
ಹಿರಿಯೂರು: ನಗರದ ನೆಹರೂ ಮೈದಾನದಲ್ಲಿ ಜ. 30ರಿಂದ ಫೆ. 1ರವರೆಗೆ ಮೂರು ದಿನಗಳ ಕಾಲ ರಾಜ್ಯಮಟ್ಟದ ಪುರುಷರ ಹೊನಲು ಬೆಳಕಿನ ಆಹ್ವಾನಿತ ಕಬಡ್ಡಿ ಟೂರ್ನಿ ಆಯೋಜಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ನೇತೃತ್ವದಲ್ಲಿ ನಗರದ ನ್ಯೂ ಡೈಮಂಡ್ ಸ್ಫೋರ್ಟ್ಸ್ ಕ್ಲಬ್ ಸಂಸ್ಥೆಯ 40ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆಯಲಿರುವ ಪಂದ್ಯಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ವಾರದಿಂದ ಗ್ಯಾಲರಿ ನಿರ್ಮಾಣ, ಬೆಳಕಿನ ವ್ಯವಸ್ಥೆ, ಅಂಕಣ ಸಿದ್ಧಪಡಿಸುವಿಕೆ ಒಳಗೊಂಡಂತೆ ರಾಜ್ಯದ ವಿವಿಧ ಭಾಗಗಳಿಂದ ಬರುವ 20 ತಂಡಗಳಿಗೆ ಊಟ, ವಸತಿ ವ್ಯವಸ್ಥೆ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ.
ಲೀಗ್ ಕಮ್ ನಾಕ್ ಔಟ್ ಮಾದರಿಯಲ್ಲಿ ಮೂರು ದಿನಗಳ ಕಾಲ ಟೂರ್ನಿ ನಡೆಯಲಿದ್ದು, ದಾವಣಗೆರೆಯ ದುರ್ಗಾಂಬಿಕ ಹಾಗೂ ಡಿವೈಎಸ್, ತುಮಕೂರು ಜಿಲ್ಲಾ ತಂಡ, ಮೂಡಬಿದರೆಯ ಆಳ್ವಾಸ್, ಭದ್ರಾವತಿ ಕಬಡ್ಡಿ ತಂಡ, ಚಿತ್ರದುರ್ಗ ಜಿಲ್ಲಾ ಕಬಡ್ಡಿ ತಂಡ, ರಾಯಭಾರಿ ಕಬಡ್ಡಿ ತಂಡ, ಅತಿಥೇಯ ನ್ಯೂ ಡೈಮಂಡ್ ಸ್ಫೋರ್ಟ್ಸ್ ಕ್ಲಬ್, ಶಿವಮೊಗ್ಗದ ಜಿಲ್ಲಾ ಕಬಡ್ಡಿ ತಂಡ, ಬಳ್ಳಾರಿ ಜಿಲ್ಲಾ ತಂಡ, ಗದಗ ಜಿಲ್ಲಾ ಕಬಡ್ಡಿ ತಂಡ, ಧಾರವಾಡ ಜಿಲ್ಲಾ ತಂಡ, ಬೆಳಗಾವಿ ಜಿಲ್ಲಾ ತಂಡ, ಬೆಂಗಳೂರು ಜಿಲ್ಲಾ ತಂಡ ಹಾಗೂ ಎಚ್ಎಂಟಿ ತಂಡ, ಉತ್ತರ ಕರ್ನಾಟಕ ಜಿಲ್ಲಾ ಕಬಡ್ಡಿ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದು, ಕಬಡ್ಡಿ ಪ್ರಿಯರಿಗೆ ಮೂರು ದಿನ ಕ್ರೀಡೆಯ ರಸದೌತಣ ದೊರೆಯಲಿದೆ ನ್ಯೂ ಡೈಮಂಡ್ ಸ್ಫೋರ್ಟ್ಸ್ ಕ್ಲಬ್ನ ಅಧ್ಯಕ್ಷ ಎಚ್.ಬಿ. ಯೋಗಾನಂದ ಹೇಳಿದ್ದಾರೆ.
ದಶಕದ ನಂತರ ಮೂರು ದಿನ ನಡೆಯುವ ರಾಜ್ಯಮಟ್ಟದ ಟೂರ್ನಿಯನ್ನು ನಾಗರಿಕರು, ವರ್ತಕರು, ಕ್ರೀಡಾಭಿಮಾನಿಗಳು, ಕ್ರೀಡಾ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದು ಕ್ಲಬ್ ಕಾರ್ಯದರ್ಶಿ ಟಿ. ಬಾಲಾಜಿ, ಸಂಘಟನಾ ಕಾರ್ಯದರ್ಶಿ ರವಿ, ಖಜಾಂಚಿ ಅಣ್ಣೇಶ್ ಕುಮಾರ್, ಸಂಚಾಲಕರಾದ ಮೊಹಮ್ಮದ್ ಭಾಷಾ, ಎಂ.ಪಿ. ತಿಪ್ಪೇಸ್ವಾಮಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.