ಹೊಸದುರ್ಗ: ಸರ್ಕಾರಿ ನೌಕರರನ್ನಾಗಿ ಪರಿಗಣಿಸುವುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೆಎಸ್ಆರ್ಟಿಸಿ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಶನಿವಾರವೂ ಮುಂದುವರಿಯಿತು.
ಮುಷ್ಕರದಿಂದಾಗಿ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣಕ್ಕೆ ಒಂದೂ ಬಸ್ ಬರದಿದ್ದರಿಂದ ದಿನವಿಡೀ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಮುಷ್ಕರ ಮುಂದುವರಿದಿರುವುದರ ಬಗ್ಗೆ ಮಾಹಿತಿ ತಿಳಿಯದ ನೂರಾರು ಪ್ರಯಾಣಿಕರು ದೂರದ ಊರುಗಳಿಗೆ ಹೋಗಲು ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಬರುತ್ತಿದ್ದರು. ಬಸ್ ಇಲ್ಲ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ತಮ್ಮ ಲಗೇಜು ಹೊತ್ತುಕೊಂಡು ಖಾಸಗಿ ಬಸ್ ನಿಲ್ದಾಣದತ್ತ ಹೊರಟರು. ಬೆಂಗಳೂರು, ಶಿವಮೊಗ್ಗ, ಧರ್ಮಸ್ಥಳ, ಮಂಗಳೂರು, ಮೈಸೂರು, ದಾವಣಗೆರೆ ಸೇರಿ ಇನ್ನಿತರ ನಗರಗಳಿಗೆ ಹಾಗೂ ಗ್ರಾಮೀಣ ಭಾಗಗಳಿಗೆ ಸಮರ್ಪಕವಾಗಿ ಖಾಸಗಿ ಬಸ್ ಸೌಲಭ್ಯ ಇಲ್ಲದಿದ್ದರಿಂದ ಪ್ರಯಾಣಿಕರ ನೂಕುನುಗ್ಗಲು ಹೆಚ್ಚಾಯಿತು.
ನಿಲ್ದಾಣದಲ್ಲಿ ಕುಳಿತುಕೊಳ್ಳಲು ಸಮರ್ಪಕ ಆಸನದ ವ್ಯವಸ್ಥೆ ಇರದ ಕಾರಣ ನಿಂತುಕೊಂಡು ಕಾದು ಕಾದು ಸುಸ್ತಾದರು. ಬಸ್ ಬರುತ್ತಿದ್ದಂತೆ ನಾ ಮುಂದು, ತಾ ಮುಂದು ಎಂದು ಬಸ್ ಏರಿಯುತ್ತಿರುವುದು ಕಂಡುಬಂತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.