ADVERTISEMENT

ಮೀಸಲಾತಿಯಿಂದ ವಿಪ್ರ ಸಮುದಾಯ ವಂಚಿತ: ಅಶೋಕ ಹಾರನಹಳ್ಳಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2021, 3:53 IST
Last Updated 7 ನವೆಂಬರ್ 2021, 3:53 IST
ಚಿತ್ರದುರ್ಗದಲ್ಲಿ ಶನಿವಾರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆಯ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಸಂಬಂಧ ನಡೆದ ಸಮಾಲೋಚನಾ ಸಭೆಯಲ್ಲಿ ಅಭ್ಯರ್ಥಿ ಅಶೋಕ ಹಾರನಹಳ್ಳಿ ಮಾತನಾಡಿದರು
ಚಿತ್ರದುರ್ಗದಲ್ಲಿ ಶನಿವಾರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆಯ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಸಂಬಂಧ ನಡೆದ ಸಮಾಲೋಚನಾ ಸಭೆಯಲ್ಲಿ ಅಭ್ಯರ್ಥಿ ಅಶೋಕ ಹಾರನಹಳ್ಳಿ ಮಾತನಾಡಿದರು   

ಚಿತ್ರದುರ್ಗ: ‘ಮೀಸಲಾತಿಯಿಂದ ವಿಪ್ರ ಸಮುದಾಯ ವಂಚಿತವಾಗಿದೆ. ಇದರಿಂದಾಗಿ ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ. ಅದನ್ನು ಕೊಡಿಸುವುದು ನನ್ನ ಪ್ರಮುಖ ಧ್ಯೇಯವಾಗಿದೆ’ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಅಶೋಕ ಹಾರನಹಳ್ಳಿ ಹೇಳಿದರು.

ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಬ್ರಾಹ್ಮಣ ಸಂಘದ ಅಧ್ಯಕ್ಷರು, ಪದಾಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ‘ಮುಂದುವರಿದ ಸಮುದಾಯ ಎಂಬುದು ಬ್ರಾಹ್ಮಣರಿಗೆ ಹೆಸರಿಗೆ ಮತ್ತು ಹಣೆಪಟ್ಟಿಗೆ ಮಾತ್ರ ಸೀಮಿತವಾಗಿದೆ. ಈಗಲೂ ಅನೇಕರು ಪುರೋಹಿತರಾಗಿ, ಅಡುಗೆ ಭಟ್ಟರಾಗಿ ಕೆಲಸ ಮಾಡುತ್ತಿದ್ದಾರೆ. ಸಮುದಾಯದಲ್ಲಿ ಬಹುತೇಕರು ಸಂಕಷ್ಟದಲ್ಲೇ ಇದ್ದಾರೆ’ ಎಂದರು.

‘ರಾಜ್ಯದಾದ್ಯಂತ ಸಮುದಾಯ ಮೊದಲು ಸಂಘಟನೆಯಾಗಬೇಕು. ಸರಿಯಾದ ಮಾರ್ಗದಲ್ಲಿ ಮುನ್ನಡೆಸಬೇಕು. ಅಧಿಕಾರ ಮುಖ್ಯವಾಗಿರದೇ ಸಮುದಾಯಕ್ಕಾಗಿ ಶ್ರಮಿಸಬೇಕು. ಆಗ ಮಾತ್ರ ಸಮುದಾಯ ಹೊಸ ಸ್ವರೂಪ ಪಡೆಯಲು ಸಾಧ್ಯ. ಇಲ್ಲದಿದ್ದರೆ, ಪ್ರಗತಿ ಸಾಧ್ಯವಿಲ್ಲ. ಸಮುದಾಯದವರ ಅಭಿವೃದ್ಧಿ ದೃಷ್ಟಿಯಿಂದ ಪುನಃ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ’ ಎಂದು ತಿಳಿಸಿದರು.

ADVERTISEMENT

‘ರಾಜ್ಯದಲ್ಲಿ 50 ಸಾವಿರ ವಿಪ್ರ ಮತದಾರರಿದ್ದಾರೆ. ಬೆಂಗಳೂರು, ಶಿವಮೊಗ್ಗ, ರಾಯಚೂರಿನಲ್ಲಿ ಅತಿ ಹೆಚ್ಚು ಮತದಾರರಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿಯೂ ನೂರಾರು ಮತದಾರರಿದ್ದಾರೆ. ಚುನಾವಣೆಯೂ ಡಿಸೆಂಬರ್ 12ಕ್ಕೆ ರಾಜ್ಯದಲ್ಲಿ ಹಾಗೂ 19ಕ್ಕೆ ಬೆಂಗಳೂರಿನಲ್ಲಿ ನಡೆಯಲಿದೆ. ನನ್ನನ್ನು ಈ ಬಾರಿಯೂ ಬೆಂಬಲಿಸುವ ಮೂಲಕ ಸಮುದಾಯದ ಸೇವೆ ಮಾಡಲು ಅವಕಾಶ ಕಲ್ಪಿಸಿ’ ಎಂದು ಮತದಾರರಲ್ಲಿ ಮನವಿ ಮಾಡಿದರು.

ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್. ಮಂಜುನಾಥ್, ಸುರೇಶ್, ಹೊನ್ನಪ್ಪ, ಆರ್.ವಿ. ಸುಬ್ರಮಣ್ಯ, ಅನಂತ, ಪುರುಷೋತ್ತಮ, ರಾಜೇಂದ್ರ ಪ್ರಸಾದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.