ADVERTISEMENT

ಹೊಸದುರ್ಗ: ಪ್ರಿಯಕರನಿಂದ ವಿದ್ಯಾರ್ಥಿನಿಗೆ ಜೀವ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2022, 2:49 IST
Last Updated 10 ಮಾರ್ಚ್ 2022, 2:49 IST

ಹೊಸದುರ್ಗ: ದ್ವಿತೀಯ ಪಿಯು ವಿದ್ಯಾರ್ಥಿನಿಗೆ ಆಕೆಯ ಪ್ರಿಯಕರನು ಜೀವಬೆದರಿಕೆ ಹಾಕಿರುವ ಬಗ್ಗೆ ಹೊಸದುರ್ಗ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲ್ಲೂಕಿನ ದೊಡ್ಡಘಟ್ಟ ಗ್ರಾಮದ ವಿಶ್ವನಾಥ್‌ ಎಂಬ ಯುವಕ ಅದೇ ಗ್ರಾಮದ ವಿದ್ಯಾರ್ಥಿನಿಯನ್ನು ಪರಿಚಯ ಮಾಡಿಕೊಂಡು ಪ್ರೀತಿಸತೊಡಗಿದ್ದ. ಮದುವೆಯಾಗುವುದಾಗಿ ನಂಬಿಸಿ, ಹಲವು ಬಾರಿ ಹುಟ್ಟುಹಬ್ಬದ ಉಡುಗೊರೆಯಾಗಿ ಚೈನ್‌ ಸೇರಿ ಹಲವು ವಸ್ತುಗಳನ್ನು ಗ್ರಾಮದ ವ್ಯಕ್ತಿಯೊಬ್ಬರ ಮೂಲಕ ತಲುಪಿಸಿದ್ದ. ಫೆಬ್ರುವರಿ 27ರಂದು ರಾತ್ರಿ ವಿದ್ಯಾರ್ಥಿನಿಯು ಹಾಲುರಾಮೇಶ್ವರ ಶಿವರಾತ್ರಿ ಉತ್ಸವಕ್ಕೆ ಹೋಗಿದ್ದಳು. ಆಗ ಅಲ್ಲಿಗೆ ಬಂದ ವಿಶ್ವನಾಥ್‌, ‘ನನಗೆ ಹೇಳದೇ ಹೇಗೆ ಇಲ್ಲಿಗೆ ಬಂದಿರುವೆ’ ಎಂದು ಪ್ರಶ್ನಿಸಿ ಹೊಡೆದಿದ್ದಾನೆ. ಈ ವಿಚಾರ ತಿಳಿದ ವಿದ್ಯಾರ್ಥಿನಿಯ ತಂದೆ–ತಾಯಿ ಯುವಕನ ಮನೆಗೆ ಹೋಗಿ ಮದುವೆ ಮಾಡಿಕೊಳ್ಳುವಂತೆ ಕೋರಿದ್ದಾರೆ. ಆದರೆ, ಇದಕ್ಕೆ ಒಪ್ಪದ ಆತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಮದುವೆ ಮಾಡಿಕೊಳ್ಳುವಂತೆ ಮತ್ತೊಮ್ಮೆ ಒತ್ತಾಯಿಸಿದರೆ ಜೀವಂತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾನೆ.

ತನಗೆ ರಕ್ಷಣೆ ನೀಡಬೇಕು ಎಂದು ವಿದ್ಯಾರ್ಥಿನಿಯು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾಳೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.