ADVERTISEMENT

ಸಾವಿರದ ಗಡಿ ದಾಟಿದ ಸಕ್ರಿಯ ಪ್ರಕರಣ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌–19 ತಡೆ ಲಸಿಕೆ ಉತ್ಸವ ಆರಂಭ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 7:16 IST
Last Updated 12 ಏಪ್ರಿಲ್ 2021, 7:16 IST
ವಿದ್ಯಾಪ್ರಸನ್ನ ಶ್ರೀಪಾದರು ಲಸಿಕೆ ತೆಗೆದುಕೊಂಡರು.
ವಿದ್ಯಾಪ್ರಸನ್ನ ಶ್ರೀಪಾದರು ಲಸಿಕೆ ತೆಗೆದುಕೊಂಡರು.   

ಮಂಗಳೂರು: ಜಿಲ್ಲೆಯಲ್ಲಿ ಭಾನುವಾರ 133 ಜನರಿಗೆ ಕೋವಿಡ್–ದೃಢವಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,072ಕ್ಕೆ ಏರಿದೆ. ಭಾನುವಾರ 26 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ ಒಟ್ಟು 36,785 ಜನರಿಗೆ ಕೋವಿಡ್–19 ದೃಢವಾಗಿದ್ದು, 34,970 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ 743 ಮಂದಿ ಮೃತಪಟ್ಟಿದ್ದಾರೆ.

ಲಸಿಕೆ ಉತ್ಸವ ಆರಂಭ: ಜಿಲ್ಲೆಯಲ್ಲಿ ಭಾನುವಾರ 60 ವರ್ಷ ಮೇಲಿನ 1,117 ಮಂದಿ ಮೊದಲನೇ ಡೋಸ್, 90 ಮಂದಿ ಎರಡನೇ ಡೋಸ್ ಲಸಿಕೆ ಹಾಕಲಾಗಿದೆ. 13 ಮಂದಿ ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್, 7 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.

7 ಮಂದಿ ಮುಂಚೂಣಿ ಕಾರ್ಯಕರ್ತರಿಗೆ ಮೊದಲನೇ ಡೋಸ್, 15 ಮಂದಿ ಎರಡನೇ ಡೋಸ್ ಲಸಿಕೆ ಹಾಕಲಾಗಿದೆ. 45 ರಿಂದ 60 ವರ್ಷದೊಳಗಿನ 1,891 ಮಂದಿ ಮೊದಲನೇ ಡೋಸ್, 35 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಭಾನುವಾರ 3,175 ಮಂದಿ ಲಸಿಕೆ ಪಡೆದಿದ್ದಾರೆ.

ADVERTISEMENT

ಭಾನುವಾರ ಬೆರಳೆಣಿಕೆಯ ಲಸಿಕಾ ಕೇಂದ್ರಗಳು ಕಾರ್ಯಾಚರಿಸಿದ್ದು, ಸೋಮವಾರ 150ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಲಸಿಕಾ ಅಭಿಯಾನ ನಡೆಯಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಗ್ಯ ಇಲಾಖೆ ವತಿಯಿಂದ ಭಾನುವಾರದಿಂದ ಏ.14 ರವರೆಗೆ ಜಿಲ್ಲೆಯಾದ್ಯಂತ ಕೋವಿಡ್ ಲಸಿಕಾ ಉತ್ಸವವನ್ನು ಎಲ್ಲ ಆರೋಗ್ಯ ಕೇಂದ್ರ, ಉಪಕೇಂದ್ರ ಮಟ್ಟದಲ್ಲಿ ಆಯೋಜಿಸಲಾಗಿದೆ. ಏ.15 ರಂದು ಜಿಲ್ಲೆಯಲ್ಲಿ ಏಕಕಾಲದಲ್ಲಿ ವಿಶೇಷ ಲಸಿಕೆ ಅಭಿಯಾನವನ್ನು ಸಹ ಆಯೋಜಿಸಲಾಗಿದೆ. ಸಾರ್ವಜನಿಕರು ಲಸಿಕೆ ಪಡೆಯಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್‌ಕುಮಾರ್ ತಿಳಿಸಿದ್ದಾರೆ.

251 ಪ್ರಕರಣ: ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ 251 ಮಂದಿಗೆ ಕೋವಿಡ್ ದೃಢಪಟ್ಟಿದೆ. 81 ಮಂದಿ ಗುಣಮುಖರಾಗಿದ್ದಾರೆ. 2,364 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ 34,364 ಮಂದಿಗೆ ಸೋಂಕು ದೃಢಪಟ್ಟಿದ್ದು, 31,678 ಮಂದಿ ಗುಣಮುಖರಾಗಿದ್ದಾರೆ.

ಲಸಿಕೆ ಪಡೆದ ವಿದ್ಯಾಪ್ರಸನ್ನ ಶ್ರೀ

ಸುಬ್ರಹ್ಮಣ್ಯ: ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು, ಸುಬ್ರಹ್ಮಣ್ಯ ಪರ್ವತಮುಖಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಕೋವಿಡ್ ನಿರೋಧಕ ಲಸಿಕೆ ಪಡೆದರು.

‘ವಿಶ್ವದೆಲ್ಲೆಡೆ ಕೊರೊನಾ ಸೋಂಕು ವ್ಯಾಪಿಸಿದ್ದು, ಎರಡನೇ ಅಲೆಯಾಗಿ ಮತ್ತೆ ಸೋಂಕು ಪಸರಿಸುವ ಭೀತಿ ಮೂಡಿದೆ. ಭಾರತೀಯ ಮೂಲದ ಲಸಿಕೆಯನ್ನು ಸರ್ಕಾರ 45 ವಯಸ್ಸಿಗಿಂತ ಹಿರಿಯರಿಗೆ ನೀಡಲಾಗುತ್ತಿದೆ. ನಾನು ಕೂಡ ಸುಬ್ರಹ್ಮಣ್ಯ ಕ್ಷೇತ್ರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆದುಕೊಂಡಿದ್ದೇನೆ. ಎಲ್ಲರು ಸ್ವಯಂ ಪ್ರೇರಿತವಾಗಿ ಲಸಿಕೆ ಪಡೆದುಕೊಳ್ಳಬೇಕು ಎಂದು ಶ್ರೀಗಳು ಹೇಳಿದರು.

ಇತರರು ಸೋಂಕು ತಡೆಯಲು ಸ್ವಯಂರಕ್ಷಣೆಯಲ್ಲಿ ತೊಡಗಿಕೊಳ್ಳಬೇಕು. ಸರ್ಕಾರದ ನಿಯಮಗಳನ್ನು ಪಾಲಿಸಿ ಸೋಂಕಿನ ವಿರುದ್ಧ ಹೋರಾಡಬೇಕು. ನಾಗರಿಕರಲ್ಲಿ ಲಸಿಕೆ ಕುರಿತು ಆತಂಕ ಬೇಡ. ಸೋಂಕಿನ ಬಗ್ಗೆಯೂ ಭೀತಿ ಬೇಡ. ಎಲ್ಲ ನಿಯಮಗಳನ್ನು ಪಾಲಿಸೋಣ ಎಂದರು. ವೈದ್ಯಾಧಿಕಾರಿ ಡಾ.ತ್ರಿಮೂರ್ತಿ, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.