ADVERTISEMENT

ನಿಸರ್ಗದ ನಿಯಮ ಪಾಲಿಸೋಣ: ಮಹೆಬೂಬ್ ಜಿಲಾನಿ ಖುರೇಷಿ

ವನ್ಯಜೀವಿ ಸಂರಕ್ಷಣೆಗೆ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 6:31 IST
Last Updated 9 ಅಕ್ಟೋಬರ್ 2025, 6:31 IST
ಚಿತ್ರದುರ್ಗದಲ್ಲಿ ಬುಧವಾರ ಸಾಗಿದ ವನ್ಯಜೀವಿ ಸಂರಕ್ಷಣೆ ಜಾಗೃತಿ ಜಾಥಾ
ಚಿತ್ರದುರ್ಗದಲ್ಲಿ ಬುಧವಾರ ಸಾಗಿದ ವನ್ಯಜೀವಿ ಸಂರಕ್ಷಣೆ ಜಾಗೃತಿ ಜಾಥಾ   

ಚಿತ್ರದುರ್ಗ: ‘ಭವಿಷ್ಯದ ದೃಷ್ಟಿಯಿಂದ ಪ್ರತಿಯೊಬ್ಬರೂ ನಿಸರ್ಗದ ನಿಯಮಗಳನ್ನು ಪರಿಪಾಲಿಸಬೇಕು. ಆಗ ಮಾತ್ರ ವನ್ಯ ಸಂಪತ್ತು ಉಳಿಯಲು ಸಾಧ್ಯವಾಗುತ್ತದೆ’ ಎಂದು ಉಪವಿಭಾಗಾಧಿಕಾರಿ ಮಹೆಬೂಬ್ ಜಿಲಾನಿ ಖುರೇಷಿ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಅರಣ್ಯ ಇಲಾಖೆ ಜಿಲ್ಲಾ ವಿಭಾಗದಿಂದ ಆಯೋಜಿಸಿದ್ದ ವನ್ಯಜೀವಿ ಸಂರಕ್ಷಣೆ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದ ಅವರು, ‘ಪರಿಸರ, ಪ್ರಕೃತಿ, ಅರಣ್ಯ ಹಾಗೂ ವನ್ಯಜೀವಿಗಳ ಬಗ್ಗೆ ಕಾಳಜಿ ಹೊಂದಬೇಕು. ಇದು ಕೇವಲ ತೋರ್ಪಡಿಕೆ ಆಗಬಾರದು’ ಎಂದರು.

‘ಮನೆಯಲ್ಲಿ ಹಣ್ಣುಗಳನ್ನು ತಿಂದ ಮೇಲೆ ಬೀಜಗಳನ್ನು ತಿಪ್ಪೆಗೆ ಹಾಕುವ ಬದಲು ಕಾಡಿಗೆ ಹಾಕಿದರೆ ಅದು ವನ್ಯಜೀವಿಗಳಿಗೆ ಆಹಾರವಾಗಲಿದೆ. ಅರಣ್ಯ ಇಲ್ಲದಿದ್ದರೆ ಜಾಗತಿಕ ತಾಪಮಾನ ಹೆಚ್ಚಾಗಿ ವನ್ಯಜೀವಿಗಳು ಮತ್ತು ಪಕ್ಷಿಗಳು ನಾಶವಾಗುತ್ತವೆ. ಸಪ್ತಾಹದಿಂದ ವಿದ್ಯಾರ್ಥಿಗಳಲ್ಲಿ ಅರಣ್ಯ ಮತ್ತು ವನ್ಯಜೀವಿಗಳ ಉಳಿವಿನ ಬಗ್ಗೆ ಜಾಗೃತಿ ಮೂಡಲಿದೆ’ ಎಂದು ತಿಳಿಸಿದರು.

ADVERTISEMENT

‘ನಾವು ಅರಣ್ಯ ಮತ್ತು ವನ್ಯಜೀವಿಗಳ ಜತೆ ಬಾಳುವುದನ್ನು ಕಲಿಯಬೇಕು. ಆಗ ಮಾತ್ರ ಪ್ರಕೃತಿ ಮತ್ತು ಪರಿಸರ ಸಮತೋಲನದಿಂದ ಇರಲು ಸಾಧ್ಯ. ಉತ್ತಮ ಭವಿಷ್ಯಕ್ಕಾಗಿ ವನ್ಯಜೀವಿಗಳ ಸಂರಕ್ಷಣೆಗೆ ನಾವು ಪಣತೊಡಬೇಕು’ ಎಂದು ವಲಯ ಅರಣ್ಯ ಅಧಿಕಾರಿ ವಸಂತ್‌ ಕುಮಾರ್‌ ಹೇಳಿದರು.

‘ಅರಣ್ಯಕ್ಕೆ ಯಾವುದೇ ಹಾನಿ ಉಂಟು ಮಾಡದೇ ಸಸ್ಯ ಹಾಗೂ ಪ್ರಾಣಿ ಸಂಕುಲದ ರಕ್ಷಣೆ ಮೂಲಕ ವನ್ಯಜೀವಿಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರಾಣಿ–ಪಕ್ಷಿಗಳು ಪರೋಕ್ಷವಾಗಿ ಮಾನವನಿಗೆ ಉಪಕಾರ ಮಾಡುತ್ತಾ ಬಂದಿವೆ. ಯಾವುದೇ ಪ್ರಾಣಿ– ಪಕ್ಷಿಗಳು ನಶಿಸದಂತೆ ಸಂರಕ್ಷಿಸಬೇಕು’ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಮಾಲತೇಶ್‌ ಅರಸ್‌ ತಿಳಿಸಿದರು.

ಒನಕೆ ಓಬವ್ವ ವೃತ್ತದಿಂದ ಬಿ.ಡಿ ರಸ್ತೆಯಲ್ಲಿ ಸಾಗಿ ಗಾಂಧಿ ವೃತ್ತದ ಮೂಲಕ ಪ್ರವಾಸಿ ಮಂದಿರದ ಆವರಣದಲ್ಲಿ ಸಮಾಪ್ತಿಗೊಂಡಿತು. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್, ತಹಶೀಲ್ದಾರ್‌ ಗೋವಿಂದ ರಾಜ್‌, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಾ, ಉಪ ವಲಯ ಅರಣ್ಯ ಅಧಿಕಾರಿ ರಾಮದಾಸ್‌ ಚವ್ವಾಣ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.