ಮಂಗಳೂರು: ‘ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿದರೆ, ಮಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ. ಆದರೆ, ಇಲ್ಲಿನ ಅಹಿತಕರ ಘಟನೆ ಗಳು ಈ ಅಭಿವೃದ್ಧಿಗೆ ಅಡ್ಡಿಯಾಗುತ್ತಿವೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ನಗರದ ಹೋಟೆಲ್ ಮೋತಿ ಮಹಲ್ನಲ್ಲಿ ಸೋಮವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಮಂಗಳೂರಿನಲ್ಲಿ ಎಲ್ಲ ಅವಕಾಶಗಳಿವೆ. ಅವುಗಳನ್ನು ಬಳಕೆ ಮಾಡಿಕೊಂಡು, ನಗರದ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು. ಈ ನಿಟ್ಟಿನಲ್ಲಿ ಅಹಿತಕರ ಘಟನೆಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
‘ಕೇರಳದ ಮುಖ್ಯಮಂತ್ರಿ ಮಂಗಳೂ ರಿಗೆ ಭೇಟಿ ನೀಡುವ ಸಂದರ್ಭದಲ್ಲಿ ಅವರಿಗೆ ತಡೆಯೊಡ್ಡಲಾಯಿತು. ಇದೀಗ ಪೊಲೀಸರಿಂದಲೇ ದೌರ್ಜನ್ಯ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಜನರನ್ನು ಧರ್ಮದಲ್ಲಿ ವಿಭಜಿಸುವ ಕೆಲಸ, ರಾಜ್ಯದ ಕರಾವಳಿಯಲ್ಲಿಯೇ ಹೆಚ್ಚಾಗಿ ನಡೆಯುತ್ತಿದೆ’ ಎಂದು ಆರೋಪಿಸಿದರು.
‘ಇಂತಹ ಕೃತ್ಯಗಳನ್ನು ನಿಯಂತ್ರಿಸು ವಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ವಿಫಲ ವಾಗಿವೆ. ಈ ರೀತಿಯ ರಾಜಕೀಯ ಭಯೋತ್ಪಾದನೆಯನ್ನು ಆರಂಭದ ಲ್ಲಿಯೇ ನಿವಾರಿಸದಿದ್ದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯಕ್ಕೆ ಅರ್ಥ ಬರುವುದಿಲ್ಲ’ ಎಂದು ತಿಳಿಸಿದರು.
‘ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಪಕ್ಷದವರಿಗೆ ಮಾತ್ರ ಅಚ್ಛೇ ದಿನ್ ಸೀಮಿತವಾಗಿದೆ. ದೇಶದ ಉಳಿದ ಜನರಿಗೆ ಯಾವುದೇ ಒಳ್ಳೆಯ ದಿನಗಳು ಸಿಗುತ್ತಿಲ್ಲ’ ಎಂದು ಕುಮಾರ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಮಹಾ ಪ್ರಧಾನ ಕಾರ್ಯ ದರ್ಶಿ ಬಿ.ಎಂ. ಫಾರೂಕ್ ಅವರನ್ನು ಸನ್ಮಾನಿಸಲಾಯಿತು. ಶಾಸಕ ಬಿ.ಬಿ. ನಿಂಗಯ್ಯ, ಮಾಜಿ ಸಚಿವ ಕೆ. ಅಮ ರನಾಥ ಶೆಟ್ಟಿ, ಕೋರ್ ಕಮಿಟಿ ಸಂಚಾ ಲಕ ಹೈದರ್ ಪರ್ತಿಪಾಡಿ, ಕೆ.ಎಂ. ಖಾದರ್, ಯುವ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಅಕ್ಷಿತ್ ಸುವರ್ಣ, ಇತರರು ಇದ್ದರು.
ಜಿಲ್ಲಾ ಘಟಕದ ಅಧ್ಯಕ್ಷ ವಿಟ್ಲ ಮಹಮ್ಮದ್ ಕುಂಞಿ ಸ್ವಾಗತಿಸಿದರು. ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಪಿ.ಬಿ. ಸದಾಶಿವ ನಿರೂಪಿಸಿದರು.