ADVERTISEMENT

ಬಿಜೆಪಿಯದ್ದು ಕಣ್ಣೊರೆಸುವ ತಂತ್ರ- ಟೀಕೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 8:35 IST
Last Updated 9 ಅಕ್ಟೋಬರ್ 2012, 8:35 IST

ಹೆಬ್ರಿ: `ಚಾರ ನಿವೇಶನದಲ್ಲಿ 244 ಜನರ ನಿವೇಶನವನ್ನು ಕಿತ್ತುಕೊಂಡು ಬಡವರ ಹೊಟ್ಟೆಗೆ ಹೊಡೆದ ಬಿಜೆಪಿಗರು ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಹಕ್ಕುಪತ್ರ ನೀಡುತ್ತೇವೆ ಎಂಬ ನೆಪದಲ್ಲಿ ಮತ್ತೊಮ್ಮೆ ಹಳ್ಳಿಯ ಮುಗ್ಧ ಜನತೆಗೆ ಅನ್ಯಾಯ ಮಾಡಲು ಮಾಜಿ ಶಾಸಕರು ಮತ್ತು ಮತ್ತವರ ತಂಡ ವ್ಯವಸ್ಥಿತ ಸಂಚು ರೂಪಿಸುತ್ತಿದೆ~ ಎಂದು ಶಾಸಕ ಗೋಪಾಲ ಭಂಡಾರಿ ಹೇಳಿದರು.

ಹೆಬ್ರಿ ಚಾರದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. `ಕಳೆದ ನಾಲ್ಕೂವರೇ ವರ್ಷ ಸುಮ್ಮನಿದ್ದ ಬಿಜೆಪಿಗರಿಗೆ ಈಗ ಜನರ ನೆನಪಾಗಲು ಶುರುವಾಗಿದೆ. ಚಾರದ ಜನತೆಗೆ ಬಿಜೆಪಿಗರಿಂದ ಆದಷ್ಟು ಅನ್ಯಾಯ ತಾಲ್ಲೂಕಿನಲ್ಲಿ ಯಾರಿಗೂ ಆಗಿಲ್ಲ ಎಂದು ಗರಂ ಆಗಿ ಮಾತನಾಡಿದ ಶಾಸಕರು ಜನತೆಗೆ ತೊಂದರೆಯಾಗುವ 94ಸಿ ವಿಧೇಯಕವನ್ನೇ ರಾಜ್ಯಪಾಲರ ಮುಂದಿಟ್ಟು ಅದನ್ನು ಅವರು ಆಕ್ಷೇಪಿಸಿ ತಿದ್ದುಪಡಿ ಮಾಡಿ ಸಲ್ಲಿಸುವಂತೆ ತಿಳಿಸಿದ್ದರೂ ಈಗ ಬಿಜೆಪಿಯವರು ಚುನಾವಣೆಗೋಸ್ಕರ ಕಾಂಗ್ರೆಸ್ ಮತ್ತು ರಾಜ್ಯಪಾಲ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ~ ಎಂದರು.

ಇದೇ ಸಂದರ್ಭದಲ್ಲಿ ಚಾರದ ಕೊಂಡೆಜಡ್ಡಿ ವಾರ್ಡಿನ ಕಾಂಗ್ರೆಸ್ ಅಧ್ಯಕ್ಷರಾಗಿ ಜಯಕರ ಆಮ್ಲರ್ ಮತ್ತು ಗಾಂಧಿನಗರಕ್ಕೆ ರತನ ಕುಮಾರ್ ಭಂಡಾರಿಯವರನ್ನು ಆಧ್ಯಕ್ಷರಾಗಿ ನೇಮಿಸಲಾಯಿತು. ಉಪಾಧ್ಯಕ್ಷರಾಗಿ ಶಂಕರ್, ಉದಯ ನಾಯ್ಕ, ರಮೇಶ ನಾಯ್ಕ ಆಯ್ಕೆಯಾದರು. ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಸನ್ನ ಬಲ್ಲಾಳ್, ಹೆಬ್ರಿ ಕಾಂಗ್ರೆಸ್ ಅಧ್ಯಕ್ಷ ಜಯಕರ ಪೂಜಾರಿ, ಪಂಚಾಯಿತಿ ಸದಸ್ಯರಾದ ಬೇಬಿ, ಸತೀಶ ಶೆಟ್ಟಿ, ಪಕ್ಷದ ಪ್ರಮುಖರಾದ ಶ್ಯಾಮರಾಯ ಶೆಟ್ಟಿ, ದಿನೇಶ ಶೆಟ್ಟಿ, ಗಾಯತ್ರಿ ಆಚಾರ್ಯ, ಇಂದಿರಾ ನಾಯಕ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.