ADVERTISEMENT

ತೇರುಮಲ್ಲೇಶ್ವರ ಸ್ವಾಮಿ ದೇವಸ್ಥಾನ: ಆರಾಧ್ಯ ದೈವಕ್ಕೆ ಕರ್ಪೂರದಾರತಿ

ದಕ್ಷಿಣ ಭಾರತದಲ್ಲೇ ವಿಶಿಷ್ಟ ಆಚರಣೆ..ಫೆ. 5ರಂದುರಾತ್ರಿ 8ಕ್ಕೆ

ಸುವರ್ಣಾ ಬಸವರಾಜ್
Published 3 ಫೆಬ್ರುವರಿ 2026, 5:53 IST
Last Updated 3 ಫೆಬ್ರುವರಿ 2026, 5:53 IST
<div class="paragraphs"><p>ಹಿರಿಯೂರಿನ ತೇರುಮಲ್ಲೇಶ್ವರಸ್ವಾಮಿ ದೇವಸ್ಥಾನದ ಗರ್ಭಗುಡಿಯ ಮುಂಭಾಗದಲ್ಲಿರುವ 56 ಅಡಿ ಎತ್ತರದ ದೀಪಸ್ತಂಭದ ಮೇಲೆ ಕರ್ಪೂರ ಹಚ್ಚಿರುವುದು.</p></div>

ಹಿರಿಯೂರಿನ ತೇರುಮಲ್ಲೇಶ್ವರಸ್ವಾಮಿ ದೇವಸ್ಥಾನದ ಗರ್ಭಗುಡಿಯ ಮುಂಭಾಗದಲ್ಲಿರುವ 56 ಅಡಿ ಎತ್ತರದ ದೀಪಸ್ತಂಭದ ಮೇಲೆ ಕರ್ಪೂರ ಹಚ್ಚಿರುವುದು.

   

ಚಿತ್ರದುರ್ಗ: ನಗರದಲ್ಲಿರುವ ತೇರುಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವದ ಪ್ರಯುಕ್ತ ಫೆಬ್ರುವರಿ 5ರಂದು ರಾತ್ರಿ 8 ಗಂಟೆಗೆ ದಕ್ಷಿಣ ಭಾರತದಲ್ಲೇ ವಿಶಿಷ್ಟವಾಗಿ ಆಚರಿಸುವ ಕರ್ಪೂರದಾರತಿ ಪೂಜಾ ಕಾರ್ಯಕ್ರಮ ನಡೆಯಲಿದೆ.

ಮೈಜುಮ್ಮೆನ್ನಿಸುವ ದೃಶ್ಯ: ೇರುಮಲ್ಲೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಮುಗಿದ ಎರಡು ದಿನಗಳ ನಂತರ ನಡೆಯುವ ಕರ್ಪೂರದಾರತಿ ಕಾರ್ಯಕ್ರಮ ಮಹಿಳೆಯರಿಗೆ ವಿಶೇಷ ಹಬ್ಬವಾಗಿದೆ.

ADVERTISEMENT

ದೇಗುಲದ ಒಳ ಆವರಣದಲ್ಲಿ ಗರ್ಭಗುಡಿಯ ಮುಂಭಾಗ 48 ಅಡಿಯ ಕಲ್ಲುಕಂಬವಿದ್ದು, ಕಂಬದ ಮೇಲೆ 8 ಅಡಿ ಎತ್ತರದ ಬಸವ ಮಂಟಪ ಇದೆ. ಮಂಟಪದ ಒಳಗೆ ನಂದಿಯ ಚಿಕ್ಕದಾದ ವಿಗ್ರಹವಿದೆ. ಇದಕ್ಕೆ 6 ಅಡಿ ಉದ್ದವಿರುವ 8 ಕಬ್ಬಿಣದ ಸೌಟು (ಉದ್ದನೆಯ ಹಿಡಿ ಇರುವ ದೀಪ)ಗಳನ್ನು ಜೋಡಿಸಲಾಗಿದ್ದು, ಕರ್ಪೂರದ ಆರತಿಯ ದಿನ ಒಟ್ಟಾರೆ 56 ಅಡಿ ಎತ್ತರದ ನುಣುಪಾದ ಕೆತ್ತನೆಯಿಂದ ಕೂಡಿರುವ ದೀಪಸ್ತಂಭದ ಮೇಲೆ ಏರಿ ಬತ್ತಿ– ಎಣ್ಣೆ ಹಾಕಿ ಕರ್ಪೂರ ಬಳಸಿ ದೀಪ ಹಚ್ಚುವ ದೃಶ್ಯ ಭಕ್ತರನ್ನು ತುದಿಗಾಲಿನ ಮೇಲೆ ನಿಲ್ಲುವಂತೆ ಮಾಡುತ್ತದೆ. ಅಲ್ಲದೇ ನೋಡುಗರ ಮೈ ಜುಮ್ ಎನ್ನಿಸುವಂತಿರುತ್ತದೆ.

