ಚಿತ್ರದುರ್ಗ: ಆಂಧ್ರಪ್ರದೇಶದ ಗಂಟಯ್ಯನದೊಡ್ಡಿ ಗ್ರಾಮದ ವ್ಯಕ್ತಿಯೊಬ್ಬರಿಗೆ ಕೋವಿಡ್-19 ದೃಢಪಟ್ಟಿದ್ದು, ಜಿಲ್ಲೆಯ ಗಡಿ ಭಾಗದ ಗ್ರಾಮಗಳಿಗೆ ಯಾವುದೇ ವ್ಯಕ್ತಿಗಳು ಭೇಟಿ ನೀಡಬಾರದು ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಸೂಚನೆ ನೀಡಿದ್ದಾರೆ.
ಗಂಟಯ್ಯನದೊಡ್ಡಿ ಗ್ರಾಮವು ಪರಶುರಾಂಪುರ ಹೋಬಳಿ ವ್ಯಾಪ್ತಿಯ ಜಾಜೂರು ಗ್ರಾಮದಿಂದ 4 ಕಿ.ಮೀ. ಹಾಗೂ ಮಜುರೆ ದೊಡ್ಡೋಬಯ್ಯನಹಟ್ಟಿ ಗ್ರಾಮದಿಂದ ಕೇವಲ 1 ಕಿ.ಮೀ. ದೂರದಲ್ಲಿದೆ. ಹೀಗಾಗಿ, ಎಚ್ಚರಿಕೆಯಿಂದ ಇರುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಶೆಟ್ಟೂರು, ಮಣಿರೇವು, ಅನಂತಪುರ, ಅಯ್ಯಗಾರಪಲ್ಲಿ, ಕಮ್ಮತನಹಳ್ಳಿ, ಬಚ್ಚುಪಲ್ಲಿ, ಕೈರೇವು ಗ್ರಾಮ ಹಾಗೂ ಮಾಕೋಡಿ ತಾಂಡಾ ಕರ್ನಾಟಕದ ಗಡಿಯಲ್ಲಿವೆ. ಎರಡೂ ರಾಜ್ಯದಲ್ಲಿ ಕರಳುಬಳ್ಳಿ ಸಂಬಂಧಗಳಿವೆ. ಜಿಲ್ಲೆಯ ಜನರು ಆಂಧ್ರಪ್ರದೇಶದ ಹಳ್ಳಿಗಳಿಗೆ ಭೇಟಿ ನೀಡದಂತೆ ನಿರ್ಬಂಧಿಸಲಾಗಿದೆ. ಆಂಧ್ರಪ್ರದೇಶದ ಜನರು ಕರ್ನಾಟಕ ಗಡಿ ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲಾಡಳಿತದ ಸೂಚನೆಯನ್ನು ಜನರು ತಪ್ಪದೇ ಪಾಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.