ADVERTISEMENT

‘ಪೊಲೀಸ್‌ ತರಬೇತಿ ಶಾಲೆಗಳ ಬಲವರ್ಧನೆ’

​ಪ್ರಜಾವಾಣಿ ವಾರ್ತೆ
Published 30 ಜನವರಿ 2018, 6:50 IST
Last Updated 30 ಜನವರಿ 2018, 6:50 IST
ಮಂಗಳೂರಿನ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆ ಮೈದಾನದಲ್ಲಿ ಸೋಮವಾರ ನಡೆದ ಜಿಲ್ಲಾ ಪೊಲೀಸ್‌ ನೂತನ ಕಾನ್‌ಸ್ಟೆಬಲ್‌ಗಳ ನಿರ್ಗಮನ ಪಥ ಸಂಚಲನದಲ್ಲಿ ನೇಮಕಾತಿ ಮತ್ತು ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕೆ.ಎಸ್‌.ಆರ್‌.ಚರಣ್‌ ರೆಡ್ಡಿ ಗೌರವ ವಂದನೆ ಸ್ವೀಕರಿಸಿದರು.
ಮಂಗಳೂರಿನ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆ ಮೈದಾನದಲ್ಲಿ ಸೋಮವಾರ ನಡೆದ ಜಿಲ್ಲಾ ಪೊಲೀಸ್‌ ನೂತನ ಕಾನ್‌ಸ್ಟೆಬಲ್‌ಗಳ ನಿರ್ಗಮನ ಪಥ ಸಂಚಲನದಲ್ಲಿ ನೇಮಕಾತಿ ಮತ್ತು ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕೆ.ಎಸ್‌.ಆರ್‌.ಚರಣ್‌ ರೆಡ್ಡಿ ಗೌರವ ವಂದನೆ ಸ್ವೀಕರಿಸಿದರು.   

ಮಂಗಳೂರು: ‘ಮುಂದಿನ ದಿನಗಳಲ್ಲಿ ಪೊಲೀಸ್‌ ಇಲಾಖೆಯಲ್ಲಿ ಹೆಚ್ಚಿನ ಸಂಖ್ಯೆಯ ನೇಮಕಾತಿ ನಡೆಸಲು ನಿರ್ಧರಿ ಸಿದ್ದು, ಅದಕ್ಕೆ ಪೂರಕವಾಗಿ ಪೊಲೀಸ್‌ ಅಕಾಡೆಮಿ ಅಧೀನದಲ್ಲಿರುವ ರಾಜ್ಯದ ಎಲ್ಲ 12 ಪೊಲೀಸ್‌ ತರಬೇತಿ ಶಾಲೆಗಳ ಬಲವರ್ಧನೆ ಮಾಡಲಾಗುವುದು’ ಎಂದು ನೇಮಕಾತಿ ಮತ್ತು ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಕೆ.ಎಸ್‌.ಆರ್‌.ಚರಣ್‌ ರೆಡ್ಡಿ ಹೇಳಿದರು.

ನಗರದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ (ಡಿಎಆರ್‌) ಮೈದಾ ನದಲ್ಲಿ ಸೋಮವಾರ ನಡೆದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವಿಭಾಗದ 95 ಪೊಲೀಸ್‌ ಕಾನ್‌ಸ್ಟೆಬಲ್‌ಗಳ ನಿರ್ಗಮನ ಪಥ ಸಂಚಲನ ಸಮಾರಂಭದಲ್ಲಿ ಗೌರವ ವಂದನೆ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.

ಈಗ ಪ್ರತಿಯೊಂದು ತರಬೇತಿ ಶಾಲೆಯಲ್ಲಿ ತಲಾ 5,000 ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಅದನ್ನು 7,000ಕ್ಕೆ ಹೆಚ್ಚಿಸಲಾಗುವುದು. ಮುಂ ದಿನ ದಿನಗಳಲ್ಲಿ ತಾತ್ಕಾಲಿಕ ತರಬೇತಿ ಶಾಲೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊ ಳಿಸಲಾಗುವುದು ಎಂದರು.

ADVERTISEMENT

ಕಳೆದ ವರ್ಷ ಹೆಚ್ಚಿನ ಸಂಖ್ಯೆಯ ನೇಮಕಾತಿ ಮಾಡಲಾಗಿತ್ತು. ಇದ ರಿಂದಾಗಿ ಅಕಾಡೆಮಿಯ ತರಬೇತಿ ಶಾಲೆಗಳಲ್ಲಿ ಸ್ಥಳಾವಕಾಶದ ಕೊರತೆಯಾಗಿತ್ತು. ಮಂಗಳೂರು ಸೇರಿದಂತೆ ಕೆಲವು ಕಡೆಗಳಲ್ಲಿ ತಾತ್ಕಾಲಿಕ ತರಬೇತಿ ಶಾಲೆಗಳನ್ನು ತೆರೆಯಲಾಗಿತ್ತು. ಆಯಾ ಜಿಲ್ಲೆಗಳ ಎಸ್‌ಪಿಗಳ ನೇತೃತ್ವದಲ್ಲಿ ಈ ಶಾಲೆಗಳಲ್ಲಿ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಮುಂದೆ ಎಸ್‌ಪಿಗಳ ಮೇಲೆ ಹೆಚ್ಚಿನ ಹೊರೆ ಹೇರಲು ಬಯಸುವುದಿಲ್ಲ. ಅಗತ್ಯಕ್ಕೆ ತಕ್ಕಂತೆ ತರಬೇತಿ ಶಾಲೆ ಗಳು ಮತ್ತು ಅಕಾಡೆಮಿಗಳನ್ನು ಬಲಪಡಿ ಸಲಾಗುವುದು ಎಂದು ತಿಳಿಸಿದರು.

