ADVERTISEMENT

ಕಾಂಗ್ರೆಸ್ ನಾಶವಾಗಲು ಸಿದ್ದರಾಮಯ್ಯ ಸಾಕು: ಛಲವಾದಿ ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 11:23 IST
Last Updated 25 ಜುಲೈ 2021, 11:23 IST
ಛಲವಾದಿ ನಾರಾಯಣಸ್ವಾಮಿ 
ಛಲವಾದಿ ನಾರಾಯಣಸ್ವಾಮಿ    

ಚಿತ್ರದುರ್ಗ: ‘ರಾಜ್ಯದಲ್ಲಿ ಕಾಂಗ್ರೆಸ್ ಅವನತಿಯತ್ತ ಸಾಗಿ ನಾಶವಾಗಲು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸಾಕು’ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದರು.

‘ದಲಿತರು ಮುಖ್ಯಮಂತ್ರಿ ಆಗುವ ಅವಕಾಶ ಕಿತ್ತುಕೊಂಡಿದ್ದೇ ಸಿದ್ದರಾಮಯ್ಯ. ಅದಕ್ಕಾಗಿಯೇ ಈ ಹಿಂದಿನ ಚುನಾವಣೆಯಲ್ಲಿ ಜಿ. ಪರಮೇಶ್ವರ್‌ ಅವರ ಸೋಲಿಗೆ ಕಾರಣರಾದರು. ಇವರಿಂದ ಸಮುದಾಯ ಉದ್ಧಾರ ಆಗಿದೆಯೇ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಬಾಯಿ ಮಾತಿಗೆ ದಲಿತ ಪರ ಎನ್ನುವ ಕಾಂಗ್ರೆಸ್ ನಾಯಕರು ರಾಜ್ಯದಲ್ಲಿ ದಲಿತರನ್ನು ಸಮಾಧಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲೂ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಅದರ ತನಿಖೆ ನಡೆದರೆ, ಅನೇಕರು ಸಿಕ್ಕಿಬೀಳುತ್ತಿದ್ದರು. ಅದಕ್ಕಾಗಿಯೇ ಲೋಕಾಯುಕ್ತಕ್ಕೆ ಇದ್ದಂಥ ಶಕ್ತಿ ಕಸಿದುಕೊಂಡು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಜಾರಿಗೆ ತಂದಿದ್ದು’ ಎಂದು ಆರೋಪಿಸಿದರು.

ADVERTISEMENT

‘ಬಹುಮತದಿಂದ 78 ಸ್ಥಾನಕ್ಕೆ ಇಳಿಯಲು ಸಿದ್ದರಾಮಯ್ಯ ಅವರೇ ಕಾರಣರು. ಇನ್ನೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧವೂ ರಾಜ್ಯದಲ್ಲಿ ಜನವಿರೋಧಿ ಅಲೆ ಇದೆ. ಕಾಂಗ್ರೆಸ್‌ನ ದುರಾಡಳಿತ ನೋಡಿರುವ ರಾಜ್ಯದ ಜನ ಮುಂದಿನ ಬಾರಿಯೂ ಬಿಜೆಪಿಯನ್ನೇ ಅಧಿಕಾರಕ್ಕೆ ತರಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಪ್ರಧಾನಿ ಮೋದಿ ಈಚೆಗೆ ಸಚಿವ ಸಂಪುಟ ಪುನಃರಚಿಸುವ ಮೂಲಕ ಮೊಟ್ಟ ಮೊದಲ ಬಾರಿಗೆ ದಲಿತ ಸಮುದಾಯದ 20 ನಾಯಕರನ್ನು ಕೇಂದ್ರ ಸಚಿವರನ್ನಾಗಿ ಮಾಡಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ದೇಶದ ವಿವಿಧ ರಾಜ್ಯಗಳ ಎಂಟು ರಾಜ್ಯಪಾಲರ ಪೈಕಿ ನಾಲ್ವರು ದಲಿತ ಸಮುದಾಯದವರಿದ್ದಾರೆ. ಬಿಜೆಪಿ ದಲಿತ ಪರ ಎಂಬುದಕ್ಕೆ ಇದಕ್ಕಿಂತ ನಿದರ್ಶನ ಬೇಕಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.