ವಿಟ್ಲ: ಇಲ್ಲಿಯ ಕೇಪು ಗ್ರಾಮದ ಕಲ್ಲಂಗಳ ಸರ್ಕಾರಿ ಪರಿಶಿಷ್ಟ ವರ್ಗಗಳ ಆಶ್ರಮ ಶಾಲೆಯಲ್ಲಿ ‘ಮತದಾರ ಪ್ರಭು’ಗಳಿಗೆ ಶಾಮಿಯಾನ ಅಳವಡಿಸಿ ನೆರಳು, ಕೂರಲು ಆಸನ, ತುರ್ತು ಚಿಕಿತ್ಸೆ ಘಟಕ, ವೈದ್ಯರನ್ನು ನೇಮಿಸಲಾಗಿತ್ತು. ಮತದಾರರನ್ನು ನೀರು ಬೆಲ್ಲ ನೀಡಿ, ಕೆಂಪು ನೆಲಹಾಸು ಹಾಸಿ ಸ್ವಾಗತಕ್ಕೆ ವ್ಯವಸಸ್ಥೆ ಮಾಡಲಾಗಿತ್ತು.
ಪುತ್ತೂರು ಹಾಗೂ ಬಂಟ್ವಾಳ ಎರಡು ವಿಧಾನ ಸಭಾ ಕ್ಷೇತ್ರಗಳನ್ನು ಒಳಗೊಂಡ ವಿಟ್ಲ ಹೋಬಳಿಯಲ್ಲಿ ಕೆಲವು ಕಡೆಗಳಲ್ಲಿ ಚಿಕ್ಕಪುಟ್ಟ ಸಮಸ್ಯೆಗಳು ಮಾತ್ರ ನಡೆದದ್ದು, ಹೊರತುಪಡಿಸಿದರೆ ಉಳಿದ ಎಲ್ಲಾ ಕಡೆಗಳಲ್ಲಿ ಶಾಂತಿಯುತವಾಗಿ ಚುನಾವಣೆ ನಡೆದಿದೆ.
ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕನ್ಯಾನ ಬಂಡಿತ್ತಡ್ಕ ಮತಗಟ್ಟೆಯಲ್ಲಿ ಬೆಳಿಗ್ಗೆ ಮತಯಂತ್ರದಲ್ಲಿ ದೋಷ ಕಂಡು ಬಂತು. ದೋಷದ ಬಗ್ಗೆ ಎಂದು ಬಿಜೆಪಿ ಕಾರ್ಯಕರ್ತರು ದೂರು ಸಲ್ಲಿಸಿದರು. ಬೇರೆ ಮತಯಂತ್ರ ಅಳವಡಿಸಿ ಗೊಂದಲಕ್ಕೆ ತೆರೆ ಎಳೆದರು. ಕನ್ಯಾನದ ದೇಲಂತಬೆಟ್ಟು ಎಂಬಲ್ಲಿ ಕಾರ್ಯಕರ್ತರು ಪ್ರಚಾರ ಮಾಡುತ್ತಿದ್ದರು ಎಂಬುದಕ್ಕೆ ಗೊಂದಲ ಉಂಟಾಗಿತ್ತು. ಪೊಲೀಸರು ಶಾಂತಗೊಳಿಸಿದರು.
ವಿಟ್ಲ ಹೋಬಳಿಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮತದಾನ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಕ್ಷಗಳ ಐಸ್ ಕ್ಯಾಂಡಿ
ವಿಟ್ಲದ ಜ್ಯೂನಿಯರ್ ಕಾಲೇಜಿನ ಬಳಿಯಿರುವ ಶೆಣೈ ಕೋಲ್ಡ್ ಹೌಸ್ ಮಾಲಕ ಗೋಕುಲ್ದಾಸ್ ಶೆಣೈ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಪಕ್ಷದ ಧ್ವಜದ ಬಣ್ಣದ ಐಸ್ ಕ್ಯಾಂಡಿಗಳನ್ನು ಉಚಿತವಾಗಿ ವಿತರಿಸಿದರು.
ಮಾದರಿ ಮತಗಟ್ಟೆ
ಏಕೈಕ ಮಾದರಿ ಮತಗಟ್ಟೆ ಕೇಪು ಗ್ರಾಮದ ಕಲ್ಲಂಗಳ ಸರ್ಕಾರಿ ಪರಿಶಿಷ್ಟ ವರ್ಗಗಳ ಆಶ್ರಮ ಶಾಲೆಯಲ್ಲಿ ನಿರ್ಮಿಸಲಾಗಿತ್ತು. ಪುತ್ತೂರು ವಿಧಾನ ಸಭಾ ಕ್ಷೇತ್ರದ (206) ಚುನಾವಣಾಧಿಕಾರಿ ಕೃಷ್ಣಮೂರ್ತಿ ನಿರ್ದೇಶನದ ಮೇರೆಗೆ ವಿಟ್ಲ ಕಂದಾಯ ನಿರೀಕ್ಷರಾದ ದಿವಾಕರ್ ಮತ್ತು ಗ್ರಾಮಕರಣಿಕರು ಸಿದ್ಧ ಪಡಿಸಿದ್ದರು.
**
ವಿಟ್ಲ ವ್ಯಾಪ್ತಿಯಲ್ಲಿ ಎಲ್ಲಿಯೂ ಅಹಿತಕರ ಘಟನೆ ನಡೆದಿಲ್ಲ. ಎಲ್ಲರೂ ಉತ್ಸಹದಿಂದ ಬಂದು ಮತದಾನ ಮಾಡುತ್ತಿದ್ದಾರೆ. ಶೇಕಡವಾರು ಹೆಚ್ಚಳ ಆಗಿದೆ
– ರವಿಕಾಂತೇ ಗೌಡ, ಜಿಲ್ಲಾ ಎಸ್ಪಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.