ಆಂಧ್ರದ ದೀಪಸ್ತಂಭ: 56 ಅಡಿ ಎತ್ತರವಿರುವ ಸ್ತಂಭದ ಕಲ್ಲನ್ನು ಆಂಧ್ರಪ್ರದೇಶದಿಂದ ತರುವಾಗ ತಾಲ್ಲೂಕಿನ ಅಂಬಲಗೆರೆ ಗ್ರಾಮದ ಬಳಿ ಬಿದ್ದು ಎರಡು ಹೋಳಾಯಿತಂತೆ. ಅದರಲ್ಲಿ ಉದ್ದವಿದ್ದ ಹೋಳನ್ನು ಹಿರಿಯೂರಿಗೆ ತಂದು ಮತ್ತೊಂದು ಭಾಗವನ್ನು ಅದೇ ಗ್ರಾಮದ ರಂಗನಾಥ ಸ್ವಾಮಿ ದೇಗುಲದ ಮುಂದೆ ಸ್ಥಾಪಿಸಲಾಯಿತು ಎಂದು ಹಿರಿಯರು ಹೇಳುತ್ತಾರೆ.

ಶೌರ್ಯದ ಪ್ರತೀಕ: ಹಿಂದೆ ನಾಡನ್ನು ಆಳುತ್ತಿದ್ದ ದೊರೆಗಳು ಕರ್ಪೂರದಾರತಿ ಕಾರ್ಯಕ್ರಮವನ್ನು ಪುರುಷರ ಶೌರ್ಯದ ಪ್ರತೀಕವನ್ನಾಗಿ ಪರಿಗಣಿಸಿದ್ದರು. ಧೀರ ಪುರುಷರು 56 ಅಡಿ ಎತ್ತರದ ದೀಪಸ್ತಂಭವನ್ನು ಚಕಚಕನೆ ಏರಿ ಕರ್ಪೂರ ಹಚ್ಚಿ ನೆರೆದಿದ್ದ ಹೆಂಗಳೆಯರ ಮನಗೆಲ್ಲುವುದು ವಾಡಿಕೆ ಆಗಿತ್ತು. ಕಾರ್ತಿಕ ಮಾಸ ಹಾಗೂ ಜಾತ್ರೆಯ ಸಂದರ್ಭದಲ್ಲಿ ಈ ಸೌಟುಗಳಲ್ಲಿ ದೀಪ ಹಚ್ಚುವ ಸಂಪ್ರದಾಯ ಹಿಂದಿನಿಂದಲೂ ನಡೆದು ಬಂದಿದೆ. ದೀಪದ ಬೆಳಕು ರಾತ್ರಿ ವೇಳೆ 3 ಕಿ.ಮೀ. ದೂರದವರೆಗೂ ಕಾಣುತ್ತದೆ. ಸಾವಿರಾರು ಮಹಿಳೆಯರು, ಮಕ್ಕಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ವಿಶೇಷ.

ಹರಾಜು: ಕರ್ಪೂರದಾರತಿಯ ಮೊದಲ ಸೇವೆಯನ್ನು ಯಾರು ಮಾಡಬೇಕೆನ್ನುವುದನ್ನು ಹರಾಜು ಮೂಲಕ ನಿರ್ಧರಿಸಲಾಗುತ್ತದೆ. ಕೆಲವೊಮ್ಮೆ ಮೊದಲ ಪೂಜೆ ₹ 15,000ದಿಂದ ₹ 20,000 ಕ್ಕೂ ಅಧಿಕ ಮೊತ್ತಕ್ಕೆ ಹರಾಜಾಗಿದ್ದೂ ಉಂಟು. ಹರಾಜಿನಲ್ಲಿ ಭಾಗವಹಿಸಲು ಚಿತ್ರದುರ್ಗ, ಚಳ್ಳಕೆರೆ, ದಾವಣಗೆರೆ ಮೊದಲಾದ ನಗರಗಳಿಂದ ಭಕ್ತರು ಬರುವುದೂ ಉಂಟು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.