ADVERTISEMENT

ಹಿರಿಯೂರು: ಆಧುನಿಕ ತಂತ್ರಜ್ಞಾನ ಬಳಸಿ ಮೂರಂತಸ್ತಿನ ಕಟ್ಟಡ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 4:02 IST
Last Updated 25 ಜನವರಿ 2022, 4:02 IST
ಹಿರಿಯೂರು ತಾಲ್ಲೂಕಿನ ಹುಚ್ಚವ್ವನಹಳ್ಳಿ ಸಮೀಪ ಇರುವ ಅಕ್ಷಯ ಫುಡ್ ಪಾರ್ಕ್‌ನಲ್ಲಿ ನಿರ್ಮಿಸಿರುವ ವಾಡಿಯಾ ಆಗ್ರೋ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ಕಟ್ಟಡ.
ಹಿರಿಯೂರು ತಾಲ್ಲೂಕಿನ ಹುಚ್ಚವ್ವನಹಳ್ಳಿ ಸಮೀಪ ಇರುವ ಅಕ್ಷಯ ಫುಡ್ ಪಾರ್ಕ್‌ನಲ್ಲಿ ನಿರ್ಮಿಸಿರುವ ವಾಡಿಯಾ ಆಗ್ರೋ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ಕಟ್ಟಡ.   

ಹಿರಿಯೂರು: 18 ಚದರ ಅಡಿ ವಿಸ್ತೀರ್ಣದ ಮೂರಂತಸ್ತಿನ ಕಟ್ಟಡವೊಂದನ್ನು ಆಧುನಿಕ ತಂತ್ರಜ್ಞಾನ ಬಳಸಿ ಸ್ಥಳಾಂತರಿಸುವ ಕಾರ್ಯ ಸೋಮವಾರ ತಾಲ್ಲೂಕಿನ ಹುಚ್ಚವ್ವನಹಳ್ಳಿ ಸಮೀಪ ಇರುವ ಅಕ್ಷಯ ಫುಡ್‌ಪಾರ್ಕ್‌ನಲ್ಲಿ ಆರಂಭಗೊಂಡಿದೆ.

ಫುಡ್ ಪಾರ್ಕ್‌ ಪ್ಲಾಟ್ ನಂ. 89ರಲ್ಲಿ ಸ್ಥಾಪಿಸಿರುವ ‘ವಾಡಿಯಾ ಆಗ್ರೋ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯವರು ಮೆಕ್ಕೆಜೋಳ ಸಂಸ್ಕರಣಾ ಘಟಕ ಸ್ಥಾಪಿಸಿದ್ದು, ಮೆಕ್ಕೆಜೋಳದ ಉತ್ಪನ್ನಗಳನ್ನು ದೇಸಿಯವಾಗಿ ಅಷ್ಟೇ ಅಲ್ಲದೆ, ವಿದೇಶಗಳಿಗೆ ರಫ್ತು ಮಾಡುತ್ತಿದೆ. ಈ ಕಟ್ಟಡವನ್ನು ಇಂದಿನ ಅಗತ್ಯಗಳಿಗೆ ತಕ್ಕಂತೆ ಬದಲಾಯಿಸುವ ಉದ್ದೇಶದಿಂದ ಸುಮಾರು 100 ಅಡಿಗಳಷ್ಟು ಕಟ್ಟಡವನ್ನು ಹಿಂದಕ್ಕೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ.

‘ವಾಡಿಯಾ ಆಗ್ರೋ ಸಂಸ್ಥೆ ವ್ಯವಸ್ಥಾಪಕ ವಸಂತಪಾಟೀಲ್ ಅವರು, ಬೆಂಗಳೂರಿನ ಮೋಹನ್ ರಾಜ್ ಒಡೆತನದ ‘ಪರ್ಮನೆಂಟ್ ಬಿಲ್ಡಿಂಗ್ ಲಿಫ್ಟಿಂಗ್ ಸರ್ವಿಸ್’ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡು, ಕಟ್ಟಡವನ್ನು ಅಡ್ವಾನ್ಸ್ ಟೆಕ್ನಾಲಜಿ (ಹೈಡ್ರಾಲಿಕ್ ಜಾಕ್) ಬಳಸುವ ಮೂಲಕ ಸ್ಥಳಾಂತರಿಸುವ ಕಾರ್ಯ ಚಾಲನೆಯಲ್ಲಿದೆ. ಈ ಭಾಗದಲ್ಲಿ ಇಂತಹ ಸ್ಥಳಾಂತರ ಇದೇ ಮೊದಲು ಎನ್ನಲಾಗುತ್ತಿದೆ. ಆರೇಳು ದಿನದಲ್ಲಿ ಸ್ಥಳಾಂತರ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ’ ಎಂದು ಅಕ್ಷಯ ಫುಡ್ ವ್ಯವಸ್ಥಾಪಕ ಎಲ್.ಎನ್. ಈಶ್ವರಪ್ಪ ತಿಳಿಸಿದರು.

ADVERTISEMENT

ಕಟ್ಟಡ ಸ್ಥಳಾಂತರ ಕಾರ್ಯಾಚರಣೆಯನ್ನು ನೂರಾರು ಜನ ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.