ADVERTISEMENT

ಜಿಲ್ಲೆಯಲ್ಲಿ 37 ಮತಗಟ್ಟೆಗಳ ಸಿದ್ಧತೆ

ವಿಧಾನ ಪರಿಷತ್‌ ಶಿಕ್ಷಕರ, ಪದವೀಧರರ ಕ್ಷೇತ್ರಗಳ ಚುನಾವಣೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2018, 5:54 IST
Last Updated 2 ಜೂನ್ 2018, 5:54 IST

ಮಂಗಳೂರು: ವಿಧಾನ ಪರಿಷತ್‌ನ ನೈರುತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆಯ ಮತದಾನ ಜೂನ್‌ 8ರಂದು ನಡೆಯಲಿದ್ದು, ಇದಕ್ಕಾಗಿ 37 ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗುತ್ತಿದೆ. 23 ಮತಗಟ್ಟೆಗಳನ್ನು ಪದವೀಧರರ ಕ್ಷೇತ್ರಕ್ಕೆ ಮತ್ತು 14 ಮತಗಟ್ಟೆಗಳನ್ನು ಶಿಕ್ಷಕರ ಕ್ಷೇತ್ರಕ್ಕೆ ಒದಗಿಸಲಾಗಿದೆ.

ನೈರುತ್ವ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳು ಆರು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪದವೀಧರರ ಕ್ಷೇತ್ರಕ್ಕೆ 15,494 ಮತದಾರರಿದ್ದಾರೆ. 7,223 ಪುರುಷರು ಮತ್ತು 8,271 ಮಹಿಳೆಯರು ‍ಪದವೀಧರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಈ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ವಿಭಾಗದ ಮೂಲಗಳು ತಿಳಿಸಿವೆ.

ನೈರುತ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಜಿಲ್ಲೆಯ 7,140 ಶಿಕ್ಷಕರು ನೋಂದಣಿ ಮಾಡಿಸಿಕೊಂಡಿದ್ದಾರೆ. 2,944 ಪುರುಷರು ಮತ್ತು 4,196 ಮಹಿಳೆಯರು ಈ ಎಲ್ಲರಿಗೂ ಜೂನ್‌ 8ರಂದು ಮತ ಚಲಾಯಿಸುವ ಅವಕಾಶ ದೊರೆಯಲಿದೆ.

ADVERTISEMENT

ಪದವೀಧರರ ಮತಗಟ್ಟೆಗಳು:

ಮೂಲ್ಕಿ ಪಟ್ಟಣ ಪಂಚಾಯಿತಿ ಸಭಾಂಗಣ, ಮೂಡುಬಿದಿರೆ ಪುರಸಭೆ ಪರಿಷತ್ತಿನ ಕಚೇರಿ (ಪೂರ್ವ ವಿಭಾಗ), ಮೂಡುಬಿದಿರೆ ಪುರಸಭೆ ಕಚೇರಿ (ಪಶ್ಚಿಮ ವಿಭಾಗ), ಸುರತ್ಕಲ್‌ ಗೋವಿಂದದಾಸ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಕೊಠಡಿ ಸಂಖ್ಯೆ 101 ಮತ್ತು  102, ಬಜ್ಪೆಯ ಪಂಚಾಯತ್‌ ಕಚೇರಿ ಹೊಸ ಕಟ್ಟಡದ ಸಭಾಂಗಣ, ಗುರುಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ, ಮಂಗಳೂರಿನ ಹಂಪನಕಟ್ಟೆಯ ವಿಶ್ವವಿದ್ಯಾಲಯ ಕಾಲೇಜಿನ ವಾಣಿಜ್ಯ ವಿಭಾಗದ ಕೊಠಡಿ ಸಂಖ್ಯೆ 33, 34, 35 ಮತ್ತು 36.

