ADVERTISEMENT

`ಸೇವಾ ತೆರಿಗೆ: ಅರಿವು ಇಲ್ಲದಿದ್ದರೆ ತೊಂದರೆ'

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 8:53 IST
Last Updated 8 ಏಪ್ರಿಲ್ 2013, 8:53 IST

ಮಂಗಳೂರು: ಕಳೆದ ವರ್ಷದ ಹಣಕಾಸು ಕಾಯ್ದೆಯ ಪ್ರಕಾರ ಸುಮಾರು 250ರಷ್ಟು ಸೇವೆಗಳು ತೆರಿಗೆ ವ್ಯಾಪ್ತಿಗೆ ಬರುತ್ತವೆ. ಇವುಗಳ ಬಗ್ಗೆ ಸರಿಯಾದ ಅರಿವು ಇಲ್ಲದೆ ಹೋದರೆ ಸೇವೆ ಒದಗಿಸುವವರಿಗೆ ತೊಂದರೆಯಾಗುವುದು ನಿಶ್ಚಿತ ಎಂದು ನಗರದ ಹಿರಿಯ ಕಂಪೆನಿ ಸೆಕ್ರಟರಿ ಕೆ.ಚೇತನ್ ನಾಯಕ್ ಹೇಳಿದರು.

ಕಂಪೆನಿ ಸೆಕ್ರಟರಿ ಸಂಸ್ಥೆಯ ಮಂಗಳೂರು ಘಟಕದ ವತಿಯಿಂದ ಶನಿವಾರ ಕೊಡಿಯಾಲ್‌ಬೈಲ್‌ನ ಕರ್ಣಾಟಕ ಬ್ಯಾಂಕ್ ಸಭಾಂಗಣದಲ್ಲಿ ನಡೆದ `ಸಿಎಸ್ ವೃತ್ತಿಯಲ್ಲಿ ನಿರೀಕ್ಷೆಗಳು ಮತ್ತು ಸವಾಲುಗಳು' ಎಂಬ ವಿಷಯದ ಮೇಲಿನ ಒಂದು ದಿನದ ಕಾರ್ಯಾಗಾರದಲ್ಲಿ ಸೇವಾ ತೆರಿಗೆಯಲ್ಲಿನ ಇತ್ತೀಚಿನ ಬದಲಾವಣೆಗಳ ಬಗ್ಗೆ ಅವರು ಮಾತನಾಡಿದರು.

`ಈ ಹಿಂದೆ ಸೇವಾ ತೆರಿಗೆಗೆ ಒಳಪಡುವ ಸೇವೆಗಳ ಬಗ್ಗೆ ಸರ್ಕಾರ ಪಟ್ಟಿ ಮಾಡುತ್ತಿತ್ತು. ಇದೀಗ ಸೇವಾ ತೆರಿಗೆ ಇಲ್ಲದ ಸೇವೆಗಳ ಪಟ್ಟಿ ಮಾಡಿ ಉಳಿದ ಎಲ್ಲಾ ಸೇವೆಗಳಿಗೂ ತೆರಿಗೆ ವಿಧಿಸಲಾಗುತ್ತಿದೆ. ಹೀಗಾಗಿ ತೆರಿಗೆಗೆ ಒಳಪಡದ ಸೇವೆಗಳು ಯಾವುದು, ಭಾಗಶಃ ತೆರಿಗೆಗೆ ಒಳಪಡುವ ಸೇವೆಗಳು ಯಾವುದು ಎಂಬುದರ ಬಗ್ಗೆ ಕಂಪೆನಿ ಸೆಕ್ರೆಟರಿಗಳು ಪರಿಪೂರ್ಣ ಜ್ಞಾನ ಹೊಂದಿರಬೇಕು. ಇದರಿಂದ ಕಂಪೆನಿಗಳಿಗೆ ಸೂಕ್ತ ಸಲಹೆ, ಸೂಚನೆ ನೀಡುವುದರ ಜತೆಗೆ ತಪ್ಪು ತಿಳಿವಳಿಕೆಯಿಂದ ಕಂಪೆನಿಗಳು, ವ್ಯಕ್ತಿಗಳು ನಷ್ಟಕ್ಕೆ ಒಳಗಾಗುವುದು ತಪ್ಪುತ್ತದೆ' ಎಂದು ಅವರು ಹೇಳಿದರು.

ಬಳಿಕ 2012ರ ಕಂಪೆನೀಸ್ ಬಿಲ್ ಬಗ್ಗೆ ಹೈದರಬಾದ್‌ನ ಕಂಪೆನಿ ಸೆಕ್ರೆಟರಿ ಅಹಲಾದ ರಾವ್ ವಿ. ಮಾತನಾಡಿದರು.
ಕಂಪೆನಿ ಸೆಕ್ರಟರಿ ಸಂಸ್ಥೆಯ ಮಂಗಳೂರು ಘಟಕದ ಅಧ್ಯಕ್ಷ ಉಲ್ಲಾಸ್ ಕುಮಾರ್ ಮೇಲಿನಮೊಗರು ಸ್ವಾಗತಿಸಿದರು. ಉಪಾಧ್ಯಕ್ಷ ವೈ.ವಿ.ಬಾಲಚಂದ್ರ, ಖಜಾಂಚಿ ಅಬ್ದುಲ್ ಅಜೀಜ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.