
ಪುತ್ತೂರು ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಸಮೀಪದ ಗಾಂಧಿಕಟ್ಟೆಯ ಬಳಿ ಅಳವಡಿಸಿದ್ದ ಬ್ಯಾನರ್
ಪುತ್ತೂರು: ಅಂಬೇಡ್ಕರ್ ಭಾವಚಿತ್ರದೊಂದಿಗೆ ಅಳವಡಿಸಿದ್ದ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ ಉದ್ಘಾಟನಾ ಸಮಾರಂಭಕ್ಕೆ ಸಂಬಂಧಿಸಿದ ಬ್ಯಾನರ್ ತೆರವುಗೊಳಿಸಿದ್ದು, ದಲಿತ ಸಂಘಟನೆಗಳ ವಿರೋಧ ವ್ಯಕ್ತವಾಗುತ್ತಿದ್ದಂತೆ ನಗರಸಭೆಯ ಅದೇ ಸ್ಥಳದಲ್ಲಿ ಬ್ಯಾನರ್ ಅಳವಡಿಸಿದ್ದಾರೆ.
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಸಮೀಪದ ಗಾಂಧಿಕಟ್ಟೆಯ ಬಳಿ ನಗರಸಭೆಯ ಅನುಮತಿ ಪಡೆದು ಬ್ಯಾನರ್ ಅಳವಡಿಸಲಾಗಿತ್ತು.
ದಲಿತ ಸಂಘಟನೆಗಳ ಮುಖಂಡರಾದ ರಾಜು ಹೊಸ್ಮಠ, ಚಂದ್ರಶೇಖರ್ ಪಲ್ಲತ್ತಡ್ಕ, ಸತೀಶ್ ಬೂರ್ಮಕ್ಕಿ, ರಾಘವ ಕಲಾರ, ಮೀನಾಕ್ಷಿ ಬಾಲಕೃಷ್ಣ ಡಿ.ಪಿ ದೊಡ್ಡೇರಿ ಅವರು ಶನಿವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ಅಂಬೇಡ್ಕರ್ ಚಿತ್ರ ಇದ್ದ ಬ್ಯಾನರನ್ನು ಉದ್ದೇಶಪೂರ್ವಕವಾಗಿ ನಗರಸಭೆಯವರು ತೆರವುಗೊಳಿಸಿರುವುದು ಖಂಡನೀಯ. ನಗರಸಭೆಯ ಅಧಿಕಾರಿ ಹಾಗೂ ಸಿಬಂದಿ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದರು.
ನಗರಸಭೆಯ ಅನುಮತಿ ಪಡೆದು ಹಣ ಪಾವತಿಸಿ ಬ್ಯಾನರ್ ಅಳವಡಿಸಿದ್ದೇವೆ. ಸಮಸ್ಯೆ ಕಂಡುಬಂದರೆ ಮಾಹಿತಿ ನೀಡಬೇಕಾಗಿತ್ತು. ಆದರೆ, ಮಾಹಿತಿ ನೀಡದೆ ಬ್ಯಾನರ್ ತೆರವುಗೊಳಿಸಲಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ಬ್ಯಾನರ್ ಕಾಣೆಯಾಗಿದೆ ಎಂದು ನಗರಸಭೆಯವರು ತಿಳಿಸಿದ್ದಾರೆ. ನಗರಸಭೆಯ ಅಧಿಕಾರಿ ವರ್ಗವೇ ಈ ಬ್ಯಾನರ್ ತೆರವುಗೊಳಿಸಿದೆ. ಅಂಬೇಡ್ಕರ್ ಹೆಸರಿಗೆ ಕಳಂಕ-ಧಕ್ಕೆ ತರುವ ಕೆಲಸ ಹಾಗೂ ದಲಿತ ಸಮುದಾಯಕ್ಕೆ ಅಪಮಾನ ಮಾಡುವ ಪ್ರಕ್ರಿಯೆ ನಗರಸಭೆಯ ಅಧಿಕಾರಿಗಳಿಂದ ಆಗಿದೆ ಎಂದು ಅವರು ಆರೋಪಿಸಿದ್ದರು.
ಮುಖಂಡರು ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆಯೇ ನಗರಸಭೆಯವರು ಅದೇ ಸ್ಥಳದಲ್ಲಿ ಬ್ಯಾನರ್ ಅಳವಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.