ. ಇದರ ಸವಿನೆನಪಿಗೆ ಸೆ.24ರಂದು ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಕರ್ನಾಟಕ ರೆಡ್ಡಿಜನ ಸಂಘದ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ತಿಳಿಸಿದರು.

ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಲಕ್ಷ್ಮಣ ರೆಡ್ಡಿ, ನಿರ್ದೇಶಕರಾದ ಎಂ.ಎ.ಕೃಷ್ಣರೆಡ್ಡಿ, ಬಾಬುರೆಡ್ಡಿ, ಭೈರತಿ, ಪ್ರಸನ್ನ, ರಾಜಾರೆಡ್ಡಿ, ಬಾಬಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.