ಹಿರಿಯೂರು:1986ರಲ್ಲಿ ಹಿರಿಯೂರು ಠಾಣೆಯಲ್ಲಿ ಎಸ್ಐ ಹುದ್ದೆಯಲ್ಲಿದ್ದ ಕೃಷಿ ಸಚಿವ ಬಿ.ಸಿ. ಪಾಟೀಲ ಅವರು 1989ರಲ್ಲಿ ಓಡಿಸುತ್ತಿದ್ದ ಬುಲೆಟ್ ಬೈಕನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದರು.
ಶನಿವಾರ ತಾಲ್ಲೂಕಿನ ಆದಿವಾಲ ಫಾರಂನಲ್ಲಿ ಗಾಣದಿಂದ ಎಣ್ಣೆ ತೆಗೆಯುವ ವಿಧಾನವನ್ನು ವೀಕ್ಷಿಸಲು ಬಂದಿದ್ದಾಗ ತಮ್ಮ ಹಳೆಯ ಬೈಕ್ ನೋಡಿ ಸಂತಸಗೊಂಡರು.
ಪಾಟೀಲರಿಂದ ₹ 17,100ಕ್ಕೆ ಆದಿವಾಲ ಫಾರಂನ ಆರ್.ಎ. ರಮೇಶ್ ಎಂಬುವವರು ಬೈಕ್ ಖರೀದಿಸಿದ್ದರು. ಮೂಲ ಮಾಲೀಕರಿಗೆ ಬೈಕನ್ನು ತೋರಿಸಬೇಕೆಂದು ರಮೇಶ್ ಹಲವು ಬಾರಿ ಪ್ರಯತ್ನ ನಡೆಸಿದ್ದರು. ಬೈಕ್ ನೋಡಿದ ಬಳಿಕ ಕೃಷಿ ಸಚಿವರು ಮೂರು ದಶಕಗಳ ಹಿಂದಿನ ನೆನಪಿಗೆ ಜಾರಿದರು.
‘ಹಿರಿಯೂರಿನಲ್ಲಿ ಎಸ್ಐ, ಸಿಪಿಐ ಆಗಿದ್ದಾಗ ತೇರುಮಲ್ಲೇಶ್ವರಸ್ವಾಮಿ ನೂತನ ರಥ ನಿರ್ಮಾಣಕ್ಕೆಂದು ಟಿಪ್ಪುಸುಲ್ತಾನ್ ಮತ್ತು ಕುರುಕ್ಷೇತ್ರ ನಾಟಕಗಳನ್ನು ಆಡಿದ್ದೆವು. ನಾಟಕದಿಂದ ಸಿನಿಮಾ ಕ್ಷೇತ್ರದ ಪರಿಚಯವಾಯಿತು. ಸಿನಿಮಾದಿಂದ ರಾಜಕೀಯದತ್ತ ಹೊರಳಿದೆ. ದೇವರ ಆಶೀರ್ವಾದ ಇತ್ತು. ಸಚಿವನೂ ಆಗಿದ್ದೇನೆ. ನನ್ನಿಂದ ಲಾಠಿ ಏಟು ತಿಂದವರು,
ಏಟು ತಿಂದು ಬದಲಾದವರು ನನ್ನನ್ನು ಮರೆತಿಲ್ಲ. ನನ್ನಿಂದ ಬೈಕ್ಖರೀದಿಸಿದ ರಮೇಶ್ 32 ವರ್ಷ ಅದನ್ನು ನಿರ್ವಹಣೆ ಮಾಡಿರುವುದು ಅಚ್ಚರಿ ತಂದಿದೆ. ಆತನ ಬಗ್ಗೆ ಹೆಮ್ಮೆ ಮೂಡಿದೆ’ ಎಂದು ಬಿ.ಸಿ. ಪಾಟೀಲ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.