ಚಳ್ಳಕೆರೆ: ಹನ್ನೆರಡನೇ ಶತಮಾನದ ಶಿವಶರಣ ಕಾಯಕ ನಿಷ್ಠೆ ಎಲ್ಲರಿಗೂ ಮಾದರಿಯಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯಪಟ್ಟರು.
ನಗರದ ತಾಲ್ಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಮಡಿವಾಳ ಸಮಾಜದ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶರಣ ಮಡಿವಾಳ ಮಾಚಿದೇವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿನ ಅಸಮಾನತೆ ನಿವಾರಣೆ ಸಲುವಾಗಿ ವಿವಿಧ ವೃತ್ತಿಪರ ಶ್ರಮಜೀವಿಗಳು ಒಟ್ಟುಗೂಡಿ ರೂಪಿಸಿದ್ದ ಚಳವಳಿ ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಸಂಚಲನ ಮೂಡಿಸಿತ್ತು. ಆ ಪರಿಸರದಲ್ಲಿ ಬೆಳೆದ ಪ್ರಮುಖ ವಚನಕಾರ ಮಡಿವಾಳ ಮಾಚಿದೇವರು. ನೈತಿಕ- ವೈಚಾರಿಕ ಚಿಂತನೆಗಳಿರುವ ಮಾಚಿದೇವರ ವಚನಗಳನ್ನು ಸರಿಯಾಗಿ ಅರ್ಥೈಸಿಕೊಳ್ಳುವ ಮೂಲಕ ಉತ್ತಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಹೇಳಿದರು.
ಮಡಿವಾಳ ಸಂಘದ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ನರಹರಿನಗರ ಮಂಜುನಾಥ್ ಮಾತನಾಡಿ, ‘ಮಡಿವಾಳ ಸಮಾಜದ ಮಕ್ಕಳ ಶಿಕ್ಷಣಕ್ಕಾಗಿ 2 ಎಕರೆ ಸರ್ಕಾರಿ ಜಾಗ ಮಂಜೂರು ಮಾಡಬೇಕು. ಸಮುದಾಯ ಭವನ ಮತ್ತು ಹಾಸ್ಟೆಲ್ ಸೌಲಭ್ಯ ಒದಗಿಸಬೇಕು’ ಎಂದು ಶಾಸಕರಲ್ಲಿ ಮನವಿ ಮಾಡಿದರು.
ತಾಲ್ಲೂಕು ಪಂಚಾಯಿತಿ ನೋಡೆಲ್ ಅಧಿಕಾರಿ ಬಿ.ಮಂಜುನಾಥ್, ತಹಶೀಲ್ದಾರ್ ರೇಹಾನ್ ಪಾಷ, ಮಡಿವಾಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ, ತಾಲ್ಲೂಕು ಘಟಕದ ಅಧ್ಯಕ್ಷ ನಾಗಣ್ಣ, ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ಮಂಜುನಾಥ್ ಮಾತನಾಡಿದರು.
ಇಒ ಎಚ್.ಶಶಿಧರ್, ನಗರಸಭೆ ಪೌರಾಯುಕ್ತ ಜಗರೆಡ್ಡಿ, ಸದಸ್ಯ ರಮೇಶಗೌಡ, ಮಡಿವಾಳ ಸಮಾಜದ ಮುಖಂಡ ಕುಶಾಲಪ್ಪ, ಪ್ರಕಾಶ್, ಜೀವನ್, ದೇವರಮರಿಕುಂಟೆ ಮೃತ್ಯುಂಜಯ, ಪಿಡಿಒ ವೇದಮೂರ್ತಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.