ADVERTISEMENT

ಶರಣರ ವಚನ ಪಾಲಿಸಿದರೆ ನಿಜವಾದ ತೃಪ್ತಿ: ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ರಜತ ಮಹೋತ್ಸವ, ಸಮುದಾಯ ಭವನ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 7:02 IST
Last Updated 25 ಅಕ್ಟೋಬರ್ 2025, 7:02 IST
ಚಿಕ್ಕಜಾಜೂರಿನಲ್ಲಿ ಶುಕ್ರವಾರ ನಡೆದ ಬನಶಂಕರಿ ಅಮ್ಮನವರ ದೇವಸ್ಥಾನದ ರಜತ ಮಹೋತ್ಸವ ಹಾಗೂ ಸಮುದಾಯ ಭವನದ ಉದ್ಘಾಟನಾ ಸಮಾರಂಭದಲ್ಲಿ ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು
ಚಿಕ್ಕಜಾಜೂರಿನಲ್ಲಿ ಶುಕ್ರವಾರ ನಡೆದ ಬನಶಂಕರಿ ಅಮ್ಮನವರ ದೇವಸ್ಥಾನದ ರಜತ ಮಹೋತ್ಸವ ಹಾಗೂ ಸಮುದಾಯ ಭವನದ ಉದ್ಘಾಟನಾ ಸಮಾರಂಭದಲ್ಲಿ ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು   

ಚಿಕ್ಕಜಾಜೂರು: ‘12ನೇ ಶತಮಾನದಲ್ಲಿ ರಚಿತವಾದ ಶರಣರ ವಚನಗಳು ನೈಜ ಬದುಕಿನ ಜೀವನದ ಸಾರವಾಗಿದ್ದು, ವಚನಗಳನ್ನು ಪ್ರತಿಯೊಬ್ಬರೂ ಅರ್ಥೈಸಿಕೊಂಡು, ಜೀವನದಲ್ಲಿ ಅನುಸರಿಸಿದರೆ ಜೀವನದ ಪರಮಾರ್ಥ ಹಾಗೂ ತೃಪ್ತಿ ಸಿಗುತ್ತದೆ‘ ಎಂದು ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಗ್ರಾಮದಲ್ಲಿ ಶುಕ್ರವಾರ ನಡೆದ ಬನಶಂಕರಿ ದೇವಿ ದೇವಸ್ಥಾನದ ರಜತ ಮಹೋತ್ಸವ ಹಾಗೂ ನೂತನ ಸಮುದಾಯ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಧರ್ಮ ಎಂದರೆ ಕೇವಲ ಜಾತಿಗೆ ಸೀಮಿತವಾಗಬಾರದು. ನಮ್ಮ ದೇಶದಲ್ಲಿ ವಿಭಿನ್ನವಾದ ಸಂಪ್ರದಾಯ, ಆಚರಣೆಗಳು, ಧರ್ಮಗಳು ಇವೆ. ಆದರೆ, ಇವುಗಳ ಹಿಂದೆ ಗಾಢವಾದ ಸಂಬಂಧಗಳನ್ನು ಒಳಗೊಂಡ ಸಂಸ್ಕೃತಿಯನ್ನು ಹೊಂದಿದೆ. ಜಗತ್ತು ಭಗವಂತನ ಕೊಡುಗೆ. ಇಲ್ಲಿ ನನ್ನದೇನೂ ಇಲ್ಲ. ನಾವು ಕಷ್ಟಪಟ್ಟು ದುಡಿದು ಬದುಕನ್ನು ಕಟ್ಟಿಕೊಳ್ಳಬೇಕು. ಆ ಮೂಲಕ ನಾವು ಇತರರಿಗೆ ಸಹಾಯ ಮತ್ತು ಸಹಕಾರವನ್ನು ನೀಡುವ ಮೂಲಕ ಜೀವನವನ್ನು ಸಾರ್ಥಪಡಿಸಿಕೊಳ್ಳಬೇಕು ಎಂಬ ದೇವರ ದಾಸಿಮಯ್ಯನ ವಚನದ ಮಾತುಗಳು ನಿತ್ಯ ಜೀವನದ ಸತ್ಯವನ್ನು ತೆರೆದಿಡುವ ಗ್ರಂಥದಂತಿವೆ’ ಎಂದರು.

ADVERTISEMENT

ತರಳಬಾಳು ಶ್ರೀಗಳು ಶ್ರೇಷ್ಠ ಸಂತ: ‘ಸಾಮಾಜಿಕ ಪ್ರಗತಿಗೆ ಜನಪರವಾದ ಮತ್ತು ರೈತ ಪರವಾದ ಚಿಂತನೆಗಳನ್ನು ನಡೆಸಿ ಅವುಗಳನ್ನು ಆಚರಣೆಗೆ ತರುವಲ್ಲಿ ತರಳಬಾಳು ಶ್ರೀಗಳ ಹೋರಾಟ ಮತ್ತು ಚಿಂತನೆಗಳು ಅವರನ್ನು ಶ್ರೇಷ್ಠ ಸಂತರನ್ನಾಗಿಸಿದೆ’ ಎಂದು ಹಂಪಿ ಹೇಮಕೂಟ ಗಾಯತ್ರಿ ಪೀಠದ ದಯಾನಂದಪುರಿ ಸ್ವಾಮೀಜಿ ತಿಳಿಸಿದರು.

