ಬೆಂಗಳೂರು: ‘ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷದ ಮಹಿಳಾ ನಾಯಕಿಯರ ನಕಲಿ ಖಾತೆ ಸೃಷ್ಟಿಸಿ, ತೇಜೋವಧೆ ಮಾಡುತ್ತಿರುವವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಒತ್ತಾಯಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಶಾಸಕಿ ಸೌಮ್ಯಾರೆಡ್ಡಿ ಮತ್ತು ವಕ್ತಾರೆ ಭವ್ಯಾ ನರಸಿಂಹ ಮೂರ್ತಿ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭವ್ಯಾ ನರಸಿಂಹ ಮೂರ್ತಿಗೆ ಬೆದರಿಕೆ ಕರೆಗಳು ಬರುತ್ತಿವೆ. ತೇಜೋವಧೆ ಮಾಡುವ 50 ಕರೆಗಳು ಬಂದಿವೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ’ ಎಂದರು.
‘ಪಕ್ಷದ ಇನ್ನೊಬ್ಬ ನಾಯಕಿ ಬಿಂದು ಗೌಡ ಅವರನ್ನೂ ತೇಜೋವಧೆ ಮಾಡಲಾಗುತ್ತಿದೆ‘ ಎಂದರು.
‘ತೇಜೋವಧೆ ಮಾಡುವವರ ಹಿಂದೆ ಯುವರಾಜಕಾರಣಿಗಳಿದ್ದಾರೆ ಎನ್ನುವುದು ಗೊತ್ತಾಗಿದೆ. ನಿಮ್ಮಲ್ಲಿ (ಬಿಜೆಪಿಯವರು) ಯಾರೂ ಹೆಣ್ಣು ಮಕ್ಕಳು ರಾಜಕಾರಣದಲ್ಲಿ ಇಲ್ಲವೇ? ಅವರ ಬಗ್ಗೆ ಯಾಕೆ ಮಾತನಾಡಲ್ಲ. ಇದರ ಹಿಂದಿರುವವರನ್ನು ಸರ್ಕಾರ ಪತ್ತೆ ಹಚ್ಚಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭವ್ಯಾ ನರಸಿಂಹ ಮೂರ್ತಿ ಮಾತನಾಡಿ, ‘ಜೂನ್ 9ರಿಂದ ನನಗೆ ನಿರಂತರ ಕರೆಗಳು ಬರುತ್ತಿವೆ. ಕ್ರೈಂ ಬ್ರಾಂಚ್ಗೆ ದೂರು ಕೊಡಲು ಹೊರಟಿದ್ದೆ. ಆಗಲೂ ಕಾಲ್ ಬಂತು. ನೀವೇ ಮಾತನಾಡಿ ಎಂದು ಪೊಲೀಸರಿಗೆ ಫೋನ್ ಕೊಟ್ಟೆ. ಸಿಮ್ಗಳು ಬೇರೆ ರಾಜ್ಯಗಳಲ್ಲಿ ನೋಂದಣಿ ಆಗಿವೆ. ಆದರೆ, ಕನ್ನಡದಲ್ಲಿಯೇ ಮಾತನಾಡುತ್ತಾರೆ. ಹೀಗಾಗಿ, ಇಲ್ಲಿಯವರೇ ಮಾಡುತ್ತಿರುವ ಕೆಲಸವಿದು’ ಎಂದರು.
‘ರಾಜ್ಯದಲ್ಲಿ ಶೇ 4ರಷ್ಟು ಹೆಣ್ಣು ಮಕ್ಕಳು ರಾಜಕೀಯದಲ್ಲಿದ್ದಾರೆ. ಹೆಣ್ಣು ಮಕ್ಕಳನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು’ ಎಂದು ಸೌಮ್ಯಾ ರೆಡ್ಡಿ ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.