ಕೊಣಾಜೆಯ ಮಂಗಳೂರು ವಿಶ್ವವಿದ್ಯಾಲಯದ ಆವರಣದ ವಿಶ್ವ ಮಂಗಲ ಇಂಗ್ಲಿಷ್‌ ಮಾಧ್ಯಮ ಶಾಲೆ, ಬಬ್ಬುಕಟ್ಟೆಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆ, ಬಿ.ಸಿ.ರೋಡ್‌ನ ಮಿನಿ ವಿಧಾನಸೌಧದ ಕೊಠಡಿ ಸಂಖ್ಯೆ 1, 2 ಮತ್ತು 3, ಬೆಳ್ತಂಗಡಿ ತಾಲ್ಲೂಕು ಕಚೇರಿಯ ಹಳೆಯ ಕಟ್ಟಡದ ಸಭಾಂಗಣ ಮತ್ತು ಕಂದಾಯ ನಿರೀಕ್ಷಕರ ಕಚೇರಿಗಳು, ಪುತ್ತೂರು ತಾಲ್ಲೂಕು ಪಂಚಾಯಿತಿ ಕಚೇರಿಯ ಎಸ್‌ಜಿಎಸ್‌ವೈ ಕಚೇರಿ ಮತ್ತು ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ಇಲಾಖೆ ಕಚೇರಿ, ಸುಳ್ಯ ತಾಲ್ಲೂಕು ಕಚೇರಿ ಹೊಸ ಕಟ್ಟಡದ ಪೂರ್ವ ವಿಭಾಗ, ಪಂಜದ ನಾಡ ಕಚೇರಿ.

ಶಿಕ್ಷಕರ ಮತಗಟ್ಟೆಗಳು:

ಮೂಲ್ಕಿ ಪಟ್ಟಣ ಪಂಚಾಯಿತಿ ಸಭಾಂಗಣದ ಪಶ್ಚಿಮ ವಿಭಾಗ, ಮೂಡುಬಿದಿರೆ ಪುರಸಭೆ ಕಚೇರಿ, ಸುರತ್ಕಲ್‌ ಗೋವಿಂದದಾಸ ಕಾಲೇಜಿನ ವಿಜ್ಞಾನ ವಿಭಾಗದ ದಕ್ಷಿಣ ವಲಯದ ಕೊಠಡಿ, ಬಜ್ಪೆ ಪಂಚಾಯತ್‌ ಕಚೇರಿಯ ಹಳೆ ಕಟ್ಟಡದ ಸಭಾಂಗಣ, ಗುರುಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಪಶ್ಚಿಮ ವಿಭಾಗ, ಮಂಗಳೂರಿನ ಹಂಪನಕಟ್ಟೆಯ ವಿಶ್ವವಿದ್ಯಾಲಯ ಕಾಲೇಜಿನ ದಕ್ಷಿಣ ವಿಭಾಗದ ಕೊಠಡಿ ಸಂಖ್ಯೆ 7 ಮತ್ತು 8.

ಕೊಣಾಜೆಯ ಮಂಗಳೂರು ವಿಶ್ವವಿದ್ಯಾಲಯ ಆವರಣದ ವಿಶ್ವ ಮಂಗಳ ಇಂಗ್ಲಿಷ್ ಮಾಧ್ಯಮ ಶಾಲೆಯ ದಕ್ಷಿಣ ವಿಭಾಗ, ಪೆರ್ಮನ್ನೂರು ಬಬ್ಬುಕಟ್ಟೆಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯ ಉತ್ತರ ವಿಭಾಗ, ಬಿ.ಸಿ.ರೋಡ್‌ನ ಸಾಮರ್ಥ್ಯ ಸೌಧ (ತಾಲ್ಲೂಕು ಪಂಚಾಯಿತಿ ಕಚೇರಿ), ಬೆಳ್ತಂಗಡಿ ತಾಲ್ಲೂಕು ಕಚೇರಿಯ ಹಳೆಯ ಕಟ್ಟಡದ ಸಭಾಂಗಣ, ಪುತ್ತೂರಿನ ಸಾಮರ್ಥ್ಯ ಸೌಧ (ತಾಲ್ಲೂಕು ಪಂಚಾಯಿತಿ ಕಚೇರಿ), ಸುಳ್ಯ ತಾಲ್ಲೂಕು ಕಚೇರಿ ಹಳೆಯ ಕಟ್ಟಡದ ಪಶ್ಚಿಮ ವಿಭಾಗ ಮತ್ತು ಪಂಜ ನಾಡ ಕಚೇರಿಯ ಉತ್ತರ ವಿಭಾಗ.

