
ಹಿರಿಯೂರು: ದೇಶಭಕ್ತರ ಸಂಘಟನೆಯಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಕೋಮುವಾದಿ, ವಿಚ್ಛಿದ್ರಕಾರಿ ಸಂಘಟನೆಗಳೊಂದಿಗೆ ಹೋಲಿಸುವುದು ಸರಯಲ್ಲ ಎಂದು ಬಿಜೆಪಿ ಮುಖಂಡ ಎನ್.ಆರ್. ಲಕ್ಷ್ಮೀಕಾಂತ್ ಅಭಿಪ್ರಾಯಪಟ್ಟರು.
ನಗರದಲ್ಲಿ ಶನಿವಾರ ಆರ್ಎಸ್ಎಸ್ ಶತಮಾನೋತ್ಸವ ಆಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಗೃಹ ಸಂಪರ್ಕ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಆರ್ಎಸ್ಎಸ್ ಸದಸ್ಯರಾಗಲು ಅರ್ಜಿ ಹಾಕುವಂತೆ ಯಾರನ್ನೂ ಕರೆಯುವುದಿಲ್ಲ. ಸಂಘವನ್ನು ಬಿಟ್ಟು ಹೋಗುವವರನ್ನು ಏಕೆ ಹೋಗುತ್ತೀರಿ ಎಂದು ಪ್ರಶ್ನಿಸುವುದಿಲ್ಲ. ಸಂಘದ ತತ್ವ, ಸಿದ್ಧಾಂತ, ಧ್ಯೇಯಗಳನ್ನು ಮೆಚ್ಚಿ ವರ್ಷದಿಂದ ವರ್ಷಕ್ಕೆ ಸಂಘದತ್ತ ಬರುವ ದೇಶಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಇದನ್ನು ಸಹಿಸದ ಕೆಲವ ರಾಜಕೀಯ ಮುಖಂಡರು ವಿನಾಕಾರಣ ಕಿಡಿ ಕಾರುತ್ತಿದ್ದಾರೆ. ಒಮ್ಮೊಮ್ಮೆ ಅದು ಬಾಯಿ ಚಪಲಕ್ಕೂ ಇರಬಹುದು. ಇಂತಹ ಟೀಕೆಗಳಿಗೆ ಸಂಘ ಯಾವತ್ತೂ ತಲೆ ಕೆಡಿಸಿಕೊಳ್ಳುವುದಿಲ್ಲ. ಪ್ರತಿರೋಧ ಹೆಚ್ಚಿದಷ್ಟೂ ಸಂಘ ಮತ್ತಷ್ಟು ಬಲಿಷ್ಟವಾಗುತ್ತದೆ. ದೇಶಾಭಿಮಾನ ಇರುವವರು ಸ್ವಯಂಪ್ರೇರಣೆಯಿಂದ ಸಂಘದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ’ ಎಂದು ಹೇಳಿದರು.
ಮುಖಂಡರಾದ ಎ. ಮುರಳಿ, ವಿ.ವಿಶ್ವನಾಥ್, ಯೋಗೇಶ್, ಗೋವಿಂದಪ್ಪ, ಪರಮೇಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.