
ಹೊಸದುರ್ಗ: ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧ ಸಣ್ಣಕ್ಕಿ ಬಾಗೂರಿನ ಚನ್ನಕೇಶವ ಸ್ವಾಮಿ ದೇವಾಲಯ, ಗಾಳಿರಂಗಯ್ಯನಹಟ್ಟಿಯ ತಿಮ್ಮಪ್ಪ ಸ್ವಾಮಿ ಸನ್ನಿಧಿ, ಗವಿರಂಗಾಪುರದ ಬೆಟ್ಟದಲ್ಲಿ ನೆಲೆಸಿರುವ ಗವಿರಂಗನಾಥಸ್ವಾಮಿ ಸನ್ನಿಧಿ, ಗೊರವಿನಕಲ್ಲು ಗ್ರಾಮದ ಕಂಬನರಸಿಂಹಸ್ವಾಮಿ, ಚೆನ್ನಸಮುದ್ರದ ಲಕ್ಷ್ಮೀ ರಂಗನಾಥ ಸ್ವಾಮಿ ದೇವಾಲಯ ಸೇರಿದಂತೆ ತಾಲ್ಲೂಕಿನ ವಿವಿಧ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಮಂಗಳವಾರ ವಿಶೇಷ ಪೂಜೆ ನಡೆದವು.
ಬಾಗೂರಿನ ಚೆನ್ನಕೇಶವ ಸ್ವಾಮಿ ದೇವಾಲಯದಲ್ಲಿ ಗಂಗಾಪೂಜೆ, ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ತೋಮಾಲಸೇವೆ, ಮಹಾಭಿಷೇಕ ಅಲಂಕಾರ, ವಿಷ್ಣು ಸಹಸ್ರನಾಮ ಪಾರಾಯಣ, ವೇದ ಪಾರಾಯಣ, ಅರ್ಚನೆ, ಮಹಾಮಂಗಳಾರತಿ ವೈಕುಂಠದ್ವಾರ ದರ್ಶನ ಸೇವೆ ನಡೆದವು.
ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ, ಭಗೀರಥ ಮಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಬೆಲಗೂರಿನ ಮಾರುತಿ ಪೀಠದ ಮಾರುತಿ ಶರ್ಮಾ ಸ್ವಾಮೀಜಿ, ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ದೇವಸ್ಥಾನಕ್ಕೆ ಭೇಟಿ ನೀಡಿ, ವೈಕುಂಠ ದ್ವಾರದ ಮೂಲಕ ಸಾಗಿ ದೇವರ ದರ್ಶನ ಪಡೆದರು.
ಪ್ರಧಾನ ಅರ್ಚಕ ಶ್ರೀನಿವಾಸನ್, ರಾಜಸ್ವ ನಿರೀಕ್ಷಕ ಎಂ. ಎಚ್. ಹರೀಶ್, ಆಡಳಿತಾಧಿಕಾರಿ ಭಾಗ್ಯಾ, ತಾಲ್ಲೂಕು ಪಂಚಾಯಿತಿ ಇಒ ಸುನಿಲ್ ಕುಮಾರ್, ಮುಖಂಡರಾದ ಶಿವು ಮಠ, ಪಿ.ಕೆ. ಪರಪ್ಪ, ಕೇಶವಮೂರ್ತಿ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಬಾಗೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.