ಚಿತ್ರದುರ್ಗ: ಕೊರೊನಾ ಸೋಂಕು ನಿಯಂತ್ರಿಸಲು ಪ್ರಮುಖ ಅಸ್ತ್ರವಾಗಿರುವ ಮಾಸ್ಕ್ ಧರಿಸುವಂತೆ ಹಾಗೂ ಅಂತರ ಕಾಪಾಡುವಂತೆ ಅರಿವು ಮೂಡಿಸುವ ಜಾಥಾ ಗುರುವಾರ ನಡೆಯಿತು.
‘ಮಾಸ್ಕ್ ದಿನಾಚರಣೆ’ ಅಂಗವಾಗಿ ನಗರಸಭೆ ಆವರಣದಿಂದ ಆರಂಭವಾದ ಜಾಥಾ ಬಿ.ಡಿ.ರಸ್ತೆಯಲ್ಲಿ ಸಾಗಿತು. ಆಶಾ ಕಾರ್ಯಕರ್ತೆಯರು ‘ಮಾಸ್ಕ್ ಧರಿಸಿ ಕೊರೊನಾ ನಿಯಂತ್ರಿಸಿ’ ಎಂಬ ಘೋಷಣೆಯೊಂದಿಗೆ ಗಮನ ಸೆಳೆದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಶಿಕಲಾ ಸುರೇಶಬಾಬು ಜಾಥಾಗೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಜಾಥಾದಲ್ಲಿ ಹೆಜ್ಜೆ ಹಾಕಿದರು.
ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಮಾತನಾಡಿ, ‘ಮಾಸ್ಕ್ ಬಗ್ಗೆ ಅರಿವಿನ ಕೊರತೆ ಇದೆ. ಅನೇಕರು ಒತ್ತಾಯಕ್ಕೆ ಬಟ್ಟೆ ಕಟ್ಟಿಕೊಳ್ಳುತ್ತಾರೆ ಹೊರತು ರಕ್ಷಣೆಯತ್ತ ಗಮನ ಹರಿಸುತ್ತಿಲ್ಲ. ಬೇರೊಬ್ಬರೊಂದಿಗೆ ಮಾತನಾಡುವಾಗ ಮಾಸ್ಕ್ ತೆಗೆಯುವುದು ತಪ್ಪು. ಮಾರುಕಟ್ಟೆಗೆ ಬರುವ ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು. ಅಂತರದ ಬಗ್ಗೆ ಎಚ್ಚರ ಇರಬೇಕು’ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್.ಫಾಲಾಕ್ಷ, ‘ಲಾಕ್ಡೌನ್ ಸಡಿಲಗೊಂಡ ಬಳಿಕ ಜನಸಂಚಾರ ಹೆಚ್ಚಾಗಿದೆ. ಇಂತಹ ಸಮಯದಲ್ಲಿ ಇನ್ನಷ್ಟು ಎಚ್ಚರಿಕೆಯಿಂದ ಇರುವ ಅಗತ್ಯವಿದೆ. ಕೊರೊನಾ ಸೋಂಕು ಪ್ರಕರಣ ದೇಶದಲ್ಲಿ ಏರಿಕೆ ಆಗುತ್ತಿದೆ. ಚಿತ್ರದುರ್ಗ ಸೇರಿ ರಾಜ್ಯದಲ್ಲಿ ಇದು ನಿಯಂತ್ರಣದಲ್ಲಿದೆ. ಸಾವಿನ ಪ್ರಮಾಣ ಕೂಡ ಕಡಿಮೆ ಇದೆ’ ಎಂದು ಹೇಳಿದರು.
ಉಪವಿಭಾಗಾಧಿಕಾರಿ ವಿ.ಪ್ರಸನ್ನ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಸವರಾಜ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.