‘ಪೊಲೀಸ್‌ ತರಬೇತಿ ಶಾಲೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ₹ 200 ಕೋಟಿ ಅನುದಾನ ಕೋರಿ ಬೇಡಿಕೆ ಸಲ್ಲಿಸಲಾಗಿದೆ. ಈ ವರ್ಷದ ಬಜೆಟ್‌ನಲ್ಲಿ ₹ 35 ಕೋಟಿ ಒದಗಿಸುವಂತೆ ಪ್ರಸ್ತಾವ ಸಲ್ಲಿಸಿದ್ದೇವೆ’ ಎಂದರು.

ಇಲಾಖೆ ಸೇರಲು ನಿರಾಸಕ್ತಿ: ಇದಕ್ಕೂ ಮೊದಲು ಇಲಾಖೆ ಸೇರುತ್ತಿರುವ ಕಾನ್‌ ಸ್ಟೆಬಲ್‌ಗಳನ್ನುದ್ದೇಶಿಸಿ ಮಾತನಾಡಿದ ಅವರು, ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್‌ ಇಲಾಖೆ ಸೇರಲು ಆಸಕ್ತಿ ತೋರುವವರ ಸಂಖ್ಯೆ ಕಡಿಮೆ ಇದೆ. ಇಲಾಖೆಯಲ್ಲಿ ಈ ಜಿಲ್ಲೆಯ ಪ್ರಾತಿನಿಧ್ಯ ಕಡಿಮೆಯಾಗುತ್ತಿದೆ. ಪೊಲೀಸ್‌ ಬಲದಲ್ಲಿ ಎಲ್ಲ ಜಿಲ್ಲೆಗಳ ಪ್ರಾತಿನಿಧ್ಯ ಸಮಬಲದಲ್ಲಿ ಇದ್ದರೆ ಉತ್ತಮವಾಗಿರುತ್ತದೆ. ಅದಕ್ಕೆ ಪೂರಕವಾಗಿ ಇಲಾಖೆಯ ಅಧಿಕಾರಿಗಳು ಯುವಜನರಿಗೆ ಪ್ರೇರೇಪಣೆ ನೀಡಬೇಕು’ ಎಂದು ಸಲಹೆ ನೀಡಿದರು.

‘ಇದು ದೇಶದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಜಿಲ್ಲೆ. ಇಲ್ಲಿ ನೀವು ಪೊಲೀಸ್‌ ಇಲಾಖೆಯ ಪ್ರತಿನಿಧಿಗಳಾಗಿ ಕೆಲಸ ಆರಂಭಿಸುತ್ತಿದ್ದೀರಿ. ಕಾನೂನಿನ ಪ್ರಕಾರ ಹೊಣೆಗಾರಿಕೆಯಿಂದ ಕೆಲಸ ಮಾಡಿ. ಸಮಾಜ, ಸರ್ಕಾರ ಮತ್ತು ಮಾಧ್ಯಮಗಳು ನಿಮ್ಮ ಮೇಲೆ ನಿಗಾ ಇರಿಸಿರುತ್ತವೆ. ಜನಸ್ನೇಹಿ ಪೊಲೀಸ್‌ ವ್ಯವಸ್ಥೆ ಜಾರಿ ಮತ್ತು ಕಾನೂನು ಸುವ್ಯ ವಸ್ಥೆ ನಿಯಂತ್ರಣಕ್ಕಾಗಿ ಶ್ರಮಿಸಿ’ ಎಂದು ಹೊಸ ಕಾನ್‌ಸ್ಟೆಬಲ್‌ಗಳಿಗೆ ಕಿವಿಮಾತು ಹೇಳಿದರು.

ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್, ದಕ್ಷಿಣ ಕನ್ನಡ ಎಸ್‌ಪಿ ಡಾ.ಬಿ.ಆರ್‌.ರವಿಕಾಂತೇಗೌಡ, ಮಂಗ ಳೂರು ನಗರ ಕಾನೂನು ಸುವ್ಯವಸ್ಥೆ ಡಿಸಿಪಿ ಹನುಮಂತರಾಯ, ಹೆಚ್ಚುವರಿ ಎಸ್‌ಪಿ ವಿ.ಜೆ.ಶ್ರೀಜಿತ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.