ಮಂಗಳೂರು: ಕೆಎಸ್ಆರ್ಟಿಸಿ ಮಂಗಳೂರು ವಿಭಾಗದಲ್ಲಿ ಮುಷ್ಕರ ನಿರತರಾಗಿರುವ 32 ತರಬೇತಿ ಸಿಬ್ಬಂದಿಯನ್ನು ಸೋಮವಾರ ಕೆಲಸದಿಂದ ತೆಗೆದು ಹಾಕಲಾಗಿದೆ.
ಸಾರಿಗೆ ನಿಗಮದ ನೌಕರರಿಗೆ 6ನೇ ವೇತನ ಆಯೋಗದ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ಕೆಎಸ್ಆರ್ಟಿಸಿ ನೌಕರರು ನಡೆಸುತ್ತಿರುವ ಮುಷ್ಕರ 14ನೇ ಮುಂದುವರಿಯಿತು. ಆದರೆ, ಮಂಗಳೂರು ವಿಭಾಗದಲ್ಲಿ ಕೆಲಸಕ್ಕೆ ಹಾಜರಾಗುವ ನೌಕರರ ಸಂಖ್ಯೆಯಲ್ಲಿ ಏರಿಕೆಯಾಗಿದೆ.
ಸೋಮವಾರ ಶೇ 90ರಷ್ಟು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಸೋಮವಾರ 370ಕ್ಕೂ ಹೆಚ್ಚು ಬಸ್ಗಳು ಸಂಚರಿಸಿವೆ. ದೂರದ ಊರುಗಳಿಗೆಕರ್ನಾಟಕ ಸಾರಿಗೆ, ವೋಲ್ವೊ, ರಾಜಹಂಸ, ನಾನ್ ಎಸಿ ಸ್ಲೀಪರ್ ಒಳಗೊಂಡು 25ಕ್ಕೂ ಹೆಚ್ಚು ಬಸ್ಗಳು ರಾತ್ರಿ ತೆರಳಿವೆ. ವಿಭಾಗದಲ್ಲಿ ಬಸ್ ಸಂಚಾರ ಬಹುತೇಕ ಸಹಜ ಸ್ಥಿತಿಗೆ ಮರಳಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಅರುಣ್ ತಿಳಿಸಿದ್ದಾರೆ.
‘ಮುಷ್ಕರ ನಿರತ ತರಬೇತಿ ಸಿಬ್ಬಂದಿಗೆ ಕರ್ತವ್ಯಕ್ಕೆ ಹಾಜರಾಗಲು ಅಂತಿಮ ನೋಟಿಸ್ ನೀಡಲಾಗಿತ್ತು. ಗೈರು ಹಾಜರಾದವರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಈಗಾಗಲೇ ಬೇರೆ ವಿಭಾಗಕ್ಕೆ ವರ್ಗಾವಣೆಯಾದವರನ್ನು ಇಲ್ಲಿಂದ ಬಿಡುಗಡೆಗೊಳಿಸಲಾಗಿದೆ. ಬೇರೆ ವಿಭಾಗದಿಂದ ಇಲ್ಲಿಗೆ ಬರುವವರಲ್ಲಿ ಇಬ್ಬರು ಮಾತ್ರ ಹಾಜರಾಗಿದ್ದಾರೆ. ಈ ವಿಭಾಗಕ್ಕೆ ವರ್ಗಾವಣೆಯಾಗಿರುವ 120 ಜನರು ಇನ್ನಷ್ಟೇ ಹಾಜರಾಗಬೇಕಾಗಿದೆ’ ಎಂದು ಪ್ರತಿಕ್ರಿಯಿಸಿದರು.
ಪುತ್ತೂರು ವಿಭಾಗದಲ್ಲಿ 266 ಬಸ್ಗಳು ಸಂಚರಿಸಿದವು. ರಾತ್ರಿ ಬೆಂಗಳೂರಿಗೆ ನಾಲ್ಕೈದು ಬಸ್ಗಳು ತೆರಳಿದವು. ಧರ್ಮಸ್ಥಳ, ಪುತ್ತೂರು, ಬಿ.ಸಿ.ರೋಡ್, ಸುಳ್ಯ ಭಾಗದಿಂದ ಬೆಂಗಳೂರಿಗೆ ಸುಮಾರು 24 ಬಸ್ಗಳು ಸಂಚಾರ ನಡೆಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.