ADVERTISEMENT

ಚಿತ್ರದುರ್ಗ| ಇಂದಿನಿಂದ ವಿ.ವಿ ಪ್ಯಾಟ್‌ ಜಾಗೃತಿ ‍: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2023, 5:22 IST
Last Updated 6 ಫೆಬ್ರುವರಿ 2023, 5:22 IST
ದಿವ್ಯಪ್ರಭು ಜಿ.ಆರ್‌.ಜೆ.
ದಿವ್ಯಪ್ರಭು ಜಿ.ಆರ್‌.ಜೆ.   

ಚಿತ್ರದುರ್ಗ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿದ್ಯುನ್ಮಾನ ಮತಯಂತ್ರ ಬಳಕೆ ಹಾಗೂ ವಿ.ವಿ ಪ್ಯಾಟ್‌ ಕಾರ್ಯ ವೈಖರಿ ಕುರಿತು ಅಣಕು ಪ್ರದರ್ಶನ ನಡೆಸುವ ಮೂಲಕ ಫೆ. 6ರಿಂದ ಜಿಲ್ಲೆಯಾದ್ಯಂತ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್‌.ಜೆ. ತಿಳಿಸಿದರು.

‘ಫೆ.6ರಿಂದ ಮಾರ್ಚ್‌ 6ರವರೆಗೆ ಜಿಲ್ಲೆಯ 1,206 ಸ್ಥಳಗಳಲ್ಲಿ ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳಲ್ಲಿ ಮತ ಚಲಾಯಿಸುವ ಬಗೆ ಹಾಗೂ ಮತದಾರರು ತಾವು ಹಾಕಿದ ಮತವನ್ನು ಖಾತ್ರಿ ಪಡಿಸಿಕೊಳ್ಳಲು ವೀಕ್ಷಿಸುವ ವಿವಿ ಪ್ಯಾಟ್ ಯಂತ್ರದ ಕಾರ್ಯ ವೈಖರಿ ಕುರಿತು ಜಾಗೃತಿ ಮೂಡಿಸಲಾಗುವುದು. ಒಂದು ತಿಂಗಳೊಳಗಾಗಿ ಪ್ರತಿ ಸ್ಥಳದಲ್ಲಿಯೂ ಎರಡು ಬಾರಿ ಇಂತಹ ಪ್ರದರ್ಶನ ಏರ್ಪಡಿಸಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ ಒಟ್ಟು 75 ವಾಹನ ವ್ಯವಸ್ಥೆ ಮಾಡಲಾಗಿದ್ದು, 152 ಸೆಕ್ಟರ್‌ ಅಧಿಕಾರಿಗಳು ಹಾಗೂ 7 ಜನ ಹೆಚ್ಚುವರಿ ನೋಡಲ್‌ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ಮೊಳಕಾಲ್ಮುರು ಕ್ಷೇತ್ರದಲ್ಲಿ 207 ಸ್ಥಳಗಳಲ್ಲಿ ಮತದಾನ ಯಂತ್ರದ ಅಣಕು ಪ್ರದರ್ಶನ ಏರ್ಪಡಿಸಲಾಗಿದ್ದು, ಇಲ್ಲಿ 14 ವಾಹನಗಳನ್ನು ನಿಯೋಜಿಸಲಾಗಿದೆ. ಚಳ್ಳಕೆರೆಯಲ್ಲಿ 180 ಸ್ಥಳ,12 ವಾಹನ, ಚಿತ್ರದುರ್ಗದಲ್ಲಿ 175 ಸ್ಥಳ, 10 ವಾಹನ, ಹಿರಿಯೂರಿನಲ್ಲಿ 203 ಸ್ಥಳ ಹಾಗೂ 14 ವಾಹನಗಳ ವ್ಯವಸ್ಥೆ ಮಾಡಲಾಗಿದೆ’ ಎಂದರು.

ADVERTISEMENT

‘ಹೊಸದುರ್ಗ ಕ್ಷೇತ್ರದಲ್ಲಿ 195 ಕಡೆ ಪ್ರದರ್ಶನ ಏರ್ಪಡಿಸಲು 11 ವಾಹನ ಹಾಗೂ ಹೊಳಲ್ಕೆರೆಯಲ್ಲಿ 246 ಸ್ಥಳಗಳಲ್ಲಿ 14 ವಾಹನಗಳನ್ನು ನಿಯೋಜಿಸಲಾಗಿದೆ. ಇದರ ಜತೆಗೆ ಜಿಲ್ಲೆಯಲ್ಲಿ ಪ್ರಮುಖ ಜಾತ್ರೆ, ಸಂತೆಗಳಲ್ಲಿಯೂ ಜಾಗೃತಿ ಮೂಡಿಸಲಾಗುತ್ತದೆ. ಈ ಮೂಲಕ ಜಿಲ್ಲೆಯಲ್ಲಿ ಪಾರದರ್ಶಕ ಚುನಾವಣೆ ನಡೆಸಲು ಜನರ ಸಹಭಾಗಿತ್ವ ದೊರಕಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.