‘ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ಮತ್ತು ವಚನ ಸಾಹಿತ್ಯಗಳನ್ನು ವಿಶ್ವಕ್ಕೆ ಪಸರಿಸುವ ಕಾಯಕದಲ್ಲಿ ತೊಡಗಿಸಿಕೊಂಡ ಅವರ ಕಾರ್ಯ ಶ್ಲಾಘನೀಯ. ಆಧುನಿಕ ಭಗೀರಥರಂತೆ ರೈತರ ಜೀವನವನ್ನು ಹಸನು ಮಾಡಲು ಕೆರೆಗಳಿಗೆ ನೀರು ತುಂಬಿಸುವ ಕಾರ್ಯದಲ್ಲಿ ಹೋರಾಟ ಮಾಡುತ್ತಿರುವುದು ನಿಜಕ್ಕೂ ಜನಮೆಚ್ಚುವುದರ ಜತೆ, ಭಗವಂತನೂ ಮೆಚ್ಚುವ ಕಾಯಕವಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

‘ನೇಕಾರ ಸಮಾಜ ದೇಶದ ಪ್ರಮುಖ ಸಮಾಜವಾಗಿದೆ. ತರಳಬಾಳು ಶ್ರೀಗಳ ಆಶೀರ್ವಾದ ಹಾಗೂ ಆಶಯದಂತೆ 2 ಅಥವಾ 3 ತಿಂಗಳಿನಲ್ಲಿ ತಾಲ್ಲೂಕಿನ 37 ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ನೀರು ಹರಿಸಲಾಗುವುದು. ಸಮುದಾಯ ಭವನದ ನಿರ್ಮಾಣಕ್ಕೆ ನಾನು ವೈಯಕ್ತಿಕವಾಗಿ ₹ 20 ಲಕ್ಷ ನೀಡುವುದಾಗಿ‘ ಶಾಸಕ ಎಂ. ಚಂದ್ರಪ್ಪ ಘೋಷಿಸಿದರು.

ಮೊದಲ ಕಂತಿನಲ್ಲಿ ₹ 10 ಲಕ್ಷ ಮೌಲ್ಯದ ಚೆಕ್‌ನ್ನು ದೇವಸ್ಥಾನ ಸಮಿತಿಯ ಅಧ್ಯಕ್ಷರಿಗೆ ಹಸ್ತಾಂತರಿಸಿದರು.

ಸಂಸದ ಗೋವಿಂದ ಕಾರಜೋಳ, ತುರುವೇಕೆರೆ ಮಾಜಿ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ, ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌. ನವೀನ್‌, ಜಿಲ್ಲಾ ದೇವಾಂಗ ಸಮಾಜದ ಅಧ್ಯಕ್ಷ ಗೋ. ತಿಪ್ಪೇಶ್‌, ತಾ.ಪಂ. ಮಾಜಿ ಸದಸ್ಯ ಮುಖಂಡ ಪಿ.ಎಸ್‌. ಮೂರ್ತಿ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸುಮಿತ್ರಕ್ಕ ಮಾತನಾಡಿದರು.‌

ಗ್ರಾಮದ ದೇವಾಂಗ ಸಮಾಜದ ಅಧ್ಯಕ್ಷ ಎ.ಆರ್‌. ಸುರೇಶ್‌ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಜಲಿ ಮೋಹನ್‌, ಡಿ.ಸಿ. ಮೋಹನ್‌, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಆರ್‌. ಶಿವಕುಮಾರ್‌, ಜಿಲ್ಲಾ ನೇಕಾರ ಸಂಘದ ಅಧ್ಯಕ್ಷ ಎಂ. ಗೋವಿಂದಪ್ಪ, ಗ್ರಾಮದ ಮುಖಂಡರು, ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

ಸಂಪತ್ತನ್ನು ಧರ್ಮದ ತಳಹದಿಯಲ್ಲಿ ಗಳಿಸಬೇಕು. ಆದರೆ ಧರ್ಮ ಎಂದರೇನು ಎಂಬ ಪರಿಕಲ್ಪನೆ ಕಡಿಮೆಯಾಗುತ್ತಿರುವುದು ಸರಿಯಲ್ಲ.
–ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ತರಳಬಾಳು ಬೃಹನ್ಮಠ  
ಶಿವಶರಣರ ಅನುಭಾವದ ವಚನಗಳನ್ನು ಕೇವಲ ಓದಿದರಷ್ಟೇ ಸಾಲದು ಅವುಗಳನ್ನು ಜೀವನದಲ್ಲಿ ಅನುಸರಿಕೊಳ್ಳಬೇಕು. 
–ದಯಾನಂದಪುರಿ ಸ್ವಾಮೀಜಿ, ಹಂಪಿ ಹೇಮಕೂಟ ಗಾಯತ್ರಿ ಪೀಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.