ಮಂಗಳೂರು: ಆಂಧ್ರಪ್ರದೇಶದ ಮುಖ್ಯಮಂತ್ರಿಯ ಪರಿಹಾರ ನಿಧಿಯಿಂದ ₹117 ಕೋಟಿ ವಂಚಿಸಲು ಯತ್ನಿಸಿದ ಆರೋಪದಲ್ಲಿ ಬಂಧಿತರಾದ ಜಿಲ್ಲೆಯ 6 ಮಂದಿಯನ್ನು ಆಂಧ್ರಪ್ರದೇಶ ಎಸಿಬಿ ತಂಡವು ಮಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ಮತ್ತೆ ಕಸ್ಟಡಿಗೆ ಪಡೆದು ಆಂಧ್ರಪ್ರದೇಶಕ್ಕೆ ಕರೆದೊಯ್ದಿದೆ.
ಮೂಡುಬಿದಿರೆಯ ಯೋಗೀಶ್ ಆಚಾರ್ಯ, ಉದಯ ಶೆಟ್ಟಿ ಕಾಂತಾವರ, ಮಂಗಳೂರಿನ ಬ್ರಿಜೇಶ್ ರೈ, ಬೆಳ್ತಂಗಡಿಯ ಗಂಗಾಧರ ಸುವರ್ಣ ಸೇರಿದಂತೆ 6 ಮಂದಿಯನ್ನು ಬಂಧಿಸಲಾಗಿದೆ.
ಆಂಧ್ರ ಪ್ರದೇಶದ ಮುಖ್ಯಮಂತ್ರಿ ಪರಿಹಾರ ನಿಧಿ ವಂಚನೆಯ ಬಗ್ಗೆ ಆಂಧ್ರಪ್ರದೇಶ ಕಂದಾಯ ಇಲಾಖೆ ಸಹಾಯಕ ಕಾರ್ಯದರ್ಶಿ ಪಿ.ಮುರಳಿಕೃಷ್ಣ ರಾವ್ ನೀಡಿದ ದೂರಿನ ಆಧಾರದ ಮೇಲೆ ಸೆ. 21ರಂದು ತಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿ ಶ್ರೀನಿವಾಸ್ ರೆಡ್ಡಿ ತನಿಖೆ ನಡೆಸಿದ್ದರು.
ಮೂಡುಬಿದಿರೆಯ ಎಸ್ಬಿಐ ಬ್ಯಾಂಕ್ನಲ್ಲಿರುವ ಖಾತೆಗೆ ಯೋಗೀಶ್ ಆಚಾರ್ಯ ₹52 ಕೋಟಿ ಚೆಕ್ ಹಾಕಿದ್ದು, ನಗದು ವರ್ಗಾವಣೆ ಮಾಡುವ ವೇಳೆಗೆ ಈ ಚೆಕ್ ತಡೆಹಿಡಿಯುವಂತೆ ಆಂಧ್ರ ಎಸಿಬಿಯಿಂದ ಬ್ಯಾಂಕ್ಗೆ ಮಾಹಿತಿ ಬಂದಿತ್ತು. ಕೂಡಲೇ ಆಂಧ್ರ ಎಸಿಬಿ ಮತ್ತು ವಿಶೇಷ ತನಿಖಾ ತಂಡ ಮೂಡುಬಿದಿರೆಗೆ ಬಂದು, ಯೋಗೀಶ್ ಆಚಾರ್ಯನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಯೋಗೀಶ್ ಆಚಾರ್ಯ ನೀಡಿದ ಮಾಹಿತಿ ಮೇರೆಗೆ ಇತರ 5 ಮಂದಿಯನ್ನು ಬಂಧಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.