ಮತದಾನದ ಅವಧಿ ವಿಸ್ತರಣೆ:

ವಿಧಾನ ಪರಿಷತ್‌ ಚುನಾವಣೆಗೆ ಬೆಳಿಗ್ಗೆ 8ರಿಂದ ಸಂಜೆ 4ರವರೆಗೂ ಮತದಾನಕ್ಕೆ ಅವಕಾಶ ಕಲ್ಪಿಸಲಾಗುತ್ತಿತ್ತು. ಈ ಬಾರಿ ರಾಜಕೀಯ ಪಕ್ಷಗಳ ಮನವಿ ಮೇರೆಗೆ ಮತದಾನದ ಅವಧಿಯನ್ನು ಎರಡು ಗಂಟೆಗಳ ಕಾಲ ವಿಸ್ತರಿಸಲಾಗಿದೆ. ಜೂನ್‌ 8ರಂದು ಬೆಳಿಗ್ಗೆ 7 ಗಂಟೆಗೆ ಆರಂಭವಾಗುವ ಮತದಾನ ಸಂಜೆ 5 ಗಂಟೆಗೆ ಮುಕ್ತಾಯಗೊಳ್ಳಲಿದೆ.

ಪದವೀಧರರ ಕ್ಷೇತ್ರದ ಅಭ್ಯರ್ಥಿಗಳು

ಅರುಣ್‌ ಕುಮಾರ್ (ಜೆಡಿಎಸ್‌), ಆಯನೂರು ಮಂಜುನಾಥ್ (ಬಿಜೆಪಿ), ಎಸ್‌.ಪಿ.ದಿನೇಶ್ (ಕಾಂಗ್ರೆಸ್), ಜೆ.ಸಿ.ಪಟೇಲ್‌ (ಸರ್ವ ಜನತಾ ಪಕ್ಷ), ಜಫರುಲ್ಲಾ ಸತ್ತರ್ ಖಾನ್‌, ಜಿ.ಎಂ.ಜಯಕುಮಾರ್, ಪ್ರಭುಲಿಂಗ್ ಬಿ.ಆರ್‌., ಬಿ.ಕೆ.ಮಂಜುನಾಥ (ಪಕ್ಷೇತರರು).

ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗಳು

ಗಣೇಶ್ ಕಾರ್ಣಿಕ್‌ (ಬಿಜೆಪಿ), ಎಸ್‌.ಎಲ್‌.ಭೋಜೇಗೌಡ (ಜೆಡಿಎಸ್‌), ಕೆ.ಕೆ.ಮಂಜುನಾಥ ಕುಮಾರ್ (ಕಾಂಗ್ರೆಸ್), ಡಾ.ಅರುಣ್ ಹೊಸಕೊಪ್ಪ, ಅಲೋಶಿಯಸ್‌ ಡಿಸೋಜ, ಕೆ.ಬಿ.ಚಂದ್ರೋಜಿ ರಾವ್‌, ಡಿ.ಕೆ.ತುಳಸಪ್ಪ, ಅಂಪಾರ ನಿತ್ಯಾನಂದ ಶೆಟ್ಟಿ, ಪ್ರಭುಲಿಂಗ ಬಿ.ಆರ್, ಬಸವರಾಜಪ್ಪ ಕೆ.ಸಿ., ಎಂ.ರಮೇಶ ಮತ್ತು ರಾಜೇಂದ್ರಕುಮಾರ್ ಕೆ.ಪಿ. (ಪಕ್ಷೇತರರರು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.