ಚಿತ್ರದುರ್ಗ: ‘ಪರಿಶಿಷ್ಟ ಪಂಗಡದ ಮೀಸಲಾತಿಗೆ ಆಗ್ರಹಿಸಿ ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟದ ಧ್ವನಿ ವಿಧಾನಮಂಡಲದ ಅಧಿವೇಶನದಲ್ಲಿ ಮೊಳಗಲಿದೆ. ಪಾದಯಾತ್ರೆ ಬೆಂಗಳೂರು ತಲುಪುವ ಮೊದಲೇ ಸರ್ಕಾರದ ಗಮನ ಸೆಳೆಯು ತ್ತೇವೆ’ ಎಂದು ಜೆಡಿಎಸ್ ನಾಯಕ ಬಂಡೆಪ್ಪ ಕಾಶಂಪುರ ಹೇಳಿದರು.
ನಗರದಲ್ಲಿ ಶನಿವಾರ ರಾತ್ರಿ ನಡೆದ ಮೀಸಲಾತಿ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ‘ಇದೇ 28 ರಿಂದ ವಿಧಾನಮಂಡಲದ ಅಧಿವೇಶನ ಆರಂಭವಾಗುತ್ತಿದೆ. ಸಮುದಾಯದ ಎಲ್ಲ ನಾಯಕರು ಪಕ್ಷಭೇದ ಮರೆತು ಸರ್ಕಾರದ ಗಮನ ಸೆಳೆಯುತ್ತೇವೆ. ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುತ್ತೇವೆ’ ಎಂದರು.
‘ಕುರುಬ ಸಮುದಾಯ ಪರಿಶಿಷ್ಟ ಪಂಗಡದ ಮೀಸಲಾತಿ ಕೇಳುತ್ತಿರು ವುದು ಮೊದಲಲ್ಲ. ರಾಜ್ಯದ 4ಜಿಲ್ಲೆಗಳಲ್ಲಿ ಈಗಾಗಲೇ ಈ ಸೌಲಭ್ಯ ಸಿಕ್ಕಿದೆ. ಇದನ್ನು ರಾಜ್ಯದ ಎಲ್ಲ ಜಿಲ್ಲೆಗೂ ವಿಸ್ತರಿಸುವ ಅಗತ್ಯವಿದೆ’ ಎಂದು ಹೇಳಿದರು.
ಎಸ್.ಟಿ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ವಿರೂಪಾಕ್ಷಪ್ಪ, ‘ಇದು ಯಾರ ವಿರುದ್ಧವೂ, ಪರವೂ ನಡೆಯುತ್ತಿರುವ ಹೋರಾಟವಲ್ಲ. ಪಾದಯಾತ್ರೆಯ ಮೇಲೆ ಯಾವುದೇ ರಾಜಕೀಯ ಪಕ್ಷ ಪ್ರಭಾವ ಬೀರಿಲ್ಲ. ಕುರುಬ ಸಮುದಾಯದ ಹಿತಾಸಕ್ತಿ ಗಾಗಿ ನಡೆಯುತ್ತಿರುವ ಹೋರಾಟ’ ಎಂದರು.ಕನಕಗುರುಪೀಠದ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಅವರು ಮಾತನಾಡಿ, ‘ಪಾದಯಾತ್ರೆ ಬೆಂಗಳೂರು ತುಲುಪಿ ಮನವಿ ಸಲ್ಲಿಸಿದ ಬಳಿಕ ನಿರ್ಧಾರ ಕೈಗೊಳ್ಳಲು ಸರ್ಕಾರಕ್ಕೆ ಒಂದು ತಿಂಗಳ ಗಡುವು ನೀಡಲಾಗುವುದು. ಆ ಬಳಿಕ ಹೋರಾಟ ದೆಹಲಿಗೆ ವಿಸ್ತರಣೆ ಆಗಲಿದ್ದು, ಸಂಸತ್ ಭವನದ ಎದುರು ಧರಣಿ ನಡೆಸಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.